ನಾರಾಯಣ ಭಟ್‌ ರಚಿತ ‘ನೆನಪುಗಳ ನೇವರಿಕೆ’ ಪುಸ್ತಕ ಬಿಡುಗಡೆ

| Published : Oct 16 2024, 12:39 AM IST / Updated: Oct 16 2024, 12:40 AM IST

ಸಾರಾಂಶ

ಇದು ಕೇವಲ ವ್ಯಕ್ತಿ ಚಿತ್ರಣವಲ್ಲ, ಪ್ರಸ್ತುತ ವಿದ್ಯಮಾನಗಳನ್ನು ಸಾದರಪಡಿಸುವ ಮಾಹಿತಿಯ ಕಣಜವಾಗಿದ್ದು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ ಎಂದು ಹೆಗ್ಗಡೆಯವರು ಶ್ಲಾಘಿಸಿ, ಲೇಖಕರನ್ನು ಅಭಿನಂದಿಸಿದರು.

ಬೆಳ್ತಂಗಡಿ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಮಕುಂಜದ ಟಿ. ನಾರಾಯಣ ಭಟ್ ರಚಿಸಿದ ‘ನೆನಪುಗಳ ನೇವರಿಕೆ’ ಪುಸ್ತಕವನ್ನು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಬಿಡುಗಡೆ ಮಾಡಿದರು.

ತಮ್ಮ ಬದುಕಿನ ಜೊತೆಗೆ ಸುತ್ತಮುತ್ತಲ ಬದುಕಿಗೂ ಒಂದಲ್ಲ ಒಂದು ರೀತಿಯಲ್ಲಿ ಆಸರೆಯಾಗಿ ನಡೆದುಕೊಂಡವರನ್ನು ಗುರುತಿಸಿ, ನೆನವರಿಕೆ ಮಾಡಿರುವ ಕೃತಿ ‘ನೆನಪುಗಳ ನೇವರಿಕೆ’ ಯಲ್ಲಿ ಪ್ರಸ್ತುತ ಜನಾಂಗಕ್ಕೆ ಹಾಗೂ ಮುಂದಿನ ತಲೆಮಾರಿಗೂ ಉಪಯುಕ್ತ ಮಾಹಿತಿ, ಮಾರ್ಗದರ್ಶನವಿದೆ. ಇದು ಕೇವಲ ವ್ಯಕ್ತಿ ಚಿತ್ರಣವಲ್ಲ, ಪ್ರಸ್ತುತ ವಿದ್ಯಮಾನಗಳನ್ನು ಸಾದರಪಡಿಸುವ ಮಾಹಿತಿಯ ಕಣಜವಾಗಿದ್ದು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ ಎಂದು ಹೆಗ್ಗಡೆಯವರು ಶ್ಲಾಘಿಸಿ, ಲೇಖಕರನ್ನು ಅಭಿನಂದಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶ್ರೀನಾಥ್ ಎಂ.ಪಿ., ನಿವೃತ್ತ ಮುಖ್ಯ ಶಿಕ್ಷಕ ಟಿ. ರವೀಂದ್ರ ಭಟ್, ನಿವೃತ್ತ ಮುಖ್ಯ ಶಿಕ್ಷಕಿ ಸರೋಜಾ ಕುಮಾರಿ, ಎಂ. ಸಂಧ್ಯಾ ಮತ್ತು ಡಾ. ಮೌಲಿಕಾ ಎಂ.ಎಸ್. ಉಪಸ್ಥಿತರಿದ್ದರು.