ಸಾರಾಂಶ
ಕನ್ನಡಪ್ರಭ ವಾರ್ತೆ ರಿಪ್ಪನಪೇಟೆ
ಲೋಕಸಭಾ ಚುನಾವಣೆಯ ಸವಾಲಾಗಿ ಸ್ವೀಕರಿಸಿದ್ದು ನಾನು ಮಾಡಿದ ಕಾರ್ಯಗಳು ಮತದಾರರ ಮನಮುಟ್ಟಿವೆ ಎಲ್ಲಾ ಸಮುದಾಯದವರು ಮತದಾರರು ನನಗೆ ಮತ್ತು ಪ್ರಧಾನಿ ಮೋದಿಯವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆಂದು ಸಂಸದ, ಶಿವಮೊಗ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.ಸಮೀಪದ ಕೋಣಂದೂರಿನ ಶ್ರೀ ಶಿವಲಿಂಗೇಶ್ವರ ಬೃಹನ್ಮಠಕ್ಕೆ ಭೇಟಿ ನೀಡಿ ಶಿವಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಕೋಣಂದೂರು ಮಠದ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದು ಮಾತನಾಡಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪನವರ ಪುತ್ರನಿಗೆ ಹಾವೇರಿ ಕ್ಷೇತ್ರದಲ್ಲಿ ಟಿಕೆಟ್ ಸಿಗದೆ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಸಲ್ಲದ ಮಾತುಗಳನ್ನಾಡುತ್ತಿರುವ ಈಶ್ವರಪ್ಪನವರು ಹಿರಿಯರು ಅವರ ಬಗ್ಗೆ ನಮಗೆ ಗೌರವವಿದೆ ಕೇಂದ್ರ ಸಮಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು ಇದರಲ್ಲಿ ನಮ್ಮ ತಂದೆ ಅಥವಾ ರಾಜ್ಯಾಧ್ಯಕ್ಷರ ಪಾತ್ರ ಏನು ಇಲ್ಲ. ಮುಂದಿನ ದಿನಗಳಲ್ಲಿ ಈಶ್ವರಪ್ಪನವರಿಗೆ ಎಲ್ಲವೂ ಅರ್ಥವಾಗುವುದೆಂದು ಹೇಳಿ ಪಶ್ಚಾತ್ತಾಪ ಪಡಬೇಕಾದ ದಿನಗಳು ದೂರವಿಲ್ಲ ಚುನಾವಣೆಯೇ ಉತ್ತರಿಸಲಿದೆ ಎಂದರು.
ಈ ಸಂದರ್ಭದಲ್ಲಿ ಕೋಣಂದೂರು ಮಠದ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಾಸಕ ಆರಗ ಜ್ಞಾನೇಂದ್ರ, ಕೆ.ಆರ್.ಪ್ರಕಾಶ್, ಶಂಕರಯ್ಯ ಶಾಸ್ತ್ರಿಗಳು ಹಾದಿಗಲ್ಲು, ಬಿಜೆಪಿ ಮುಖಂಡರಾದ ನವೀನ್, ಕುಕ್ಕೆ ಪ್ರಶಾಂತ, ವೀರಶೈವ ಸಮಾಜದ ಉಪಾಧ್ಯಕ್ಷ ಜಿ.ಎಂ.ದುಂಡರಾಜಗೌಡ, ವೀರೇಶ್ಅಲವಳ್ಳಿ, ಮಸರೂರು ಶಾಂತವೀರಪ್ಪ ಗೌಡ, ಎಚ್.