ಸ್ರ್ತೀ ಎಂದರೇ ಶಕ್ತಿ. ತಾಯಿಯೇ ದೇವರು. ತಾಯಿ ಒಬ್ಬರಿದ್ದರೆ ಯಾವುದೇ ದೇವರು ಬೇಕಾಗಿಲ್ಲ. ಆದರೂ ಎಷ್ಟೇ ಮಂದಿ ತಾಯಿಯ ತ್ಯಾಗವನ್ನು ಮರೆತು ವೃದ್ಶಾಶ್ರಮಗಳಿಗೆ ಹಾಕಿದ್ದಾರೆ. ಅವರ ಕಣ್ಣೀರಿನ ಕಥೆ ಕೇಳಿದರೆ ವ್ಯಥೆಯಾಗುತ್ತದೆ. ಯಾವ ತಾಯಿಗೂ ಈ ಪರಿಸ್ಥಿತಿ ಬರಬಾರದು. ಈ ರೀತಿ ಆತ್ಮವಂಚನೆ ಮಾಡಿಕೊಂಡು ಯಾವ ಮಕ್ಕಳೂ ಬದುಕಾಟ ನಡೆಸಬಾರದು.

ಕನ್ನಡಪ್ರಭ ವಾರ್ತೆ ಮೈಸೂರು

ನಾಲ್ವಡಿ ಕೃಷ್ಣರಾಜ ಒಡೆಯರ್‌, ಶಿವಾಜಿ ಮಹಾರಾಜ್‌, ಸ್ವಾಮಿ ವಿವೇಕಾನಂದರು ಸೇರಿದಂತೆ ಎಲ್ಲರಿಗೂ ತಾಯಂದಿರೇ ಸ್ಫೂರ್ತಿಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಹೇಳಿದರು.

ಮಹಿಳಾ ವಿಶೇಷ. ಜಿಲ್ಲಾ ಕಸಾಪ ಹಾಗೂ ಅಸೋಸಿಯೇಷನ್‌ ಆಫ್‌ ಅಲೈಯನ್ಸ್‌ ಕ್ಲಬ್‌ ಸರಸ್ವತಿಪುರಂ ವತಿಯಿಂದ ವಿಜಯನಗರ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ತಾಯಂದಿರ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಯಿಯವರ ಸ್ಫೂರ್ತಿಯಿಂದಲೇ ನಾಲ್ವಡಿಯವರು ಕನ್ನಂಬಾಡಿ ಕಟ್ಟೆ, ಮಾರಿಕಣಿವೆ ಜಲಾಶಯ ಮತ್ತಿತರವುಗಳನ್ನು ಕಟ್ಟಿಸಿದರು. ಶಿವಾಜಿ ಮಹಾರಾಜ್‌ ಶತ್ರುಗಳಿಂದ ದೇಶವನ್ನು ಕಾಪಾಡಿದರು. ಸ್ವಾಮಿ ವಿವೇಕಾನಂದರು ವಿಶ್ವದೆಲ್ಲೆಡೆ ಭಾತೃತ್ವ ಪಸರಿಸಿದರು ಎಂದರು.

