ಪ್ರತಿಸ್ಪರ್ಧಿಯಿಲ್ಲದ ಕಾರಣ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆ

---ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ರಾಘವಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ ಮುಖಂಡರಾದ ಎಂ.ನಾಗೇಶ್‌, ಉಪಾಧ್ಯಕ್ಷರಾಗಿ ಶಿವಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಎಂ.ನಾಗೇಶ್‌, ಶಿವಣ್ಣ ನಾಮಪತ್ರ ಸಲ್ಲಿಸಿದರು. ಇತರೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ಅಧ್ಯಕ್ಷರಾಗಿ ಎಂ.ನಾಗೇಶ್‌, ಉಪಾಧ್ಯಕ್ಷರಾಗಿ ಶಿವಣ್ಣ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿ ಘೋಷಿಸಿದರು.ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರೂ ಆದ ಚಾಮುಲ್‌ ನಿರ್ದೇಶಕ ಎಚ್.ಎಸ್. ನಂಜುಂಡ ಪ್ರಸಾದ್‌ ಮಾತನಾಡಿ, ಸಂಘದ ಸಭಾಭವನಕ್ಕೆ ಚಾಮುಲ್‌ನಿಂದ ೩ ಲಕ್ಷ ರು. ಅನುದಾನ ನೀಡುವುದಾಗಿ ಭರವಸೆ ನೀಡಿದರು.

ನಮ್ಮ ಪಕ್ಷದ ಶಾಸಕರೇ ಇರುವ ಕಾರಣ ಶಾಸಕರ ನಿಧಿ ಪಡೆದು ಭವನ ನಿರ್ಮಿಸಬೇಕು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಒಳ್ಳೆಯ ಆಡಳಿತ ನೀಡುವ ಮೂಲಕ ಸಂಘದ ಪ್ರಗತಿಗೆ ದುಡಿಯಿರಿ ಎಂದರು.


ನೂತನ ಅಧ್ಯಕ್ಷ ಎಂ. ನಾಗೇಶ್‌ ಮಾತನಾಡಿ, ನನ್ನ ಮೇಲೆ ವಿಶ್ವಾಸ ಇರಿಸಿ ಅಧ್ಯಕ್ಷ ಸ್ಥಾನ ಜವಾಬ್ದಾರಿ ನೀಡಿದ್ದೀರಿ. ಆಡಳಿತ ಮಂಡಳಿ ಸಲಹೆ ಪಡೆದು ಉತ್ತಮ ಕೆಲಸ ಮಾಡಲು ಪ್ರಯತ್ನಿಸುವೆ ಎಂದರು.ನೂತನ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಚಾಮುಲ್‌ ನಿರ್ದೇಶಕರೂ ಆದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡ ಪ್ರಸಾದ್‌ರನ್ನು ರಾಘವಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಸನ್ಮಾನಿಸಿ ಅಭಿನಂದಿಸಿದರು.

ಸಂಘದ ನಿರ್ದೇಶಕರೂ ಆದ ನಿರ್ಗಮಿತ ಅಧ್ಯಕ್ಷ ಆರ್. ಶಂಭುಲಿಂಗ ಸ್ವಾಮಿ, ನಿರ್ದೇಶಕರಾದ ಶಂಕರಶೆಟ್ಟಿ, ಚಿಕ್ಕಮಾದಶೆಟ್ಟಿ, ಕೆ.ಶಿವಶಂಕರ್‌, ಮಹದೇವ ಶೆಟ್ಟಿ, ಜವರನಾಯಕ, ರಾಜಮ್ಮ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷರಾದ ಆರ್‌.ಎಸ್. ಗೋವಿಂದರಾಜು,ಆರ್‌.ಡಿ. ಉಲ್ಲಾಸ್‌, ಶಿವಮೂರ್ತಿ, ಮಾಜಿ ಸದಸ್ಯ ದ್ವಾರಕೀಶ್‌, ಮುಖಂಡರಾದ ನಾಗಸುಂದರ್‌, ಯಜಮಾನ ಸಿದ್ದಶೆಟ್ಟಿ, ಸಂಘದ ಮುಖ್ಯ ಕಾರ್ಯ ನಿರ್ವಾಹಕರಾದ ಮಹದೇವಸ್ವಾಮಿ, ಹಕ್ಕಲಪುರ ನಾಗೇಶ್‌, ಅಗತಗೌಡನಹಳ್ಳಿ ಮಹೇಂದ್ರ ಸೇರಿದಂತೆ ಸಂಘದ ಸದಸ್ಯರು ಇದ್ದರು.

---

ಅಪ್ಪನ ಹಾದಿಯಲ್ಲಿ ಮಗ

ಗುಂಡ್ಲುಪೇಟೆ: ಹಾಪ್‌ ಕಾಮ್ಸ್‌ ಅಧ್ಯಕ್ಷ ಎಂ. ನಾಗೇಶ್‌ ಗುರುವಾರ ತಾಲೂಕಿನ ರಾಘವಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಲೂಕಿನ ರಾಘವಾಪುರ ಗ್ರಾಮದ ಮೈಸೂರು ಜಿಲ್ಲಾ ಹಾಲು ಒಕ್ಕೂಟ (ಮೈಮುಲ್‌) ಮಾಜಿ ಅಧ್ಯಕ್ಷ, ಎಂಸಿಡಿಸಿಸಿ ಮಾಜಿ ಉಪಾಧ್ಯಕ್ಷ ಎನ್. ಮಹದೇವಪ್ಪ ಅವರ ಪುತ್ರ ಎಂ. ನಾಗೇಶ್‌ ಕೂಡ ಸಹಕಾರ ಕ್ಷೇತ್ರದಲ್ಲಿ ಕಾಲಿಟ್ಟ ಬಳಿಕ ಹಾಪ್‌ ಕಾಮ್ಸ್‌ ಅಧ್ಯಕ್ಷರಾಗಿದ್ದಾರೆ. ಇದೀಗ ತಾಲೂಕಿನ ರಾಘವಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

---

೨೬ಜಿಪಿಟಿ೨

ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಡೇರಿ ಅಧ್ಯಕ್ಷರಾಗಿ ಎಂ. ನಾಗೇಶ್‌, ಉಪಾಧ್ಯಕ್ಷರಾಗಿ ಶಿವಣ್ಣ ಅವಿರೋಧವಾಗಿ ಆಯ್ಕೆಯಾದರು.