ಬ್ಯಾಡಗಿ: ವಿಶ್ವ ಹಾಲು ದಿನದ ಅಂಗವಾಗಿ ಬ್ಯಾಡಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ನಂದಿನಿ ಸುಹಾಸಿತ ಬಾದಾಮಿ ಹಾಲು ವಿತರಿಸುವ ಮೂಲಕ ಹಾಲಿನ ಮಹತ್ವವನ್ನು ಸಾರಲಾಯಿತು. ಈ ವೇಳೆ ಮಾತನಾಡಿದ ಪಂಚ ಗ್ಯಾರಂಟಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಹಾಲು ಕೇವಲ ಪೌಷ್ಟಿಕ ಆಹಾರವಲ್ಲ, ಇದರೊಟ್ಟಿಗೆ ಅದು ಗ್ರಾಮೀಣ ಆರ್ಥಿಕತೆಯ ಪ್ರಮುಖ ಆಧಾರವಾಗಿದ್ದು, ಹೈನುಗಾರರ ಶ್ರಮದ ಪ್ರತೀಕವಾಗಿದೆ. ರಾಜ್ಯದ ಜನತೆ ಹೆಮ್ಮೆಯ ನಂದಿನಿ ಉತ್ಪನ್ನಗಳನ್ನು ಬೆಂಬಲಿಸುವ ಮೂಲಕ ರೈತರ ಬದುಕಿಗೆ ಮತ್ತಷ್ಟು ಬಲ ತುಂಬುವಂತೆ ಕರೆ ನೀಡಿದರು. ಹಾವೇಮುಲ್ ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಹಾವೇರಿ ಜಿಲ್ಲೆಯ ಹೈನುಗಾರಿಕೆ ಕ್ಷೇತ್ರವು ದಿನದಿಂದ ದಿನಕ್ಕೆ ಬೆಳವಣಿಗೆ ಕಾಣುತ್ತಿದ್ದು, ಶ್ವೇತ ಕ್ರಾಂತಿಯ ಯಶಸ್ಸಿನಲ್ಲಿ ರೈತರ ಕೊಡುಗೆ ಅಪಾರವಾಗಿದೆ. ಹಾಲಿನ ಉತ್ಪಾದನೆ ಹಾಗೂ ಬಳಕೆಯನ್ನು ಉತ್ತೇಜಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಘವೇಂದ್ರಸ್ವಾಮಿ, ಡಾ.ವೀರೇಶ್, ಬಸವರಾಜ ಬನ್ನಿಹಟ್ಟಿ, ರಮೇಶ ಮೋಟೆಬೆನ್ನೂರು, ಪ್ರಕಾಶ್ ಬಣಕಾರ, ಮಂಜುನಾಥ ಬೋವಿ, ಮಹಬೂಬ ಅಲಿ ನಡುವಿನಮನಿ, ಕೆ.ಎಸ್. ನಾಯ್ಕರ್, ಕೆಎಂಎಫ್ ಸಿಬ್ಬಂದಿಗಳು ಹಾಗೂ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.