ಸಾರಾಂಶ
ಅಂತಿಮ ಹಂತದ ಪರಿಶೀಲನ ಬಳಿಕ ಮತಯಂತ್ರ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ನಿಯೋಜಿತ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಲೋಕಸಭಾ ಕ್ಷೇತ್ರದಲ್ಲಿ ಏ.26ರಂದು ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ದ.ಕ.ಜಿಲ್ಲೆಯ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಮತದಾನ ಕೇಂದ್ರಗಳಿಗೆ ಮತಪೆಟ್ಟಿಗೆ ಒಯ್ಯುವ ಮಸ್ಟರಿಂಗ್ ಕಾರ್ಯ ನಡೆಯಿತು.ಜಿಲ್ಲೆಯ 8 ಕ್ಷೇತ್ರಗಳಲ್ಲೂ ಮಸ್ಟರಿಂಗ್ ನಡೆದಿದ್ದು, ಅಪರಾಹ್ನ ಮತಗಟ್ಟೆ ಸಿಬ್ಬಂದಿ ಮತ ಯಂತ್ರವನ್ನು ಬಿಗು ಭದ್ರತೆಯಲ್ಲಿ ಮತದಾನ ಕೇಂದ್ರಗಳಿಗೆ ಕೊಂಡೊಯ್ದರು.
ಬೆಳ್ತಗಂಡಿ ಎಸ್ಡಿಎಂ ಪಿಯು ಕಾಲೇಜು ಉಜಿರೆ, ಮೂಡುಬಿದಿರೆಯ ಮಹಾವೀರ ಪ್ರಥಮ ದರ್ಜೆ ಕಾಲೇಜು, ಮಂಗಳೂರು ಉತ್ತರ ಕ್ಷೇತ್ರಕ್ಕೆ ಸಂತ ಅಲೋಶಿಯಸ್ ಪಿಯು ಕಾಲೇಜು ಕೊಡಿಯಾಲಬೈಲ್, ಮಂಗಳೂರು ದಕ್ಷಿಣಕ್ಕೆ ಕೆನರಾ ಹೈಸ್ಕೂಲ್ ಉರ್ವ, ಮಂಗಳೂರು ಕ್ಷೇತ್ರಕ್ಕೆ ಮಂಗಳೂರು ವಿವಿ ಮಾನವಿಕ ಕೇಂದ್ರ ಕೊಣಾಜೆ, ಬಂಟ್ವಾಳದಲ್ಲಿ ಇನ್ಫಾಂಟ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಮೊಡಂಕಾಪು, ಪುತ್ತೂರಿನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಸುಳ್ಯದಲ್ಲಿ ನೆಹರೂ ಸ್ಮಾರಕ ಕಾಲೇಜುಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು.ಮಸ್ಟರಿಂಗ್ ಕೇಂದ್ರಗಳಿಂದ ಅಧಿಕಾರಿ ಹಾಗೂ ಸಿಬ್ಬಂದಿ ಮತಗಟ್ಟೆಗೆ ಬೇಕಾದ ಎಲ್ಲ ಪರಿಕರಗಳೊಂದಿಗೆ ತೆರಳಿದರು. ಅಂತಿಮ ಹಂತದ ಪರಿಶೀಲನ ಬಳಿಕ ಮತಯಂತ್ರ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ನಿಯೋಜಿತ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗೆ ನೀಡಲಾಗಿದೆ. ಎಲ್ಲರೂ ತಮ್ಮ ಕರ್ತವ್ಯದ ಸ್ಥಾನಗಳಿಗೆ ತೆರಳಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್ ತಿಳಿಸಿದರು.