ಎಂ.ವರ್ತೇಶ್, ನಾಗಾಭೂಷಣ ಬೆಳಂದೂರು, ಸ್ವಾಮಿಗೌಡನೆ ವಟೂರು, ಕಮದೂರು ರಾಜಶೇಖರ, ಪರಮೇಶ ಕಮದೂರು, ಶಾಂತಕುಮಾರ ಜಂಬಳ್ಳಿ, ಅಭಿ ಬಿ.ಈ.ಕಿರಣ ಬೇಹಳ್ಳಿ, ಶ್ರೀದೇವಿ ಕಿರಣ್, ರಾಜು ಕೋಣಂದೂರು, ಶಶಿಕುಮಾರ ಕೋಟೆಗದ್ದೆ, ರವಿ ಬಾಳೂರು, ದೊರೆಸ್ವಾಮಿ ಹುಳಗದ್ದ, ಗುರುಪಾದಪ್ಪ ಅಮೃತ ಇನ್ನಿತರ ಹಲವು ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.ಹೆಚ್ಚಿನ ಅಂತರದಲ್ಲಿ ಗೆಲ್ಲುವ ವಾತಾವರಣವಿದೆ
ಕಾಂಗ್ರೆಸ್ ಮತ್ತು ಪಕ್ಷೇತರ ಆಭ್ಯರ್ಥಿಗಳಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ ಸವಾಲುಗಳ ಸಮರ್ಥವಾಗಿ ಎದುರಿಸಿ ಕಳೆದ ಬಾರಿಗಿಂತ ಅಧಿಕ ಮತಗಳ ಅಂತರದಲ್ಲಿ ಗೆಲ್ಲುವ ಬಗ್ಗೆ ವಾತಾವರಣ ಚೆನ್ನಾಗಿದೆ ಎಂಬುದಕ್ಕೆ ನಾನು ಹೋದ ಕಡೆಯಲ್ಲಿ ಸಣ್ಣ ಸಮುದಾಯದವರಿಂದ ಹಿಡಿದು ಇತರ ಎಲ್ಲ ಸಮುದಾಯದವರು ಹೆಚ್ಚು ಬೆಂಬಲಿಸುತ್ತಿದ್ದಾರೆಂದು ಹೇಳುವುದರೊಂದಿಗೆ ಈ ಬಾರಿ ಚುನಾವಣೆಯ ಸವಾಲಾಗಿ ಸ್ವೀಕರಿಸಿ ಈಜಿ ದಡ ಸೇರುವ ಕಾರ್ಯದಲ್ಲಿ ಕಾರ್ಯಕರ್ತರ ತಂಡ ಸಿದ್ಧವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.ಈಶ್ವರಪ್ಪ ಬದಲಾವಣೆಗೆ ಕಾರಣ ನನಗೆ ಅರ್ಥವಾಗುತ್ತಿಲ್ಲ: ಬಿ.ವೈ.ರಾಘವೇಂದ್ರಕನ್ನಡಪ್ರಭ ವಾರ್ತೆ ಶಿವಮೊಗ್ಗ
ಈಶ್ವರಪ್ಪ ಅವರು ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಹಾಳಾಗಿದೆ ಎನ್ನುತ್ತಿರುವುದು ನೋವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಶ್ವರಪ್ಪ ಅವರು ಎರಡು ವಾರದ ಕೆಳಗೆ ರಾಘಣ್ಣ ನೆಚ್ಚಿನ ಸಂಸದ. ಅವರನ್ನು ಹೆಚ್ಚಿನ ಮತದಿಂದ ಗೆಲ್ಲಿಸಬೇಕು ಎಂದು ಆಶೀರ್ವಾದ ಮಾಡಿದ್ದರು. ಈಗ ಅವರ ಬದಲಾವಣೆಗೆ ಕಾರಣ ನನಗಂತೂ ಅರ್ಥವಾಗುತ್ತಿಲ್ಲ ಇದಕ್ಕೆಲ್ಲ ಮುಂದಿನ ದಿನದಲ್ಲಿ ಮತದಾರರೇ ಉತ್ತರ ಕೊಡುತ್ತಾರೆ ಎಂದರು.
