ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸರ್ಕಾರಗಳು ಮಾಡದ ಕೆಲಸಗಳನ್ನು ನಮ್ಮ ಮಠ-ಮಾನ್ಯಗಳು ಮಾಡುತ್ತಿವೆ, ಅವುಗಳಲ್ಲಿ ಹಿರೇಕಲ್ಮಠವು ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ಜಿಪಂ ಮಾಜಿ ಅಧ್ಯಕ್ಷೆ ಶೀಲಾ ಗದ್ದಿಗೇಶ್ ತಿಳಿಸಿದರು.ಪಟ್ಟಣದ ಹಿರೇಕಲ್ಮಠದಲ್ಲಿ 10ನೇ ದಿನದ ದಸರಾ ಮತ್ತು ಶರನ್ನವರಾತ್ರಿ ಮಹೋತ್ಸವದ ಧರ್ಮಸಭೆಯಲ್ಲಿ ಮಾತನಾಡಿದರು.
ಲಿಂ.ಶ್ರೀಗಳವರು ನಡೆದ ದಾರಿಯಲ್ಲೇ ಈಗಿನ ಶ್ರೀಗಳು ಅಕ್ಷರ, ಅನ್ನದಾಸೋಹದ ಜೊತೆಗೆ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿಯೂ ಈ ಭಾಗದ ಭಕ್ತರಿಗೆ ಸೇವೆ ನೀಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀಮಠಕ್ಕೆ ಸಹಕಾರ ನೀಡಬೇಕಾಗಿ ಮನವಿ ಮಾಡಿದರು.ಚನ್ನಕಿರಣ ಪ್ರಶಸ್ತಿಗೆ ಭಾಜನರಾದ ಹಿರೇಕಲ್ಮಠದ ಪ್ರಧಾನ ಧರ್ಮ ಕಾರ್ಯಕರ್ತ ಎಚ್.ಎಂ.ಅನ್ನದಾನಯ್ಯ ಶಾಸ್ತ್ರಿ ಮಾತನಾಡಿ, ತಾವು 1973ರಲ್ಲಿ ಲಿಂ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪೂರ್ವಾಶ್ರಮದ ಸಹೋದರ ವಿಶ್ವನಾಥ್ ತಮ್ಮನ್ನು ಶ್ರೀಮಠಕ್ಕೆ ಕರೆದುಕೊಂಡು ಬಂದಿದ್ದು, ಅಂದಿನಿಂದ ಇಲ್ಲಿಯವರೆಗೂ ಸುದೀರ್ಘ 53 ವರ್ಷ ಶ್ರೀಮಠದಲ್ಲಿ ಧಾರ್ಮಿಕ ಸೇವೆ ಸಲ್ಲಿಸಲು ಅವಕಾಶ ಒದಗಿ ಬಂದದ್ದು ತಮ್ಮ ಪೂರ್ವ ಜನ್ಮದ ಪುಣ್ಯವೆಂದರು.
ಮತ್ತೊಬ್ಬ ಚನ್ನಕಿರಣ ಪ್ರಶಸ್ತಿ ಭೂಷಿತ ಚನ್ನಚೇತನ ಬೋರ್ವೆಲ್ ಏಜೆನ್ಸಿಯ ಮಾಲೀಕ ಕಡದಕಟ್ಟೆ ಗ್ರಾಪಂ ಮಾಜಿ ಸದಸ್ಯ ದಾನಪ್ಪ ಮಾತನಾಡಿ, ಅನೇಕ ಪವಾಡಗಳ ಮೂಲಕ ಶ್ರೀಮಠ ತನ್ನ ಭಕ್ತಾದಿಗಳಿಗೆ ಆರೋಗ್ಯ, ಐಶ್ವರ್ಯ, ಸ್ಥಾನ-ಮಾನ ನೀಡಿದೆ ಎಂದು ಶ್ಲಾಘಿಸಿದರು.ಹಿರೇಕಲ್ಮಠಕ್ಕೆ ಶ್ರಧ್ಧಾ-ಭಕ್ತಿಯಿಂದ ಧಾರ್ಮಿಕವಾಗಿ, ಸಾಮಾಜಿಕವಾಗಿ ಗಣನೀಯ ಸೇವೆ ಸಲ್ಲಿಸಿರುವ ಮಠದ ಪ್ರಧಾನ ಧರ್ಮ ಕಾರ್ಯಕರ್ತ ಎಚ್.ಎಂ.ಅನ್ನದಾನಯ್ಯ ಶಾಶ್ತ್ರಿ, ಪಟ್ಟಣದ ಖ್ಯಾತ ವರ್ತಕ ಕೆ.ಜಿ.ರುದ್ರಪ್ಪ, ಚನ್ನಚೇತನ ಬೋರ್ವೆಲ್ ಏಜೆನ್ಸಿ ಮಾಲೀಕರಾದ ಕಡದಕಟ್ಟೆ ಮೀನಾಕ್ಷಮ್ಮ ದಾನಪ್ಪ ಇವರಿಗೆ ಹಿರೇಕಲ್ಮಠದ ವತಿಯಿಂದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳವರು ಮತ್ತು ವೇದಿಕೆಯಲ್ಲಿದ್ದ ಗಣ್ಯರು ಚನ್ನಕಿರಣ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿಯ ಜತೆಗೆ ಬಿಳಿ ಸಮವಸ್ತ್ರ, ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಲಾಯಿತು
ಜಕ್ಕಲಿ-ಬಿದರಗಡ್ಡೆ-ಹಾರನಹಳ್ಳಿ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆರ್ಶೀವಚನ ನೀಡಿದರು. ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಮಂಜುನಾಥ ದೇವರು ಶ್ರೀ ದೇವಿ ಪುರಾಣ ಪ್ರವಚನ ನಡೆಸಿಕೊಟ್ಟರು. ಕೆ.ಆರ್.ಮ್ಯೂಸಿಕಲ್ ತಂಡದವರ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಮಠದ ಸೇವಾಕರ್ತರಿಗೆ ಗುರು ರಕ್ಷೆ ನೀಡಿ ಸನ್ಮಾನಿಸಲಾಯಿತು. ಬಿ.ಜಿ.ಹಿರೇಮಠ ಸ್ವಾಗತಿಸಿ, ವಿದ್ಯಾಸಂತೋಷ್ ನಿರೂಪಿಸಿ-ವಂದಿಸಿದರು.
ಚನ್ನಪ್ಪ ಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರು ಮಠ, ನಿರ್ದೇಶಕರಾದ ಕೋರಿ ಮಲ್ಲಿಕಾರ್ಜುನಪ್ಪ, ಎಚ್.ಆರ್.ಬಸವರಾಜಪ್ಪ, ಮಠದ ವ್ಯವಸ್ಥಾಪಕ ಎಂ.ಪಿ.ಎಂ.ಚನ್ನಬಸಯ್ಯ, ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೇರಿ ಸುರೇಶ್, ಭಕ್ತ ವೃಂದದ ಕೋರಿ ಗುರುಲಿಂಗಣ್ಣ, ಮುಖ್ಯಮಂತ್ರಿಗಳ ಪದವಿ ಪುರಸ್ಕೃತ ಗೃಹ ರಕ್ಷಕ ದಳದ ಮುಖ್ಯಸ್ಥ ಕೆ.ನಾಗರಾಜಪ್ಪ, ಕುಂಬಾರ್ ಸುರೇಶ್, ಎಚ್.ಎಂ.ರುದ್ರೇಶ್ ಮತ್ತಿತರರು ಹಾಜರಿದ್ದರು.