ಸಾರಾಂಶ
ಸುಂಟಿಕೊಪ್ಪ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮತ್ತು ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ವತಿಯಿಂದ ಮಂಗಳವಾರ ರಾತ್ರಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಾರಾಯಣ ಗುರುಗಳ 170ನೇ ಜಯಂತಿ ಹಾಗೂ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಒಂದೇ ಕುಲ, ಮನುಜರೆಲ್ಲ ಒಂದೇ ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳ ಜೀವನ ಆದರ್ಶವನ್ನು ನಾವೆಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜಾತಿಯತೆ ಪ್ರಬಲವಾಗಿದ್ದ ಕಾಲಘಟ್ಟದಲ್ಲಿ ದೇವಾಲಯಗಳನ್ನು ನಿರ್ಮಿಸಿ ಶೋಷಿತ ವರ್ಗಕ್ಕೆ ದೇವಾಲಯಗಳ ಪ್ರವೇಶಕ್ಕೆ ನಾರಾಯಣ ಗುರುಗಳು ಅವಕಾಶ ಮಾಡಿಕೊಟ್ಟಿದ್ದು ಒಂದು ಸಾಧನೆಯ ಪ್ರತೀಕ ಎಂದು ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸತೀಶ್ ಹೇಳಿದ್ದಾರೆ.ಇಲ್ಲಿನ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮತ್ತು ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ವತಿಯಿಂದ ಮಂಗಳವಾರ ರಾತ್ರಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನಾರಾಯಣ ಗುರುಗಳ 170ನೇ ಜಯಂತಿ ಹಾಗೂ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ಸದಸ್ಯೆ ವೀಣಾ ಮಾತನಾಡಿ, ಸಹೋದರಿಯ ರಕ್ಷಣೆಯನ್ನು ಪ್ರತಿಯೊಬ್ಬ ಸಹೋದರನು ಮಾಡಿದಲ್ಲಿ ರಾಮರಾಜ್ಯದ ಕಲ್ಪನೆ ನನಸಾಗಲಿದೆ ಎಂದರಲ್ಲದೆ, ಪ್ರತಿಯೊಂದು ವಿಚಾರದಲ್ಲೂ ಹಾಗೂ ಮಹಿಳೆಯರಿಗೆ ಸಮಸ್ಯೆಗಳು ಉಂಟಾದಲ್ಲಿ ಎಲ್ಲರೂ ತಮ್ಮ ಮನೆಯ ಸಮಸ್ಯೆ ಎಂದು ಭಾವಿಸಿ, ಬಗೆಹರಿಸಲು ಸಿದ್ಧರಬೇಕು. ಹಾಗಾದಾಗ ಮಾತ್ರ ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದರು.ನಾರಾಯಣ ಗುರುಗಳ ಭಾವಚಿತ್ರಕ್ಕೆ ನಾರಾಯಣಗುರು ಬಿಲ್ಲವ ಸೇವಾ ಸಂಘದ ಸಲಹಾ ಸಮಿತಿ ಸದಸ್ಯ ಬಿ.ಬಿ ಮೋನಪ್ಪ ಪೂಜಾರಿ ಪೂಜೆ ಸಲ್ಲಿಸಿದರು.
ಬಿಲ್ಲವ ಸಮಾಜದ ಸದಸ್ಯರು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಾರಾಯಣ ಗುರುಗಳ ಜಯಂತಿ ಆಚರಿಸಿಕೊಂಡರು.ಸಮಿತಿ ಸದಸ್ಯರು ಒಬ್ಬರಿಗೊಬ್ಬರು ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಿದರು.
ಸಂಘದ ಅಧ್ಯಕ್ಷ ಬಿ.ಎಂ ಮಣಿ ಮುಖೇಶ್ ಅಧ್ಯಕ್ಷತೆ ವಹಿಸಿದ್ದರು. ದೇಯಿ ಬೈದೇತಿ ಮಹಿಳಾ ಸಂಘದ ಅಧ್ಯಕ್ಷ ಮಧು ನಾಗಪ್ಪ ಗೌರವ ಉಪಸ್ಥಿತಿ ವಹಿಸಿದ್ದರು.ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಕೋಟ್ಯಾನ್, ಸಲಹಾ ಸಮಿತಿ ಸದಸ್ಯರಾದ ಡಾ. ಯಶೋಧರ ಪೂಜಾರಿ, ಕೆ.ಪಿ. ಜಗನ್ನಾಥ್, ಬಿ.ಬಿ ಜಿನ್ನಪ್ಪ ಪೂಜಾರಿ, ರಮೇಶ್ ಪೂಜಾರಿ, ರಮೇಶ್ ಕೊಡಗರಹಳ್ಳಿ, ಅಂಜಲಿ ಯಶೋಧರ ಪೂಜಾರಿ, ಮಹಿಮಾ ಸತ್ಯ, ಪೂರ್ಣಿಮಾ ರವಿ, ಬೇಬಿ, ಮೀನಾಕ್ಷಿ, ಅಶೋಕ್, ಮಿಲನ್, ಹರೀಶ್ ಸೋಮವಾರಪೇಟೆ ಸೇರಿದಂತೆ ಸಮಿತಿಯ ಸದಸ್ಯರು ಇದ್ದರು.