ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ನಿಜಲಿಂಗಪ್ಪ ಅವರ ಹೆಸರಿಡಿ

| Published : Dec 26 2024, 01:03 AM IST

ಸಾರಾಂಶ

ಚಿತ್ರದುರ್ಗ: ದೊಡ್ಡ ಸಿದ್ದವ್ವನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ ಅವರ ಹೆಸರು ನಾಮಕರಣ ಮಾಡುವಂತೆ ಸಂಸದ ಗೋವಿಂದ ಕಾರಜೋಳ ಮನವಿ ಮಾಡಿದರು.

ಚಿತ್ರದುರ್ಗ: ದೊಡ್ಡ ಸಿದ್ದವ್ವನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ ಅವರ ಹೆಸರು ನಾಮಕರಣ ಮಾಡುವಂತೆ ಸಂಸದ ಗೋವಿಂದ ಕಾರಜೋಳ ಮನವಿ ಮಾಡಿದರು. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಇಲಾಖೆ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಮತ್ತು ವಿಧಾನಪರಿಷತ್ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಎಂಜಿಎನ್‌ಆರ್ ಇಜಿಎ ಹದಿನೈದನೆ ಹಣಕಾಸು ಹಾಗೂ ಇನ್ನಿತರೆ ಯೋಜನೆಗಳ ಅನುದಾನದಡಿಯಲ್ಲಿ ದೊಡ್ಡಸಿದ್ದವ್ವನಹಳ್ಳಿಯಲ್ಲಿ ಒಂದು ಕೋಟಿ 25 ಲಕ್ಷ ರು.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನೂತನ ಕಟ್ಟಡಕ್ಕೆ ಎಲ್ಲರಿಂದಲೂ ಅನುದಾನ ಪಡೆದು ದೇಶದಲ್ಲಿಯೇ ಮಾದರಿಯಾಗಿರುವಂತೆ ನಿರ್ಮಿಸಿ ಎಂದರು. ಸಂಸದರ ಅನುದಾನದಲ್ಲಿ ಹಣದ ನೆರವು ನೀಡುತ್ತೇನೆ. ರೈತರಿಗೆ ಮಾಹಿತಿ ನೀಡುವುದು ಸೇರಿದಂತೆ ಗ್ರಾಮ ಪಂಚಾಯಿತಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ರೀತಿಯ ಸೌಲತ್ತುಗಳು ಸಿಗುವಂತ ರೀತಿಯಲ್ಲಿ ಭವ್ಯವಾದ ಕಟ್ಟಡ ನಿರ್ಮಾಣ ಮಾಡಬೇಕು. ಬಾಗಲಕೋಟೆ ಜಿಲ್ಲೆಯ ಮಂಟೂರು ಗ್ರಾಮದಲ್ಲಿ ದೇಶಕ್ಕೆ ಮಾದರಿಯಾಗಿರುವಂತ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಲಾಗಿದೆ. ಅಲ್ಲಿಂದ ಮ್ಯಾಪ್ ತರಿಸಿಕೊಂಡು ನೀವುಗಳು ಅದೇ ರೀತಿಯಲ್ಲಿ ನೂತನ ಕಟ್ಟಡ ನಿರ್ಮಿಸಿ ರಾಷ್ಟ್ರನಾಯಕ ದಿ। ಎಸ್.ನಿಜಲಿಂಗಪ್ಪನವರ ಹೆಸರನ್ನಿಡಿ ಎಂದರು. ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ವೀರೇಂದ್ರ ಪಪ್ಪಿ, ಎಸ್.ನಿಜಲಿಂಗಪ್ಪನವರು ರಾಜ್ಯಕ್ಕೆ ಹೇಗೆ ಮಾದರಿ ರಾಜಕಾರಣಿ ಎನಿಸಿಕೊಂಡಿದ್ದರೋ ಅದೇ ರೀತಿ ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡ ರಾಜ್ಯಕ್ಕೆ ಮಾದರಿಯಾಗಿರುವಂತೆ ನಿರ್ಮಿಸಬೇಕು. ಐದು ನೂರು ಜನ ಕೂರುವಂತ ದೊಡ್ಡ ಸಭಾಂಗಣ, ಸಿಬ್ಬಂದಿಗಳಿಗೆ ಪ್ರತ್ಯೇಕ ಕೋಣೆ, ನಿರ್ಮಿಸಲಾಗುವುದು ಎಂದು ತಿಳಿಸಿದರು.

