ಜನ ನಂಬಿರುವುದು ನರೇಂದ್ರ ಮೋದಿ ಗ್ಯಾರಂಟಿ: ಸಚಿವ ಭಗವಂತ ಖೂಬಾ

| Published : Jan 04 2024, 01:45 AM IST

ಸಾರಾಂಶ

ಔರಾದ್‌ ತಾಲೂಕಿನ ಚಿಂತಾಕಿ ಹಾಗೂ ಎಕಂಬಾ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ವಿತರಿಸಿದರು.

ಕನ್ನಡಪ್ರಭ ವಾರ್ತೆ ಔರಾದ್

ದೇಶದಲ್ಲಿ ನಡೆಯುತ್ತಿರುವುದು ಮೋದಿ ಗ್ಯಾರಂಟಿ ಹಾಗೂ ಜನ ನಂಬಿರುವುದು ಮೋದಿ ಗ್ಯಾರಂಟಿಗೆ ಮಾತ್ರ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಜನಸೇವೆಗೆ ಬರಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ನುಡಿದರು.

ತಾಲೂಕಿನ ಚಿಂತಾಕಿ ಹಾಗೂ ಎಕಂಬಾ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರದಿಂದ ದೇಶದ ಪ್ರತಿಯೊಬ್ಬರು ಒಂದಿಲ್ಲೊಂದು ಯೋಜನೆಗಳ ಫಲಾನುಭವಿಗಳಾಗಿದ್ದೀರಿ. ದೇಶದ ಅರ್ಥ ವ್ಯವಸ್ಥೆಯೂ ಬಲಿಷ್ಠವಾಗಿದೆ. ಪ್ರತಿಯೊಬ್ಬರ ಜೀವನ ಶೈಲಿಯೂ ಬದಲಾಗಿದೆ. ಮುಂತಾದ ಯೋಜನೆಗಳ ಮೂಲಕ ತಮ್ಮೆಲ್ಲರ ಸ್ವಾಭಿಮಾನವನ್ನು ಮೋದಿ ಸರ್ಕಾರ ಕಾಪಾಡಿದೆ ಎಂದು ತಿಳಿಸಿದರು.

ಸುಮಾರು 500 ವರ್ಷಗಳಿಂದ ಹಿಂದೂಗಳ ಆರಾಧ್ಯದೈವ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯವು ನಮ್ಮ ಮೋದಿ ಸರ್ಕಾರದಲ್ಲಿ ಆಗಿದೆ. ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನೆರವೇರಲಿದೆ. ಸಹಸ್ರ ಹಿಂದೂಗಳ ಕನಸು ನನಸಾಗಲಿದೆ. ಅಂದು ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ದ್ವಿಪ ಬೆಳಗಿಸುವ ಮೂಲಕ ಐತಿಹಾಸಿಕ ಕಾರ್ಯಕ್ರಮಕ್ಕೆ ಬೆಂಬಲಿಸಬೇಕೆಂದು ಎಲ್ಲರಲ್ಲಿ ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ದಿ.ಗುರುಪಾದಪ್ಪ ನಾಗಮಾರಪಳ್ಳಿಯವರನ್ನು ನೆನೆದು, ಅವರ ಸಾಧನೆಯನ್ನು ನೆನಪಿಸಿಕೊಂಡರು ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಿಸಿಸಿ ಬ್ಯಾಂಕ್‌ ಮಾಜಿ ಅದ್ಯಕ್ಷ, ಹಾಲಿ ನಿರ್ದೇಶಕರಾದ ಉಮಕಾಂತ ನಾಗಮಾರಪಳ್ಳಿ ಸಹಕಾರ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಕೊಂಡಾಡಿದರು.

ಅಧ್ಯಕ್ಷತೆ ವಹಿಸಿ ಉಮಕಾಂತ ನಾಗಮಾರಪಳ್ಳಿ ಮಾತನಾಡಿ, ನಮ್ಮ ಪೂಜ್ಯ ತಂದೆಯವರಾದ ದಿ. ಗುರುಪಾದಪ್ಪ ನಾಗಮಾರಪಳ್ಳಿಯವರ ನಂತರ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿ, ಆತ್ಮೀಯರಾಗಿ ನಮ್ಮೊಂದಿಗಿರುವ ಭಗವಂತ ಖೂಬಾರವರೊಂದಿಗೆ ನಾವೆಂದಿಗೂ ಬೆಂಬಲವಾಗಿ ನಿಲ್ಲುತ್ತೇವೆ ಎಂದ ಅವರು, ಬಹಿರಂಗವಾಗಿ ಸಂಸದ ಭಗವಂತ ಖೂಬಾ ಅವರಿಗೆ ಬೆಂಬಲವನ್ನು ಘೋಷಿಸಿದರು.

ಗುರುಪಾದಪ್ಪ ಪರಿವಾದವರು ಒಂದು ಸಲ ಮಾತು ಕೊಟ್ಟರೆ ವಾಪಸ್‌ ತೆಗೆದುಕೊಳ್ಳುವುದಿಲ್ಲ. ಖೂಬಾರವರಿಗೆ ಬೆಂಬಲ ಘೋಷಿಸಿದ್ದೇವೆ. ಅವರನ್ನು ಗೆಲ್ಲಿಸಿಕೊಂಡೆ ಬರುತ್ತೇವೆ ಎಂದು ಎಲ್ಲರಿಗೂ ಖೂಬಾ ಅವರಿಗೆ ಬೆಂಬಲಿಸುವಂತೆ ವಿನಂತಿಸಿಕೊಂಡರು.

ಈ ಕಾರ್ಯಕ್ರಮಗಳಲ್ಲಿ ಉಜ್ವಲ್ ಯೋಜನೆಯಡಿ ಹೊಸ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್, ಅಂಚೆ ಇಲಾಖೆಯ ಖಾತೆ ಪುಸ್ತಕ, ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ ಪರಿಹಾರದ ಚೆಕ್‌ಗಳು ವಿತರಿಸಲಾಯಿತು.

ಗ್ರಾಪಂ ಅದ್ಯಕ್ಷರಾದ ರಾಮರೆಡ್ಡಿ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಕುಂಬಾರ, ವಿಜಯಕುಮಾರ ಪಾಟೀಲ್ ಗಾದಗಿ, ಅಧಿಕಾರಗಳಾದ ಸಂಜಿವಕುಮಾರ ಸುತಾಳೆ, ಶ್ರೀಕಾರ ಬಾಬು, ಮಹೇಶಕುಮಾರ ಗೊರ್ಮೆ, ಅಮರ ಏಡವೆ, ರಾಕೇಶ ಪಾಟೀಲ್, ಜಗದಿಶ ಖೂಬಾ, ಶರಣಪ್ಪ ಪಂಚಾಕ್ಷರಿ, ರಾಜಪ್ಪ ಚಿದ್ರೆ, ಅಣೆಪ್ಪ ಖಾನಾಪೂರೆ, ಬಸವರಾಜ ಹೆಬ್ಬಾಳೆ, ಚಂದ್ರಕಾಂತ ಪಾಟೀಲ್ ಕೊಳ್ಳುರ, ಪಿ.ಡಿ.ಓ ಸಂಗಿತಾ ಇತರರು ಉಪಸ್ಥಿತರಿದ್ದರು.