ಗಾಯನಗಳ ಮೂಲಕ ಶಂಕರನಾಗ್‌ ಸ್ಮರಣೆ

| Published : Dec 28 2024, 12:45 AM IST

ಸಾರಾಂಶ

ಪ್ರಧಾನಿಯಾಗಿ ಡಾ.ಮನಮೋಹನ್‌ ಸಿಂಗ್‌ ಅವರ ಕೊಡುಗೆ ಅಪಾರ

ಕನ್ನಡಪ್ರಭ ವಾರ್ತೆ ಮೈಸೂರು

ಚಿಕ್ಕ ವಯಸ್ಸಿನಲ್ಲಿಯೇ ನಮ್ಮಿಂದ ದೂರವಾದ ಕರಾಟೆ ಕಿಂಗ್‌ ಶಂಕರನಾಗ್‌ ಅವರನ್ನು ಗಾಯನಗಳ ಮೂಲಕ ಸ್ಮರಣೆ, ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರಿಗೆ ಶ್ರದ್ಧಾಂಜಲಿ...

ಇದು ಗಾನ- ನಂದನ ಸಂಸ್ಥೆಯು ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಂಕರ್‌ ನೆನಪು- ಚಲನಚಿತ್ರಗೀತೆಗಳ ಗೀತೋತ್ಸವ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ಡಾ.ಮನಮೋಹನ್‌ ಸಿಂಗ್‌ ಅವರು ವಿಶ್ವದ ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದರು. ಬೇರೆ ದೇಶಗಳಲ್ಲಿ ಆರ್ಥಿಕ ಕುಸಿತ ಉಂಟಾದರೂ ಭಾರತದಲ್ಲಿ ಆ ಪರಿಸ್ಥಿತಿ ನಿರ್ಮಾಣವಾಗದಂತೆ ಜಾಣ್ಮೆಯಿಂದ ನಿರ್ವಹಿಸಿದರು ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜು ವಿ. ಬೈರಿ ಮಾತನಾಡಿ, ಪ್ರಧಾನಿಯಾಗಿ ಡಾ.ಮನಮೋಹನ್‌ ಸಿಂಗ್‌ ಅವರ ಕೊಡುಗೆ ಅಪಾರವಾಗಿದೆ ಎಂದರು.

ಅಪಾರ ಕನಸಗಳನ್ನು ಹೊಂದಿದ್ದ ಶಂಕರನಾಗ್‌ ಅವರು ಚಿಕ್ಕ ವಯಸ್ಸಿನಲ್ಲಿಯೇ ಅಪಘಾತದಲ್ಲಿ ಸಾವಿಗೀಡಾದರು. ಬದುಕಿದ್ದರೆ ಏನೆಲ್ಲಾ ಸಾಧನೆಗಳನ್ನು ಮಾಡುತ್ತಿದ್ದರು. ಇವತ್ತಿಗೂ ಕೂಡ ಎಲ್ಲಾ ಆಟೋ ನಿಲ್ದಾಣಗಳಲ್ಲಿ ಶಂಕರ್‌ ನಾಗ್‌ ಅವರ ಹೆಸರಿದೆ. ಆಟೋರಾಜ ಎಂದೇ ಅವರು ಖ್ಯಾತರಾಗಿದ್ದರು ಎಂದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಮನಮೋಹನ್‌ ಸಿಂಗ್‌ ಅವರು ಎರಡು ಬಾರಿ ಮೈಸೂರಿಗೂ ಭೇಟಿ ನೀಡಿದ್ದರು.ಮೈಸೂರು ವಿವಿ ಕುಲಪತಿಯಾಗಿದ್ದ ಡಾ.ಎಂ. ಮಾದಯ್ಯ ಅವರ ಸ್ನೇಹಿತರಾಗಿದ್ದರು ಎಂದರು. ಶಂಕರನಾಗ್‌ ಅವರು 35ನೇ ವಯಸ್ಸಿಗೆ ಬೆಂಗಳೂರಿನ ಮೆಟ್ರೋ ರೈಲು ಕನಸು ಕಂಡಿದ್ದರು. ಅದು ಇತ್ತೀಚಿನ ವರ್ಷಗಳಲ್ಲಿ ನನಸಾಗಿದೆ. ಅದೇ ರೀತಿ ಮಾಲ್ಗುಡಿ ಡೇಸ್‌ ಮೂಲಕ ಗಮನ ಸೆಳೆದಿದ್ದರು ಎಂದರು. ಗಾಯಕ ರಾಜೇಶ್‌ ಪಡಿಯಾರ್‌, ಸಿತಾರ್‌ ವಾದಕಿ ವೇದಾಶ್ರೀ, ವಿದ್ಯುಲ್ಲಹರಿ ಸಂಸ್ಥೆಯ ಡಾ.ಎ.ಡಿ. ಶ್ರೀನಿವಾಸನ್ ಇದ್ದರು. ನಂತರ ಎನ್‌. ಬೆಟ್ಟೇಗೌಡ, ಡಾ.ವೈ.ಡಿ. ರಾಜಣ್ಣ, ಡಾ.ಎ.ಎಸ್‌. ಪೂರ್ಣಿಮಾ, ಶ್ರೀಲತಾ ಮನೋಹರ್‌, ಸಿ.ಎಸ್‌. ವಾಣಿ, ರಶ್ಮಿ ಅವರು ಶಂಕರನಾಗ್‌ ಅಭಿನಯದ ಚಿತ್ರಗೀತೆಗಳನ್ನು ಹಾಡಿ, ಸಭಿಕರನ್ನು ರಂಜಿಸಿದರು.