ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ವಿವೇಕ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದ ವೇಳೆ ಎಲ್ಲೆಡೆ ಮೋದಿ ಪರ ಘೋಷಣೆಗಳು ಮೊಳಗಿದವು.
ಕನ್ನಡಪ್ರಭ ವಾರ್ತೆ ಮೈಸೂರು:
ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ವಿವೇಕ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದ ವೇಳೆ ಎಲ್ಲೆಡೆ ಮೋದಿ ಪರ ಘೋಷಣೆಗಳು ಮೊಳಗಿದವು.ಅವರು ಸಾಗುವ ಮಾರ್ಗದಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿ, ಮೋದಿ, ಮೋದಿ ಎಂದು ಘೋಷಣೆ ಮೊಳಗಿಸಿದರು. ಮೈಸೂರು ವಿವಿ ಓವಲ್ ಮೈದಾನದಿಂದ ರಸ್ತೆ ಮಾರ್ಗವಾಗಿ ವಿವೇಕ ಸ್ಮಾರಕದತ್ತ ಮೋದಿ ಅವರ ಕಾ ನ್ವಾಯ್ ಆಗಮಿಸುತ್ತಿದ್ದಂತೆಯೇ ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದ ಜನ ಮೋದಿ... ಮೋದಿ... ಘೋಷಣೆ ಕೂಗುವ ಮೂಲಕ ಸಂಭ್ರಮಿಸಿದರು. ಮೋದಿಯವರು ಜನರತ್ತ ಕೈಬಿಸಿ ಸಂತಸ ವ್ಯಕ್ತಪಡಿಸಿದರು.
ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ವಿವೇಕ ಸ್ಮಾರಕ ಲೋಕಾರ್ಪಣೆ ಮಾಡಿದ ಮೋದಿ, ಜೆಎಲ್ ಬಿ ರಸ್ತೆ ಮಾರ್ಗವಾಗಿ ಕೆ.ಆರ್.ರಸ್ತೆ ಮೂಲಕ ರಾಮಕೃಷ್ಣ ಆಶ್ರಮಕ್ಕೆ ತೆರಳಿದರು. ವಿವೇಕ ಸ್ಮಾರಕವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಮೋದಿ ಅವರು ಧ್ಯಾನ ಕೇಂದ್ರ, ಪ್ರಾರ್ಥನ ಮಂದಿರ, ಗ್ರಂಥಾಲಯ, ಛಾಯಾಚಿತ್ರ ಪ್ರದರ್ಶನಾಲಯ ಮತ್ತು ಸುಮಾರು 600ಕ್ಕೂ ಹೆಚ್ಚು ಮಂದಿ ಕೂರಬಹುದಾದ ಆ್ಯಂಫಿ ಥಿಯೇಟರ್ ಒಳಗೊಂಡ ಈ ಸ್ಮಾರಕದ ದ್ವಾರಕ್ಕೆ ಕಟ್ಟಲಾಗಿದ್ದ ಟೇಪಿನ ಗಂಟನ್ನು ಬಿಡಿಸುವ ಮೂಲಕ ಸ್ಮಾರಕ ಪ್ರವೇಶಿಸಿದರು.ಸ್ಮಾರಕದ ಆವರಣದಲ್ಲಿ ನೆನಪಿಗಾಗಿ ನೆಡಲಾದ ಬಿಲ್ವ ಸಸಿಗೆ ನೀರೆರೆದರು. ಬಳಿಕ, ಒಳಾವರಣದಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ವೇಳೆಯಲ್ಲಿನ ಕೆಲವು ಛಾಯಾಚಿತ್ರಗಳು, ಯೋಗ ಸಾಧನಗಳು, ಅವರು ಬರೆದ ಪತ್ರಗಳು ಮತ್ತಿತರ ವಸ್ತುಗಳನ್ನು ವೀಕ್ಷಿಸಿದರು. ನಂತರ, ವಿವೇಕಾನಂದರು ತಂಗಿದ್ದ ಕೊಠಡಿಯನ್ನು ವೀಕ್ಷಿಸಿ, ಸ್ಮಾರಕದಲ್ಲಿಯೇ ಇರುವ ನಿರಂಜನ ಮಠದ ಶಿವಲಿಂಗ ಮತ್ತು ದಕ್ಷಿಣಾಮೂರ್ತಿಗೆ ಪೂಜೆ ಸಲ್ಲಿಸಿದರು. ಸ್ಮಾರಕದಲ್ಲಿನ ವಿವೇಕಾನಂದರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ, ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿ ಕೆಲಕಾಲ ಧ್ಯಾನಸ್ಥರಾದರು.
ಸ್ಮಾರಕದಿಂದ ನೇರವಾಗಿ ಯಾದವಗಿರಿಯ ರಾಮಕೃಷ್ಣ ಆಶ್ರಮಕ್ಕೆ ಆಗಮಿಸಿದ ಮೋದಿ ಅವರು ಅಲ್ಲಿನ ಪ್ರಾರ್ಥನ ಮಂದಿರಕ್ಕೆ ತೆರಳಿ ರಾಮಕೃಷ್ಣರು, ಶಾರದಾದೇವಿ ಮತ್ತು ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ವೇಳೆ ಹಾಜರಿದ್ದು, ಮಂಗಳಾರತಿ ಸ್ವೀಕರಿಸಿ, ಪುಷ್ಪಾರ್ಚನೆ ನೆರವೇರಿಸಿದರು. ಶತಮಾನ ಪೂರೈಸಿದ ಈ ಆಶ್ರಮ ಕುರಿತ ಮಾಹಿತಿ ಪಡೆದ ಬಳಿಕ ಆಶ್ರಮದ ಎದುರಿನ ಶ್ರೀರಾಮಕೃಷ್ಣ ವಿದ್ಯಾಶಾಲೆಗೆ ಭೇಟಿ ನೀಡಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.