ಸಾರಾಂಶ
ಕನ್ನಡಪ್ರಭ ವಾರ್ತೆ ಖಾನಾಪುರ
2025ರ ಫೆಬ್ರುವರಿ ತಿಂಗಳಲ್ಲಿ ತಾಲೂಕಿನ ನಂದಗಡದಲ್ಲಿ ಗ್ರಾಮ ದೇವತೆ ಶ್ರೀಲಕ್ಷ್ಮೀ ದೇವಿಯ ಜಾತ್ರೆ ಆಚರಿಸಲಾಗುವುದು ಎಂದು ಗ್ರಾಮದ ಹಿರಿಯ ಪಿ.ಕೆ.ಪಾಟೀಲ ಹೇಳಿದರು.ನಂದಗಡ ಗ್ರಾಮದ ಸಂತ ಮೇಲಗೆ ಶಾಲೆಯ ಆವರಣದಲ್ಲಿ ಈಚೆಗೆ ಗ್ರಾಮದೇವಿ ಜಾತ್ರೆ ಆಚರಣೆ ಕುರಿತು ಆಯೋಜಿಸಿದ್ದ ಗ್ರಾಮಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಂದಗಡ ಗ್ರಾಮದ ಹಿರಿಯರ, ಗ್ರಾಮಸ್ಥರ, ಯುವಕರ ಮತ್ತು ಸರ್ವ ಜನಾಂಗಗಳ ನಾಗರಿಕರ ಉಪಸ್ಥಿತಿಯಲ್ಲಿ ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಕಳೆದ 2001ರಲ್ಲಿ ನಂದಗಡ ಗ್ರಾಮದೇವಿ ಜಾತ್ರೆ ನಡೆದಿತ್ತು. ಈಗ 24 ವರ್ಷಗಳ ನಂತರ ಜಾತ್ರೆಯನ್ನು ಆಚರಿಸಲು ಗ್ರಾಮಸ್ಥರು ಒಕ್ಕೂರಲಿನಿಂದ ಒಪ್ಪಿದ್ದಾರೆ. ಗ್ರಾಮದ ಎಲ್ಲ ಜಾತಿ-ಧರ್ಮ-ಭಾಷೆಗಳ ಬಾಂಧವರು ಸೇರಿ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ವಿವರಿಸಿದರು.ಗ್ರಾಮದ ಹಿರಿಯ ಸಿ.ಜಿ ವಾಲಿ ಮಾತನಾಡಿ, ಕಳೆದ ಬಾರಿ ಸಂಪನ್ನಗೊಂಡ ಗ್ರಾಮದೇವಿ ಜಾತ್ರೆಗಳ ತಮ್ಮ ಅನುಭವ ಮತ್ತು ಹೊಸದಾಗಿ ಆಚರಿಸಲಾಗುವ ಜಾತ್ರೆಯ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಜಾತ್ರಾ ಸಮಿತಿಯನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಗುಂಡು ಹಲಸಿಕರ, ಮೋಹನ ಪಾಟೀಲ, ಸತೀಶ ಮಾದಾರ, ರಾಜು ಪಾಟೀಲ, ನಾಗೇಂದ್ರ ಪಾಟೀಲ, ಗುರುರಾಜ ಪಾಟೀಲ, ಯಲ್ಲಪ್ಪ ಗುರವ, ವಿಜಯ ಅರಗಾವಿ, ರಮೇಶ ರಾಹೂತ, ಖೇಮಾನಿ ಪಾಟೀಲ, ರಾಜೇಂದ್ರ ಕಬ್ಬೂರ, ಪ್ರಸಾದ ಪಾಟೀಲ, ನರಸಿಂಹ ಪಾಟೀಲ ಮೊದಲಾದವರು ಹಾಜರಿದ್ದರು. ಶಂಕರ ಸೋನೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಮಹಾಂತೇಶ ವಾಲಿ ಸ್ವಾಗತಿಸಿದರು. ಸಂತೋಷ ಕಿರಹಲಸಿ ವಂದಿಸಿದರು.