ಮಾದಾಪುರ ಸೊಸೈಟಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ನಂಜೇಗೌಡ, ಲೋಕೇಶ್ ಆಯ್ಕೆ

| Published : May 25 2025, 01:47 AM IST

ಸಾರಾಂಶ

ಶಾಸಕ ಎಚ್.ಟಿ.ಮಂಜು, ರಾಜ್ಯ ಮಾರಾಟ ಮಹಾ ಮಂಡಳಿ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ ಹಾಗೂ ಬಿ.ಎಂ.ಕಿರಣ್‌ ಮಾರ್ಗದರ್ಶನದಂತೆ ಸಂಘದ ಸರ್ವ ನಿರ್ದೇಶಕರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಸಂಘದ ಅಭಿವೃದ್ಧಿ, ರೈತರ ಸಮಸ್ಯೆಗೆ ಸ್ಪಂದಿಸಿ ಉತ್ತಮ ಸೊಸೈಟಿಯಾಗಿ ಮಾಡಲು ಶ್ರಮಿಸಲಾಗುವುದು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೋಟಹಳ್ಳಿ ನಂಜೇಗೌಡ, ಉಪಾಧ್ಯಕ್ಷರಾಗಿ ಗೂಡೆಹೊಸಹಳ್ಳಿ ಲೋಕೇಶ್‌ ಅವಿರೋಧವಾಗಿ ಆಯ್ಕೆಯಾದರು.

12 ನಿರ್ದೇಶಕರ ಬಲದ ಸಂಘದ ಮುಂದಿನ 5 ವರ್ಷದ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೋಟಹಳ್ಳಿ ನಂಜೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಗೂಡೆಹೊಸಹಳ್ಳಿ ಲೋಕೇಶ್ ಹೊರತುಪಡಿಸಿ ಉಳಿದ ಯಾವ ನಿರ್ದೇಶಕರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಸಿಡಿಓ ಭರತ್‌ಕುಮಾರ್‌ ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷ ಕೆ.ನಂಜೇಗೌಡ ಮಾತನಾಡಿ, ಶಾಸಕ ಎಚ್.ಟಿ.ಮಂಜು, ರಾಜ್ಯ ಮಾರಾಟ ಮಹಾ ಮಂಡಳಿ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ ಹಾಗೂ ಬಿ.ಎಂ.ಕಿರಣ್‌ ಮಾರ್ಗದರ್ಶನದಂತೆ ಸಂಘದ ಸರ್ವ ನಿರ್ದೇಶಕರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಸಂಘದ ಅಭಿವೃದ್ಧಿ, ರೈತರ ಸಮಸ್ಯೆಗೆ ಸ್ಪಂದಿಸಿ ಉತ್ತಮ ಸೊಸೈಟಿಯಾಗಿ ಮಾಡಲು ಶ್ರಮಿಸುವುದಾಗಿ ತಿಳಿಸಿದರು.

ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯಮಾಲೆ ಹಾಕಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಮಾದಾಪುರ ಎಂ.ಕೆ.ರಾಮಕೃಷ್ಣೇಗೌಡ, ಮುಖಂಡರಾದ ಹೊನ್ನೇಗೌಡ, ದೇವೇಗೌಡ, ದಿವ್ಯಚಂದ್ರಶೇಖರ್, ಶೇಖರ್, ಮಾರ್ಗೋನಹಳ್ಳಿ ಮಂಜುನಾಥ್, ಶಂಕರಣ್ಣ, ಕಾಂತರಾಜು, ಸ್ವಾಮಿ, ಶಂಭಣ್ಣ, ಗೊಂದಿಹಳ್ಳಿ ತೋಪೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ್, ಗೂಡೆಹೊಸಹಳ್ಳಿ ಕೃಷ್ಣೇಗೌಡ, ಊಗಿನಹಳ್ಳಿ ರೂಪೇಶ್, ಮುರುಳಿ, ಗುಂಡಣ್ಣ, ನಾಗರಾಜು, ಕೃಷ್ಣೇಗೌಡ ಮತ್ತಿತರರಿದ್ದರು.

ಶಾಸಕರಿಂದ ಜನರ ದಾರಿ ತಪ್ಪಿಸುವ ಕೆಲಸ: ರಮೇಶ್

ಕೆ.ಆರ್.ಪೇಟೆ:

ರಾಜ್ಯ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಎಂದು ಹೇಳುವ ಮೂಲಕ ಶಾಸಕ ಎಚ್.ಟಿ.ಮಂಜು ತಾಲೂಕಿನ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಾಲೂಕು ಕಾಂಗ್ರೆಸ್ ಉಸ್ತುವಾರಿ ಚಿನಕುರಳಿ ರಮೇಶ್ ದೂರಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಸರ್ಕಾರ ಪಕ್ಷಾತೀತವಾಗಿ ಕೆಲಸ ಮಾಡುತ್ತಿದೆ. ರಾಜ್ಯ ಎಲ್ಲಾ ಶಾಸಕರಿಗೂ ಸಮಾನವಾಗಿ ಅನುದಾನದ ಹಂಚಿಕೆ ಮಾಡಿದೆ. ಸರ್ಕಾರ ಅನುದಾನ ನೀಡದೆ ಇವರು ಗುದ್ದಲಿ ಪೂಜೆ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದ ವಿರುದ್ಧ ಅನಗತ್ಯ ಟೀಕೆ ಮಾಡುವ ಬದಲು ತಮ್ಮ ಸ್ವ-ಪ್ರಯತ್ನದ ಮೂಲಕ ಸರ್ಕಾರದೊಂದಿಗೆ ಸೌಹಾರ್ದ ಸಂಬಂಧ ಬೆಳೆಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ತರುವ ಪ್ರಯತ್ನ ಮಾಡಲಿ ಎಂದು ಆಗ್ರಹಿಸಿದ್ದಾರೆ.