ನರೇಗಾ ಯೋಜನೆ ಕೃಷಿ ಹೊಂಡಕ್ಕೆ ಜೀವಕಳೆ

| Published : May 23 2024, 01:05 AM IST

ಸಾರಾಂಶ

ಡಾ.ನಂಜುಂಡಪ್ಪ ವರದಿ ಅನ್ವಯ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಹರಪನಹಳ್ಳಿ ತಾಲೂಕು ಒಂದು.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಹೊಂಡಗಳಿಗೆ ಜೀವಕಳೆ ಬಂದಿದೆ.

ಕೂಲಿಕಾರರಿಗೂ ಆಸರೆಯಾಗಬೇಕು ಎನ್ನುವ ಉದ್ದೇಶದಿಂದ ನರೇಗಾ ಸಹಾಯಕ ನಿರ್ದೇಶಕ ಯು.ಎಚ್‌. ಸೋಮಶೇಖರ ತಂಡ ಕಾರ್ಯೋನ್ಮುಖವಾಗಿ 2024-25ರಲ್ಲಿ ಕೆರೆಗಳಲ್ಲಿ ಕೃಷಿ ಹೊಂಡ, ಜಮೀನುಗಳಲ್ಲಿ ಬದು ನಿರ್ಮಾಣಕ್ಕೆ ಮುಂದಾಯಿತು. ಈ ವರ್ಷ 2024 ಕೃಷಿ ಹೊಂಡಗಳನ್ನು ನಿರ್ಮಿಸಲಾಯಿತು. ಕಳೆದ ಒಂದು ವಾರದಿಂದ ಬಿದ್ದ ಮಳೆಯಿಂದ ಬಹುತೇಕ ಕೃಷಿ ಹೊಂಡಗಳು ಭರ್ತಿಯಾಗಿವೆ.

ಡಾ.ನಂಜುಂಡಪ್ಪ ವರದಿ ಅನ್ವಯ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಹರಪನಹಳ್ಳಿ ತಾಲೂಕು ಒಂದು. ಈ ತಾಲೂಕು ಒಮ್ಮೆ ಬರ ಮಗದೊಮ್ಮೆ ಅತಿವೃಷ್ಟಿಗೆ ಹೆಸರವಾಸಿ. ಈ ವರ್ಷ ಹರಪನಹಳ್ಳಿ ತಾಲೂಕನ್ನು ಬರಪೀಡಿತ ತಾಲೂಕೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಕೂಲಿಕಾರರ ಜೀವನ ಕಷ್ಟದಾಯಕವಾಯಿತು. ಇಂತಹ ಸಂದರ್ಭದಲ್ಲಿ ಕೂಲಿಕಾರರಿಗೆ ಆಸರೆಯಾಗಿದ್ದು ನರೇಗಾ ಯೋಜನೆ.

6304 ಬದು ನಿರ್ಮಾಣದಿಂದ 6 ಸಾವಿರ ಗುಂಡಿಗಳು ಸೃಷ್ಟಿಯಾಗಿದ್ದು, ನೀರಿನಿಂದ ಭರ್ತಿಯಾಗಿವೆ. ಈ ಹಿಂದೆ ಕೆರೆಗಳಲ್ಲಿ ಹೂಳು ತೆಗೆಯುವ ಕೆಲಸ ಕೊಡಲಾಗುತ್ತಿತ್ತು. ಇದು ಒಳ್ಳೆಯ ಕೆಲಸವಾದರೂ ಹೂಳನ್ನು ಎತ್ತಿ ಪಕ್ಕದಲ್ಲಿಯೇ ಹಾಕಲಾಗುತ್ತಿತ್ತು. ಮಳೆ ಬಂದಾಗ ಪುನಃ ಹೂಳು ತುಂಬುತ್ತಿತ್ತು.

ಇದೀಗ ಕೆರೆಗಳಲ್ಲಿ ಕೈಗೆತ್ತಿಕೊಂಡಿರುವ ಕೃಷಿ ಹೊಂಡಗಳು ಹಾಗೂ ಜಮೀನುಗಳಲ್ಲಿ ಬದು ನಿರ್ಮಾಣದಂತಹ ಕೆಲಸಗಳಲ್ಲಿ ಕೂಲಿಕಾರರಿಗೆ ಕೆಲಸವೂ ಆಯಿತು. ಜತೆಗೆ ಶಾಶ್ವತ ಕಾಮಗಾರಿಯೂ ಆದಂತಾಗಿದೆ. ತಾಲೂಕಿನಲ್ಲಿ ಈವರೆಗೂ ಎರಡೂವರೆ ಲಕ್ಷದಷ್ಟು ಮಾನವ ದಿನಗಳನ್ನು ಸೃಜಿಸಲಾಗಿದೆ. 10 ಸಾವಿರಕ್ಕೂ ಹೆಚ್ಚು ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ.