ಹೀಗಾಗಿ ಪ್ರತಿಯೊಬ್ಬರೂ ತಾಯಂದಿರನ್ನು ಸದಾಕಾಲ ಸ್ಮರಿಸಬೇಕು. ಕೊನೆಗಾಲದವರೆಗೂ ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಸ್ರ್ತೀ ಎಂದರೇ ಶಕ್ತಿ. ತಾಯಿಯೇ ದೇವರು. ತಾಯಿ ಒಬ್ಬರಿದ್ದರೆ ಯಾವುದೇ ದೇವರು ಬೇಕಾಗಿಲ್ಲ. ಆದರೂ ಎಷ್ಟೇ ಮಂದಿ ತಾಯಿಯ ತ್ಯಾಗವನ್ನು ಮರೆತು ವೃದ್ಶಾಶ್ರಮಗಳಿಗೆ ಹಾಕಿದ್ದಾರೆ. ಅವರ ಕಣ್ಣೀರಿನ ಕಥೆ ಕೇಳಿದರೆ ವ್ಯಥೆಯಾಗುತ್ತದೆ. ಯಾವ ತಾಯಿಗೂ ಈ ಪರಿಸ್ಥಿತಿ ಬರಬಾರದು. ಈ ರೀತಿ ಆತ್ಮವಂಚನೆ ಮಾಡಿಕೊಂಡು ಯಾವ ಮಕ್ಕಳೂ ಬದುಕಾಟ ನಡೆಸಬಾರದು ಎಂದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಯಾರಿಗೂ ಯುದ್ಧ ಬೇಡ. ಆದರೂ ಅಮೆರಿಕಾ, ರಷ್ಯಾ ಅಂಥ ಬೃಹತ್‌ ರಾಷ್ಟ್ರಗಳು ಇರಾನ್‌, ಉಕ್ರೇನ್‌ ಮೊದಲಾದ ದೇಶಗಳ ಮೇಲೆ ಯುದ್ಧ ಮಾಡುತ್ತಿವೆ. ಬಹುಶಃ ಅಲ್ಲಿನ ಅದ್ಯಕ್ಷರಿಗೆ ತಾಯಂದಿರು ಸರಿಯಾಗಿ ಬುದ್ಧಿ ಹೇಳಿಲ್ಲ ಎನಿಸುತ್ತದೆ. ಚಿಕ್ಕಂದಿನಲ್ಲಿ ಹೇಳಿದ್ದರೂ ಈಗ ಅಧ್ಯಕ್ಷರಾಗಿರುವವರು ಕೇಳುತ್ತಿಲ್ಲ ಎನಿಸುತ್ತದೆ. ತಕ್ಷಣ ವಿಶ್ವದೆಲ್ಲೆಡೆ ಯುದ್ಧ ನಿಲ್ಲಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿದರು. ಅಸೋಸಿಯೇಷನ್‌ ಆಫ್‌ ಅಲೆಯನ್ಸ್‌ ಕ್ಲಬ್‌ ಸರಸ್ವತಿಪುರಂ ಅಧ್ಯಕ್ಷ ಎಸ್‌. ವೆಂಕಟರವಣಪ್ಪ, ಮಾತನಾಡುವ ಗೊಂಬೆ ಖ್ಯಾತಿಯ ಸುಮಾ ರಾಜಕುಮಾರ್‌, ದಂತ ವೈದ್ಯೆ ಡಾ.ಪಾಯಲ್‌ ಮುಖ್ಯ ಅತಿಥಿಗಳಾಗಿದ್ದರು. ಕಸಾಪ ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಕೋಶಾಧ್ಯಕ್ಷ ಜಿ. ಪ್ರಕಾಶ್‌ ಮೊದಲಾದವರು ಇದ್ದರು. ಶಿಕ್ಷಣ ತಜ್ಞ, ಕಾರ್ಯಕ್ರಮ ಸಂಘಟಕ ಎಚ್‌.ವಿ.ಸುಬ್ಬರಾವ್‌ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು.

ಇದೇ ಸಂದರ್ಭದಲ್ಲಿ ಎಸ್ಎಸ್ಎಲ್‌ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿಜಯವಿಠಲ ವಿದ್ಯಾಶಾಲೆಯ ಮನಸ್ವಿನಿ ಪ್ರದೀಪ್‌, ತೃತೀಯ ಸ್ಥಾನ ಪಡೆದ ಕೆ.ಆರ್‌. ನಗರ ಬಿ.ಎಸ್. ಮಾದಪ್ಪ ಸಂಸ್ಥೆಯ ವಿನುತಾ, ಮಾತನಾಡುವ ಗೊಂಬೆ ಖ್ಯಾತಿಯ ಸುಮಾ ರಾಜ್‌ಕುಮಾರ್‌ ಅವರನ್ನು ಜಿಲ್ಲಾ ಕಸಾಪ ವತಿಯಿಂದ, ಲ್ಯಾಬ್‌ ಟೆಕ್ನಿಷಿಯನ್‌ ವಸಂತ, ಮೀನಾ, ಲಕ್ಷ್ಮೀ, ಡಾ.ಪಾಯಲ್‌ ಮತ್ತಿತರರನ್ನು ಮಹಿಳಾ ವಿಶೇಷ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.