ಹರಿಹರದಲ್ಲಿ ನಾಳೆಯಿಂದ ನಾಡಬಂದ್ ಷಾ ವಲಿ ಉರುಸ್: ದಾದಾಪೀರ್‌ ಮಾಹಿತಿ

| Published : May 27 2025, 01:00 AM IST / Updated: May 27 2025, 01:01 AM IST

ಸಾರಾಂಶ

ಪ್ರತಿ ವರ್ಷದಂತೆ ಮೇ ೨೮ರಿಂದ ೩ ದಿನಗಳ ಕಾಲ ಹಜರತ್ ಸೈಯದ್ ನಾಡಬಂದ್ ಷಾ ವಲಿ ಖಾದರಿ ಸಂದಲ್-ಓ-ಉರುಸ್ ಅದ್ಧೂರಿಯಾಗಿ ನಡೆಯಲಿದೆ ಎಂದು ಉರುಸ್ ಕಮಿಟಿ ಅಧ್ಯಕ್ಷ ದಾದಾಪೀರ್ ಭಾನುವಳ್ಳಿ ಹೇಳಿದ್ದಾರೆ.

- ಕಾರ್ಯಕ್ರಮದಲ್ಲಿ ೨೫ ಸಾವಿರ ಜನ ಸೇರುವ ನಿರೀಕ್ಷೆ

- - - ಹರಿಹರ: ಪ್ರತಿ ವರ್ಷದಂತೆ ಮೇ ೨೮ರಿಂದ ೩ ದಿನಗಳ ಕಾಲ ಹಜರತ್ ಸೈಯದ್ ನಾಡಬಂದ್ ಷಾ ವಲಿ ಖಾದರಿ ಸಂದಲ್-ಓ-ಉರುಸ್ ಅದ್ಧೂರಿಯಾಗಿ ನಡೆಯಲಿದೆ ಎಂದು ಉರುಸ್ ಕಮಿಟಿ ಅಧ್ಯಕ್ಷ ದಾದಾಪೀರ್ ಭಾನುವಳ್ಳಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹಳೇ ಪಿ.ಬಿ. ರಸ್ತೆಯಲ್ಲಿ ನಡೆಯಲಿರುವ ಉರುಸ್‌ನಲ್ಲಿ ಮೇ ೨೮ರಂದು ಮಧ್ಯಾಹ್ನ ೨.೩೦ ರಿಂದ ಗಂಧ (ಸಂದಲ್) ಕಾರ್ಯಕ್ರಮ ನಡೆಯಲಿದೆ. ಮೇ ೨೯ರಂದು ಉರುಸ್ ಶರೀಫ್ ನಡೆಯಲಿದೆ. ಮೇ ೩೦ರಂದು ಮಧ್ಯಾಹ್ನ ೨ ಗಂಟೆಯಿಂದ ಸಾರ್ವಜನಿಕರಿಗೆ ಪ್ರಸಾದ ಹಾಗೂ ಬದ್ ನಮಾಜ್ -ಎ-ಜುಮ್ಮಾ ಇರಲಿದೆ ಎಂದು ತಿಳಿಸಿದರು.

೩ ದಿನಗಳ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಎಸ್. ರಾಮಪ್ಪ, ಎಚ್.ಎಸ್. ಶಿವಶಂಕರ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎನ್.ಎಚ್. ಶ್ರೀನಿವಾಸ್ ನಂದಿಗಾವಿ, ಇನ್ವೆಟ್ ಐಎಎಸ್ ತರಬೇತಿ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಈ ಬಾರಿಯ ಸಂದಲ್-ಓ- ಉರುಸ್ ಹುಬ್ಬಳ್ಳಿಯ ಸೈಯದ್ ಅತಾವುಲ್ಲಾ ಷಾ ಆಲ್ ಮಾರುಫ್ ಪೀರ್ ಪಾಷ ಸೇರಿದಂತೆ ದರ್ಗಾ ಕಮಿಟಿ ಪದಾಧಿಕಾರಿಗಳು ಹರಿಹರ ತಾಲೂಕಿನ ಎಲ್ಲ ಸಂಸ್ಥೆಗಳ ಸಹಕಾರದೊಂದಿಗೆ ಆಚರಿಸಲಾಗುತ್ತಿದೆ. ಈ ಬಾರಿ ೨೦ರಿಂದ ೨೫ ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಮಿಟಿ ಉಪಾಧ್ಯಕ್ಷ ಡಿ.ಸೈಯದ್ ನಜೀರ್ ಅಹಮದ್, ಆಡಳಿತ ಮಂಡಳಿ ಕಾರ್ಯದರ್ಶಿ ಅಲಿ ಅಹಮದ್ ಹಾಕ್ಸಿ, ಗೌಸ್ ಖಾನ್, ಮಹಮ್ಮದ್ ಫಾರೂಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

- - - (ಸಾಂದರ್ಭಿಕ ಚಿತ್ರ)