ಶಾಶ್ವತ ಅಭಿವೃದ್ಧಿಗಾಗಿ ಸಮಗ್ರ ಯೋಜನೆ

| Published : Aug 23 2024, 01:17 AM IST

ಸಾರಾಂಶ

ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರ ಕಾರ್ಯ ಚಟುವಟಿಕೆಗಳ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಮೈಸೂರುಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತನ್ನ ಮೂಲ ಸ್ವರೂಪ ಬಿಟ್ಟುಕೊಡದೇ ಕಾಲಕ್ಕೆ ತಕ್ಕಂತೆ ತನ್ನ ಕರ್ತವ್ಯ ಸುಧಾರಿಸಿಕೊಳ್ಳುತ್ತ ಮುನ್ನಡೆಯುತ್ತಿದೆ ಎಂದು ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್. ಅನಿಲ್‌ ಕುಮಾರ್‌ ತಿಳಿಸಿದರು.ನಗರದ ವೈಷ್ಣವಿ ಕನ್ವೆನ್ಸನ್ ಹಾಲ್ ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಸಿಬ್ಬಂದಿಗೆ ಯಶಸ್ವಿ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರ ಕಾರ್ಯ ಚಟುವಟಿಕೆಗಳ ಕಾರ್ಯಾಗಾರದ 2ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯೋಜನೆಯಿಂದ ಕೃಷಿಕರಿಗೆ, ಮಹಿಳೆಯರಿಗೆ, ಯುವಕ ಯುವತಿಯರಿಗೆ, ದುಶ್ಚಟಗಳಿಂದ ಬಳಲುತ್ತಿರುವ ಜನರಿಗೆ, ಅನಾರೋಗ್ಯ ಪೀಡಿತರಿಗೆ, ದುಡಿಯುವ ಸಾಮಾರ್ಥ್ಯವಿಲ್ಲದವರಿಗೆ ಮತ್ತು ವಿದ್ಯಾರ್ಥಿ ವರ್ಗಕ್ಕೆ ಸೌಲಭ್ಯ ನೀಡುವ ಆಗರವಾಗಿದೆ. ಯೋಜನೆಯು ನಡೆದ ಬಂದದಾರಿಯ ಬಗ್ಗೆ ಕಾರ್ಯಕರ್ತರು ಅವಲೋಕನ ಮಾಡಿಕೊಂಡು ಮುಂದೆ ನಾವು ಸಾಗಬೇಕಾದ ದಾರಿಯ ಬಗ್ಗೆ ಚಿಂತನೆ ಮಾಡಬೇಕು ಎಂದರು.ಮಾಡುವ ಕೆಲಸದೊಂದಿಗೆ ನಮ್ಮ ಜೀವನ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಕೂಡ ಚಿಂತಿಸಬೇಕು. ನಮ್ಮ ಬದುಕನ್ನು ಪ್ರೀತಿಸುವಂತೆ ನಾವು ಮಾಡುವ ವೃತ್ತಿಯನ್ನು ಕೂಡ ಗೌರವಿಸಬೇಕು ಎಂದು ಅವರು ಹೇಳಿದರು.

ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸೇವೆ ನೀಡುವ ಮೇಲ್ವಿಚಾರಕರು ಗ್ರಾಮಗಳ ಅಭಿವೃದ್ಧಿ ಮಾಡುವಚಿಂತಕರು ಎಂದು ನಾವು ಭಾವಿಸಿಕೊಂಡು ಕೆಲಸ ಮಾಡಿದಾಗ ಗ್ರಾಮಗಳ ಸಮಗ್ರ ಅಭಿವೃದ್ಧಿಯೊಂದಿಗೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಚಿಂತನೆ ಮತ್ತು ಆಶಯವನ್ನು ಗ್ರಾಮಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಿಸಲು ಸಾಧ್ಯವಾಗುತ್ತಿದೆ ಎಂದರು.

ನಿವೃತ್ತ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮ ಮಾತನಾಡಿ, ಗ್ರಾಮ ಮಟ್ಟದಲ್ಲಿ ಸೇವೆ ಮಾಡುವ ಅಭಿಲಾಷೆಯೊಂದಿಗೆ ಸೇವೆ ಮಾಡುತ್ತಿರುವ ಸೇವಾ ಪ್ರತಿನಿಧಿಗಳಿಗೆ ಸರಿಯಾದ ತಿಳುವಳಿಕೆ ನೀಡಿ ಅವರನ್ನು ಪ್ರಬುದ್ಧರನ್ನಾಗಿ ಮಾಡಿ ಗ್ರಾಮಗಳ ಅಭಿವೃದ್ಧಿಗೆ ಇರುವ ಯೋಜನೆಗಳನ್ನು ಅವಕಾಶಗಳನ್ನಾಗಿ ಬಳಸಿಕೊಂಡು ಗ್ರಾಮೀಣ ಭಾಗದ ಸಮಸ್ಯೆಯನ್ನು ಪರಿಹಾರ ಮಾಡುವ ಸೈನಿಕರಂತೆ ಸಜ್ಜುಗೊಳಿಸಬೇಕು. ಸ್ವಸಹಾಯ ಸಂಘಗಳ ಸದಸ್ಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿವರ್ತನೆಯ ಜೊತೆಗೆ ಸಮುದಾಯದ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡುವಂತೆ ಅವರು ತಿಳಿಸಿದರು.

ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ, ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ, ಮಮತಾ ಹರೀಶ್ ರಾವ್, ಎಚ್.ಎಲ್. ಮುರಳೀಧರ್, ಜಯಕರ ಶೆಟ್ಟಿ, ಕೇಶವ ದೇವಾಂಗ, ಎಂ. ಚೇತನಾ, ಲತಾ ಬಂಗೇರ, ಕೆ. ಚಿದಾನಂದ ಹಾಗೂ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ, ಎಲ್ಲಾ ಸಿಬ್ಬಂದಿ ಇದ್ದರು.