ನಾಲ್ಮಡಿ ಕೃಷ್ಣರಾಜ ಒಡೆಯರ್ ಜೊತೆಯಲ್ಲಿ ದಿವಾನರಾಗಿ ಸೇವೆ ಸಲ್ಲಿಸಿರುವ ನಮ್ಮ ಜಿಲ್ಲೆಯ ಸರ್ ಎಂ. ವಿಶ್ವೇಶ್ವರಯ್ಯನವರು ಕನ್ನಡ ನಾಡಿನ ಅಭಿವೃದ್ಧಿಗೆ ಶಿಕ್ಷಣ, ಕೃಷಿ, ನೀರಾವರಿ ಮತ್ತಿತರ ಯೋಜನೆ ಜಾರಿಗೊಳಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಅವಧಿಯಲ್ಲಿ ಕೃಷ್ಣರಾಜ ಸಾಗರ ನಿರ್ಮಾಣ, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಕೃಷಿ ಬ್ಯಾಂಕ್ ಸ್ಥಾಪನೆ, ವಿದ್ಯುತ್ ಸಂಪರ್ಕ, ಮೈಸೂರು ವಿವಿ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಮುಂತಾದ ಕಾರ್ಯಯೋಜನೆಗಳನ್ನು ಜಾರಿಗೊಳಿಸಿದರು
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕಗಳ ವತಿಯಂದ ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಆಧುನಿಕ ಮೈಸೂರು ರಾಜ್ಯದ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕನ್ನಡದ ಪ್ರಥಮ ಸಾಮ್ರಾಜ್ಯದ ಪಿತಾಮಹ ಮಯೂರ ವರ್ಮರ ಜನ್ಮದಿನ ಆಚರಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ.ವಿ. ಹಾಗೂ ಪಂಚಗಿರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್, ನಾಲ್ಮಡಿ ಕೃಷ್ಣರಾಜ ಒಡೆಯರ್ ಜೊತೆಯಲ್ಲಿ ದಿವಾನರಾಗಿ ಸೇವೆ ಸಲ್ಲಿಸಿರುವ ನಮ್ಮ ಜಿಲ್ಲೆಯ ಸರ್ ಎಂ. ವಿಶ್ವೇಶ್ವರಯ್ಯನವರು ಕನ್ನಡ ನಾಡಿನ ಅಭಿವೃದ್ಧಿಗೆ ಶಿಕ್ಷಣ, ಕೃಷಿ, ನೀರಾವರಿ ಮತ್ತಿತರ ಯೋಜನೆ ಜಾರಿಗೊಳಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಅವಧಿಯಲ್ಲಿ ಕೃಷ್ಣರಾಜ ಸಾಗರ ನಿರ್ಮಾಣ, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಕೃಷಿ ಬ್ಯಾಂಕ್ ಸ್ಥಾಪನೆ, ವಿದ್ಯುತ್ ಸಂಪರ್ಕ, ಮೈಸೂರು ವಿವಿ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಮುಂತಾದ ಕಾರ್ಯಯೋಜನೆಗಳನ್ನು ಜಾರಿಗೊಳಿಸಿದರು ಎಂದು ಸ್ಮರಿಸಿದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಯಲುವಹಳ್ಳಿ ಸೊಣ್ಣೆಗೌಡ ಮಾತನಾಡಿ ಕರ್ನಾಟಕದ ಮೊಟ್ಟ ಮೊದಲ ರಾಜವಂಶ ಬನವಾಸಿ ಕದಂಬ ಸಾಮ್ರಾಜ್ಯದ ಸ್ಥಾಪಕ ಹಾಗೂ ಕನ್ನಡದ ಪ್ರಥಮ ಸಾಮ್ರಾಜ್ಯ ಸ್ಥಾಪಕನಾದ ಮಯೂರ ವರ್ಮನು ಕ್ರಿಸ್ತಶಕ 345 ರಿಂದ 365 ರವರೆಗೆ ಆಳ್ವಿಕೆ ನಡೆಸಿದ್ದಾನೆ. ತನ್ನ ಕಾಲದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾನೆ. ಬನವಾಸಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ ಈತನ ಸಾಮ್ರಾಜ್ಯದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿಗೆ ತಂದ ಕೀರ್ತಿ ಮಯೂರವರ್ಮನಿಗೆ ಸಲ್ಲುತ್ತದೆ. ಇಂತಹ ಸ್ವಾಭಿಮಾನಿ ದೊರೆ ಮಯೂರವರ್ಮನ 10681ನೇ ಜಯಂತಿಯನ್ನು ನಾಡಿನಾದ್ಯಂತ ಹಾಗೂ ವಿದೇಶಗಳಲ್ಲಿರುವ ಕನ್ನಡಿಗರು ಆಚರಿಸುತ್ತಿದ್ದಾರೆ ಎಂದರು.ಸಾಮಾಜಿಕ ನ್ಯಾಯ:
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಕೋಡಿರಂಗಪ್ಪ ಮಾತನಾಡಿ, ಕನ್ನಡ ನಾಡಿಗೆ ಅತ್ಯಂತ ಪ್ರಾಚೀನ ಪರಂಪರೆ ಇದೆ. ನಮ್ಮ ಭಾಷೆ ಕನ್ನಡ ಪರಂಪರೆಯನ್ನು ನಿರ್ಮಿಸಲು ನೆರವಾಗಿದೆ. ಸ್ವಾತಂತ್ರ್ಯಲಭ್ಯವಾದ ಸಂಕ್ರಮಣ ಕಾಲದಲ್ಲಿ ಈ ನಾಡಿನ ಜನತೆ ಮೈಸೂರಿನ ಅರಸರನ್ನು ಒಪ್ಪಿಕೊಂಡಿದ್ದರು. ಅಂದರೆ ಅರಸರ ದೂರದೃಷ್ಟಿ, ಸಾಮಾಜಿಕ ನ್ಯಾಯ, ಸಮಾನತೆ ಸರ್ವರನ್ನು ಮುಂಚೂಣಿಗೆ ತರುವ ಕಾಳಜಿಯನ್ನು ಜನ ಮೆಚ್ಚಿಕೊಂಡಿದ್ದರು. ಹೀಗಾಗಿಯೇ ಇಂದಿಗೂ ಮೈಸೂರು ಮಹಾರಾಜರ ಕಾರ್ಯ ಚಟುವಟಿಕೆಗಳು ಜನತೆಗೆ ಇಷ್ಟವಾಗುತ್ತವೆ. ವಿದ್ಯಾರ್ಥಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು. ಶಾಲಾ ಅವಧಿಯಲ್ಲಿ ಮಹಾನ್ ವ್ಯಕ್ತಿಗಳ ಬಗ್ಗೆ, ಸಾಧಕರ ಬಗ್ಗೆ ಓದಿ ತಿಳಿಯುವ ಹವ್ಯಾಸವನ್ನು ರೂಪಿಸಿಕೊಳ್ಳಬೇಕೆಂದು ಮನವಿ ಮಾಡಿದರು.ಸನ್ಮಾನ:
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಪಿಪಿಹೆಚ್ಎಸ್ ಶಾಲೆಯ ಎಂಟು, ಗುಡ್ ಶಫರ್ಡ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಹಾಗೂ ನಿವೃತ್ತ ಅಧ್ಯಾಪಕ ಶ್ರೀನಿವಾಸಮೂರ್ತಿ, ಮುಖ್ಯೋಪಾಧ್ಯಾಯ ಎಂ ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಕೋಶಾಧ್ಯಕ್ಷ ಚೆನ್ನ ಮಲ್ಲಿಕಾರ್ಜುನಯ್ಯ, ಗೌರವ ಕಾರ್ಯದರ್ಶಿ ಅಮೃತ್ ಕುಮಾರ್, ತಾಲೂಕು ಕಾರ್ಯದರ್ಶಿ ಕೆ ಎಂ ರೆಡ್ಡಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾದ ನಾರಾಯಣಸ್ವಾಮಿ, ಟಿ.ವಿ. ಚಂದ್ರಶೇಖರ್ ಪ್ರೇಮಲೀಲಾ, ಮುನಿನಾರಾಯಣಪ್ಪ, ಸರ್ದಾರ್ ಚಾಂದ್ ಭಾಷಾ, ಅಣ್ಣಮ್ಮ, ಮಹಾಂತೇಶ್, ವೆಂಕಟೇಶ್, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಸಿಕೆಬಿ-1ನಗರದ ಪಿಪಿಹೆಚ್ಎಸ್ ಶಾಲೆಯಲ್ಲಿ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಮಯೂರವರ್ಮ ಅವರ ಜನ್ಮದಿನಾಚರಣೆಗೆ ಕೆ.ವಿ. ನವೀನ್ ಕಿರಣ್ ಚಾಲನೆ ನೀಡಿದರು.