ಯಡಿಯೂರಪ್ಪ ಅವರ ಜೊತೆ ಸೇರಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಈಶ್ವರಪ್ಪ ಅವರ ಪಾತ್ರ ಹಿರಿದು. ಆದರೆ, ಇತ್ತೀಚೆಗೆ ಕಾರ್ಯಕರ್ತರ ಸಭೆ ಕರೆದು ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕೇಂದ್ರ ನಾಯಕರು ಹಾಗೂ ಯಡಿಯೂರಪ್ಪ ಅವರಿಗೆ ಸಂದೇಶ ನೀಡುತ್ತೇನೆ ಎಂದು ಈಶ್ವರಪ್ಪ ಬಹಿರಂಗವಾಗಿ ಹೇಳಿದ್ದಾರೆ. ಅದೇ ರೀತಿ, ಪ್ರಧಾನಿ ಮೋದಿ ಬಗ್ಗೆ ಗೌರವವಿದೆ. ಆದರೆ, ಹೈಕಮಾಂಡ್ ಗೆ ಬುದ್ಧಿ ಕಲಿಸುತ್ತೇನೆ ಎಂದೂ ಹೇಳಿದ್ದಾರೆ. ಆದ್ದರಿಂದ, ಈಶ್ವರಪ್ಪ ಅವರ ದ್ವಂದ್ವ ನಿಲುವು ತಿಳಿಯುತ್ತಿಲ್ಲ ಎಂದರು.
ಕಾಂಗ್ರೆಸ್ನವರು ವೈಯಕ್ತಿಕ ಟೀಕೆ ಬಿಡಬೇಕು:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆಯುತ್ತಿದೆ. ಹಾಲು ಉತ್ಪಾದಕರಿಗೆ ಬಾಕಿ ಹಣ ಹಾಕಿಲ್ಲ. ಬರಗಾಲದಲ್ಲಿ ರೈತರಿಗೆ ಪೂರಕ ಯೋಜನೆ ತರಲಿಲ್ಲ. ಇನ್ನಾದರೂ ತಪ್ಪು ತಿದ್ದುಕೊಳ್ಳದಿದ್ದರೆ ಚುನಾವಣೆಯಲ್ಲಿ ಜನರೇ ನಿಮಗೆ ಉತ್ತರ ಕೊಡುತ್ತಾರೆ. ಬರಗಾಲ ವೇಳೆ ರೈತರಿಗೆ ಎರಡು ಸಾವಿರ ರುಪಾಯಿ ಕೊಟ್ಟಿದ್ದೀರಿ. ಈ ಹಿಂದೆ ಯಡಿಯೂರಪ್ಪ ಅವರು ಕೃಷಿ ಸನ್ಮಾನ್ ಯೋಜನೆಯಡಿ 4 ಸಾವಿರ ರುಗಳ ನಿಲ್ಲಿಸಿ, ಈಗ ಕಾಟಚಾರಕ್ಕೆ 2 ಸಾವಿರು ರು, ಕೊಟ್ಟು ನಾವು ರೈತರ ಪರ ಎಂದು ತೋರಿಸಿಕೊಳ್ಳುವ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಚುನಾವಣೆಯು ರಾಷ್ಟ್ರದ ವಿಚಾರ, ಹಿಂದುತ್ವ ವಿಚಾರ ಇಟ್ಟುಕೊಂಡು ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ನವರು ವೈಯಕ್ತಿಯವಾಗಿ ಟೀಕೆ ಮಾಡುತ್ತಿರುವುದು ಸರಿಯಲ್ಲ. ಎಚ್.ಡಿ.ಕುಮಾರಸ್ವಾಮಿ ಚುನಾವಣೆ ಸಂದರ್ಭದಲ್ಲಿ ಹಾರ್ಟ್ ಆಪರೇಷನ್ ಮಾಡಿಸಿ ಬರುತ್ತಾರೆ ಎಂದು ಹಗುರವಾಗಿ ಮಾತನಾಡುತ್ತಿದ್ದಾರೆ. ವೈಯಕ್ತಿಕವಾಗಿ ಟೀಕೆ ಮಾಡುವುದನ್ನು ಕಾಂಗ್ರೆಸ್ ನಾಯಕರು ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.