ಅಭಿವೃದ್ಧಿ ವಿಚಾರ ಬಂದಾಗ ಪಕ್ಷ ಬೇಧ ಮರೆತು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ಈ ಪಂಚಾಯಿತಿಗೆ 187 ಮನೆಗಳನ್ನು ಮಂಜೂರು ಮಾಡಲಾಗುವುದು. ನೂತನ ಕಟ್ಟಡಕ್ಕೆ ಶಾಸಕರ ಅನುದಾನದಿಂದ 25 ಲಕ್ಷ ರು. ನೀಡುತ್ತೇನೆಂದು ಭರವಸೆ ನೀಡಿದರು. ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ದೇಶದಲ್ಲಿಯೇ ಈ ಕಟ್ಟಡ ಮಾದರಿಯಾಗಿರಬೇಕು. ಮಕ್ಕಳ ಗ್ರಂಥಾಲಯ, ವಿಶಾಲವಾದ ಸಭಾಂಗಣ, ವಸತಿ ಗೃಹ ಗುಣಮಟ್ಟದಲ್ಲಿ ನಿರ್ಮಾಣವಾಗಲಿ. ನನ್ನ ಅನುದಾನದಲ್ಲಿಯೂ ಕಟ್ಟಡಕ್ಕೆ 25 ಲಕ್ಷ ರು.ಗಳನ್ನು ನೀಡುತ್ತೇನೆ ಎಂದ ಅವರು ಶಾಸಕರು, ಸಂಸದರಿಂದಲೂ ಅನುದಾನ ಸಿಗುತ್ತದೆ. ಎಲ್ಲವನ್ನು ಬಳಸಿಕೊಂಡು ಗಟ್ಟಿಮುಟ್ಟಾಗಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಿ ಇನ್ನೊಂದು ವರ್ಷದಲ್ಲಿ ಉದ್ಘಾಟನೆಯಾಗಬೇಕೆಂದು ಹೇಳಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ್ ಪ್ರಾಸ್ತಾವಿಕ ಮಾತನಾಡಿದರು.ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ಟಿ.ಶಶಿಕಲಾ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷೆ ಎಂ.ಜಿ.ವನಿತಾ ಅನಿಲ್‍ಕುಮಾರ್, ಸದಸ್ಯರುಗಳಾದ ಮಾರುತಿ ಎನ್.ಸಲುಫಯ್ಯ, ಕೆ.ಟಿ.ರುದ್ರೇಶ್, ಭಾಗ್ಯಮ್ಮ, ವಿದ್ಯಾವತಿ, ಗಂಗಮ್ಮ, ಕ್ಯಾದಿಗೆರೆ ಗ್ರಾಪಂ ಸದಸ್ಯರುಗಳಾದ ಕೆ.ಎಸ್.ಕಲ್ಲೇಶಪ್ಪ, ಸತ್ಯಮ್ಮ, ಟಿ.ಲಕ್ಷ್ಮಿದೇವಿ, ಕಲ್ಲಪ್ಪ, ಎಣ್ಣೆಗೆರೆ, ಕಸವನಹಳ್ಳಿ, ಜಿಪಂ ಮಾಜಿ ಸದಸ್ಯ ಆರ್.ನರಸಿಂಹರಾಜ, ಕೆಡಿಪಿ ಸದಸ್ಯ ನಾಗರಾಜ್, ನಗರಸಭೆ ಸದಸ್ಯ ವೆಂಕಟೇಶ್, ಹನೀಸ್, ಪ್ರಕಾಶ್‍ರಾಮನಾಯ್ಕ, ಡಿ.ಎಸ್ ಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷೆ ಸುಧಾ ವೇದಿಕೆಯಲ್ಲಿದ್ದರು. ದೊಡ್ಡಸಿದ್ದವ್ವನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿಲ್ಪ.ಎನ್, ಕಾರ್ಯದರ್ಶಿಗಳಾದ ಆಶಾ, ಅನುಸೂಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.----------ಪೋಟೋ ಕ್ಯಾಪ್ಸನ್ ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ನಿರ್ಮಾಣದ ಭೂಮಿಪೂಜೆ ಸಭಾ ಕಾರ್ಯಕ್ರಮವನ್ನು ಸಂಸದ ಗೋವಿಂದ ಕಾರಜೋಳ ಉದ್ಘಾಟಿಸಿದರು.-------ಫೋಟೋ ಪೈಲ್ ನೇಮ್- 25 ಸಿಟಿಡಿ4