ಕನ್ನಡಪ್ರಭ ವಾರ್ತೆ ನಂಜನಗೂಡುಮೈಸೂರಿನ ಕಲಾಮಂದಿರದಲ್ಲಿ ಮೇ 6 ರಂದು ನಡೆಯುವ ಶ್ರೀಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಮುದಾಯದ ಎಲ್ಲಾ ಮುಖಂಡರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಯಂತಿ ಯಶಸ್ವಿಗೊಳಿಸಬೇಕು ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಹಿನ್ನೆಲೆ ತಾಲೂಕಿನ ದೇವಿರಮ್ಮನಹಳ್ಳಿ, ಪಾಳ್ಯ ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರನ್ನು ಆಹ್ವಾನಿಸಿ ಮಾತನಾಡಿದರು.12ನೇ ಶತಮಾನದ ಬಸವಣ್ಣನವರ ಸಮಕಾಲಿನರಾಗಿದ್ದ ಸಿದ್ದರಾಮೇಶ್ವರರು, ಕಾಯಕ ತತ್ವದ ಅಡಿಯಲ್ಲಿ ಕೆರೆ ಕಟ್ಟೆಗಳನ್ನು ನಿರ್ಮಿಸಿ, ಜನಸೇವೆ ಆರಂಭಿಸಿದ್ದರು, ಸಮಾಜದ ಸುಧಾರಣೆಗೆ ಶ್ರಮಿಸಿದ ಕಾಯಕಯೋಗಿಗೆ ನಮನ ಸಲ್ಲಿಸಲು, ಮೈಸೂರಿನ ಕಲಾಮಂದಿರದಲ್ಲಿ ಅದ್ದೂರಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೆರವಣಿಗೆ, ಪ್ರವಚನ ಹಾಗೂ ವಿಶೇಷ ಪೂಜೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಭೋವಿ ಜನಾಂಗವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಭೋವಿ ನಿಗಮವನ್ನು ಸ್ಥಾಪಿಸಿ ಅನುದಾನ ನೀಡಿ ನೆರವಾಗುತ್ತಿದೆ. ಕ್ಷೇತ್ರದಲ್ಲಿ ಸುಸಜ್ಜಿತ ಭೋವಿ ಸಮುದಾಯ ಭವನ ನಿರ್ಮಾಣಕ್ಕಾಗಿ ನಗರದ ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ ಈಗಾಗಲೇ ಏಳು ಗುಂಟೆ ಜಾಗ ನೀಡಲಾಗಿದೆ ಎಂದರು.ಈ ವೇಳೆ ಶಾಸಕ ದರ್ಶನ್ ಧ್ರುವನಾರಾಯಣ್ ಅವರನ್ನು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶರ ಸ್ವಾಮೀಜಿ ಸನ್ಮಾನಿಸಿದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಬಸವರಾಜು, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ಮಾಜಿ ಅಧ್ಯಕ್ಷ ಸೀತಾರಾಮ್, ಜಿಲ್ಲಾ ಅಧ್ಯಕ್ಷ ವಿಜಯ್ ಕುಮಾರ್, ಮುಖಂಡರಾದ ಪಾಪಣ್ಣ, ಕಗ್ಗಲಿಪುರ ಮಹದೇವು, ಬಾಲಾಜಿ, ವಸಂತ ಕುಮಾರ್, ಕಾಳಪ್ಪ, ತಿಮ್ಮರಸು ಇದ್ದರು.