ಹಾಸನ-ಮಂಗಳೂರು ಮಾರ್ಗವಾಗಿ ಅಕ್ರಮವಾಗಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಜಾಲವನ್ನು ಬಂಟ್ವಾಳ ಗ್ರಾಮಾಂತರ ಎಸ್.ಐ.ಮಂಜುನಾಥ್ ನೇತೃತ್ವದ ಪೊಲೀಸರ ತಂಡ ಭೇದಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿ 1,05,59,450 ರು. ಮೌಲ್ಯದ ಮಾದಕವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ: ಹಾಸನ-ಮಂಗಳೂರು ಮಾರ್ಗವಾಗಿ ಅಕ್ರಮವಾಗಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಜಾಲವನ್ನು ಬಂಟ್ವಾಳ ಗ್ರಾಮಾಂತರ ಎಸ್.ಐ.ಮಂಜುನಾಥ್ ನೇತೃತ್ವದ ಪೊಲೀಸರ ತಂಡ ಭೇದಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿ ₹1,05,59,450 ರು. ಮೌಲ್ಯದ ಮಾದಕವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ಉಪವಿಭಾಗದ ಎಎಸ್ಪಿ ಐಪಿಎಸ್ ಯಶ್ ಕುಮಾರ್ ಶರ್ಮ ಅವರ ಮಾರ್ಗದರ್ಶನದಲ್ಲಿ, ಬಂಟ್ವಾಳ ಪೊಲೀಸ್ ಇನ್‌ಸ್ಪೆಕ್ಟ‌ರ್ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ, ಗ್ರಾಮಾಂತರ ಠಾಣೆಯ ಎಸ್‌ಐ ಮಂಜುನಾಥ ಟಿ. ಹಾಗೂ ಸಿಬ್ಬಂದಿ ಕಡೇಶಿವಾಲಯ ಗ್ರಾಮದ ಅಮೈ ಎಂಬಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಆ.15ರಂದು ರಾತ್ರಿ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಮಾದಕವಸ್ತು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಎಸ್‌ಐ ಮಂಜುನಾಥ ಟಿ. ಅವರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಕಾರನ್ನು ತಡೆದು ಪರಿಶೀಲಿಸಿದರು. ಕಾರಿನ ಚಾಲಕ ಬೆಂಗಳೂರು ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35)ನನ್ನು ವಿಚಾರಣೆ ನಡೆಸಿದಾಗ, ಮಾದಕವಸ್ತು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಎಂಡಿಎಂಎ, ಕೊಕೈನ್ ಪತ್ತೆ: ಕಾರನ್ನು ತಪಾಸಣೆ ನಡೆಸಿದಾಗ 538.63 ಗ್ರಾಂ ಎಂಡಿಎಂಎ ಹಾಗೂ 99.12 ಗ್ರಾಂ ಕೊಕೈನ್ ಪತ್ತೆಯಾಗಿದೆ. ಜತೆಗೆ ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ ಸೇರಿದಂತೆ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಅಂದಾಜಿನಂತೆ ಎಂಡಿಎಂಎ ಮೌಲ್ಯ ₹53,86,300 ಹಾಗೂ ಕೊಕೈನ್ ಮೌಲ್ಯ ₹49,56,000 ಆಗಿದ್ದು, ಇತರ ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ ಸೇರಿ ಒಟ್ಟು ₹1,05,59,450 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ವಿದೇಶಿ ಮೂಲದ ಸಂಪರ್ಕದ ತನಿಖೆ: ಪ್ರಾಥಮಿಕ ಮಾಹಿತಿಯ ಪ್ರಕಾರ, ವಿದೇಶಿ ನೈಜೀರಿಯಾ ಮೂಲದ ಮಹಿಳೆಯೊಬ್ಬರು ಮಾದಕವಸ್ತುಗಳನ್ನು ಬೆಂಗಳೂರಿಗೆ ತಂದುಕೊಡುತ್ತಿದ್ದು, ಅಲ್ಲಿಂದ ಆರೋಪಿ ಅವುಗಳನ್ನು ಮಂಗಳೂರು ಕಡೆಗೆ ಸಾಗಿಸುತ್ತಿದ್ದ ಎನ್ನಲಾಗುತ್ತಿದೆ. ಈ ಜಾಲದ ಹಿಂದಿರುವ ಇತರ ವ್ಯಕ್ತಿಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಯ ವಿರುದ್ಧ ಈ ಹಿಂದೆಯೂ 20ಕ್ಕೂ ಅಧಿಕ ಪ್ರಕರಣಗಳಿವೆ ಎನ್ನಲಾಗಿದ್ದು, ಈತನ ಮಾದಕವಸ್ತು ಜಾಲದ ಸಂಪರ್ಕ ಹಾಗೂ ಹಿಂದಿನ ಪ್ರಕರಣಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.

ತಂಡದ ಕಾರ್ಯಾಚರಣೆಗೆ ಮೆಚ್ಚುಗೆ: ಮಾದಕವಸ್ತು ಸಾಗಾಟದ ಬಗ್ಗೆ ಲಭಿಸಿದ ಮಾಹಿತಿಯನ್ನು ಕ್ಷಿಪ್ರವಾಗಿ ಪರಿಶೀಲಿಸಿ, ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿ ದೊಡ್ಡ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿರುವುದು ಬಂಟ್ವಾಳ ಗ್ರಾಮಾಂತರ ಪೊಲೀಸರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದ್ದು ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಅಶೋಕ್, ರಾಘವೇಂದ್ರ, ಪ್ರಶಾಂತ್, ಬಸವರಾಜ್, ನಜೀರ್, ಶ್ರೀಧರ್, ಮಾರುತಿ, ಕುಮಾರ್ ಹಾಗೂ ವಿವೇಕ್ ಭಾಗವಹಿಸಿದ್ದರು.