ದಿನವೊಂದಕ್ಕೆ ₹349 ಕೂಲಿ ನೀಡಲಾಗುತ್ತಿದೆ. ಕೃಷಿ ಹೊಂಡಗಳು ಹಾಗೂ ಬದು ನಿರ್ಮಾಣದಿಂದ ನೀರು ಸಂಗ್ರಹವಾಗಿ ಅಂತರ್ಜಲ ಅಭಿವೃದ್ಧಿಯಾಗುತ್ತದೆ. ಜಮೀನಿಗೂ ಭದ್ರತೆ ಒದಗುತ್ತದೆ.

ವರ್ಷದಲ್ಲಿ ಒಬ್ಬರಿಗೆ 100 ದಿನ ಕೂಲಿ ಕೆಲಸ ನೀಡಬೇಕು. ಆ ಪ್ರಕಾರ ಈಗಾಗಲೇ 70 ದಿನಗಳಷ್ಟು ಕೆಲಸ ನೀಡಲಾಗಿದೆ. ಮಳೆಗಾಲ ಆರಂಭವಾಗಿರುವುದರಿಂದ ಜಮೀನಿನ ಕೆಲಸ ಪ್ರಾರಂಭವಾಗುವುದರಿಂದ ಜೂ.30ರೊಳಗೆ 100 ದಿನಗಳ ಕೆಲಸ ನೀಡಿ ಈ ವರ್ಷದ ನರೇಗಾ ಕಾಮಗಾರಿ ಪೂರ್ಣಗೊಳಿಸುವ ಗುರಿ ಅಧಿಕಾರಿಗಳು ಹೊಂದಿದ್ದಾರೆ.

ಒಟ್ಟಿನಲ್ಲಿ ನರೇಗಾದಿಂದ ಈ ವರ್ಷ ಕೂಲಿಕಾರರಿಗೆ ಬರದ ಬೇಗೆಗೆ ಆಸರೆಯಾಗುವುದರ ಜೊತೆಗೆ ಕೃಷಿ ಹೊಂಡ, ಬದು ನಿರ್ಮಾಣದಿಂದ ಉಂಟಾದ ಗುಂಡಿಗಳು ಶಾಶ್ವತವಾಗಿದ್ದು, ಇದರಲ್ಲಿ ಸಂಗ್ರಹವಾಗುವ ಮಳೆನೀರಿನಿಂದ ಅಂತರ್ಜಲ ಹೆಚ್ಚುವುದರಲ್ಲಿ ಸಂಶಯವಿಲ್ಲ. ಬರಕ್ಕೆ ನರೇಗಾ ಮದ್ದಾಗಿ ಪರಿಣಮಿಸಿದೆ.

ಬರಗಾಲ ಆವರಿಸಿದ್ದರಿಂದ ಹೆಚ್ಚು ಮಾನವ ದಿನಗಳನ್ನು ಸೃಷ್ಟಿ ಮಾಡಿ ಕೂಲಿಕಾರರ ಸಂಕಷ್ಟಕ್ಕೆ ನರೇಗಾ ಯೋಜನೆಯಲ್ಲಿ ಸ್ಪಂದಿಸಲಾಗಿದೆ ಎನ್ನುತ್ತಾರೆ ತಾಪಂ ಇಒ ವೈ.ಎಚ್‌. ಚಂದ್ರಶೇಖರ.

ಈ ವರ್ಷ ಬರಗಾಲ ಇದ್ದಿದ್ದರಿಂದ ಕೂಲಿಕಾರರಿಗೆ ಕೆಲಸ ನೀಡುವುದರ ಜೊತೆಗೆ ಕೃಷಿ ಹೊಂಡದಂತಹ ಕಾಮಗಾರಿ ಕೈಗೊಂಡು ಶಾಶ್ವತ ಆಸ್ತಿ ಸೃಜನೆಮಾಡಿದ್ದೇವೆ. ಆಸಕ್ತ ಕೂಲಿಕಾರರು ನರೇಗಾ ಕೆಲಸಕ್ಕಾಗಿ ಇನ್ನು ಬೇಡಿಕೆ ಸಲ್ಲಿಸಬಹುದು ಎನ್ನುತ್ತಾರೆ ನರೇಗಾ ಸಹಾಯಕ ನಿರ್ದೇಶಕ ಯು.ಎಚ್‌. ಸೋಮಶೇಖರ.