ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮೂಲ್ಕಿಯಿಂದ ತಲಪಾಡಿವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ನಾಲ್ಕು ಕಡೆ ಸರ್ವಿಸ್ ರಸ್ತೆಗಳನ್ನು ನಿರ್ಮಿಸಲು ಅಗತ್ಯ ಸಿದ್ಧತೆಗಳನ್ನು ನಡೆಸಲಾಗಿದೆ. ಮಳೆಗಾಲದ ಬಳಿಕ ಕಾಮಗಾರಿ ಆರಂಭಿಸುವುದಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ನಡೆದ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
ಸಂಸದ ಕ್ಯಾ. ಬ್ರಿಜೇಶ್ ಚೌಟರವರು ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಗಳ ನಿರ್ಮಾಣದ ಬಗ್ಗೆ ವಿಚಾರಿಸಿದಾಗ, ಪ್ರತಿಕ್ರಿಯಿಸಿದ ಎನ್ಎಚ್ಎಐನ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಝ್ಮಿ ಉತ್ತರಿಸಿದರು.ಕಲ್ಲಡ್ಕ ಮೇಲ್ಸೇತುವೆ ಏಪ್ರಿಲ್ಗೆ ಮುಕ್ತ:
ಅಡ್ಡಹೊಳೆಯಿಂದ ಬಿ.ಸಿ. ರೋಡ್ ನಡುವಿನ ಚತುಷ್ಪಥ ಕಾಮಗಾರಿಯ ನಾಲ್ಕು ಪ್ಯಾಕೇಜ್ಗಳಲ್ಲಿ ಪ್ಯಾಕೇಜ್ 1ರ (ಅಡ್ಡಹೊಳೆ- ಪೆರಿಯಶಾಂತಿ) ಶೇ. 95.4ರಷ್ಟುಕಾಮಗಾರಿ ಪೂರ್ಣಗೊಂಡಿದೆ. ಪ್ಯಾಕೇಜ್ 2ರ ಪೆರಿಯಶಾಂತಿಯಿಂದ ಬಿ.ಸಿ. ರೋಡ್ವರೆಗಿನ ಶೇ. 73ರಷ್ಟುಕಾಮಗಾರಿ ಪೂರ್ಣವಾಗಿದೆ. ಕಲ್ಲಡ್ಕ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಕಾಮಗಾರಿಗಳು, ಸಂಪರ್ಕ ರಸ್ತೆಗಳ ಕಾಮಗಾರಿ ನಡೆಯುತ್ತಿದ್ದು, ಏಪ್ರಿಲ್ನಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಅಬ್ದುಲ್ಲಾ ಜಾವೇದ್ ತಿಳಿಸಿದರು.ಪಂಪ್ವೆಲ್ನಿಂದ ಗೋರಿಗುಡ್ಡ ಹೋಗುವ ಇಕ್ಕೆಲಗಳ ಸರ್ವಿಸ್ ರಸ್ತೆಯ ಅಗಲೀಕರಣ, ಒಳಚರಂಡಿ, ಫುಟ್ಪಾತ್ ಕಾಮಗಾರಿ 4 ಕೋಟಿ ರು. ವೆಚ್ಚದಲ್ಲಿ ಮುಂದಿನ ವಾರದಿಂದ ಆರಂಭವಾಗಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದರು.
ನೆಟ್ಟಣ-ಸುಬ್ರಹ್ಮಣ್ಯ ಬಸ್ ಸಂಚಾರಕ್ಕೆ ಸೂಚನೆ: ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು ರೈಲನ್ನು ಸುಬ್ರಹ್ಮಣ್ಯ ರೋಡ್ಗೆ ವಿಸ್ತರಿಸಲಾಗಿರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೆಟ್ಟಣದಿಂದ ಸುಬ್ರಹ್ಮಣ್ಯ ಕ್ಷೇತ್ರದವರೆಗೆ ಬಸ್ ಸಂಚಾರ ಆರಂಭಿಸುವಂತೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.ಶಾಸಕರಾದ ವೇದವ್ಯಾಸ್ ಕಾಮತ್, ಭಾಗೀರಥಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಜಿ.ಪಂ. ಸಿಇಒ ಡಾ. ಆನಂದ್, ಜಿಲ್ಲಾ ಅರಣ್ಯ ಉಪ ಸಂಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಡಿಸಿಪಿ ಸಿದ್ಧಾರ್ಥ್ ಗೋಯಲ್ ಇದ್ದರು.ಖಂಡೇವು ನದಿ ನೀರು ಕಲುಷಿತ: ಕ್ರಮಕ್ಕೆ ಗಡುವುಇತಿಹಾಸ ಪ್ರಸಿದ್ಧ ಖಂಡೇವು ನಂದಿನಿ ನದಿಗೆ ಸಮೀಪದ ಮೆಡಿಕಲ್ ಕಾಲೇಜು ಹಾಗೂ ಪಾಲಿಕೆಯ ಚೇಳ್ಯಾರು ತ್ಯಾಜ್ಯ ಘಟಕದಿಂದ ಒಳಚರಂಡಿ ನೀರು ಸೇರುತ್ತಿದ್ದು, ನೀರು ಕಲುಷಿತಗೊಂಡು ಕಪ್ಪು ಬಣ್ಣಕ್ಕೆ ತಿರುಗಿದೆ. ಇದರ ವಿರುದ್ಧ ಸ್ಥಳೀಯರು ಮಾ. 4 ರಂದು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಈ ಬಗ್ಗೆ ತಕ್ಷಣ ಕ್ರಮ ವಹಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಆಗ್ರಹಿಸಿದರು.
ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮಾತನಾಡಿ, ಪಾಲಿಕೆ ತ್ಯಾಜ್ಯ ಘಟಕದಿಂದ ಸಂಸ್ಕರಣೆ ಮಾಡಲಾದ ನೀರನ್ನು ಮಾತ್ರವೇ ಬಿಡಲಾಗುತ್ತಿದೆ. ಯಾವುದೇ ರೀತಿಯ ಉಲ್ಲಂಘನೆಯೂ ಆಗಿಲ್ಲ ಎಂದರು.ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯ ಅಪಾರ್ಟ್ಮೆಂಟ್ಗಳಿಂದ ತ್ಯಾಜ್ಯ ನೀರು ಬಿಡುತ್ತಿರುವುದು ಕಂಡು ಬಂದಿದೆ. ಪಾಲಿಕೆ ಹಾಗೂ ಸ್ಥಳೀಯ ಮೆಡಿಕಲ್ ಕಾಲೇಜಿನಿಂದ ಸಂಸ್ಕರಣೆ ನೀರು ಬಿಡಲಾಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಹೇಳಿದಾಗ, ಅಸಮಾಧಾನಗೊಂಡ ಶಾಸಕ ಉಮಾನಾಥ ಕೋಟ್ಯಾನ್, ನದಿ ನೋಡುವಾಗಲೇ ಅದು ಎಷ್ಟು ಪರಿಶುದ್ಧ ಎಂದು ತಿಳಿಯುತ್ತದೆ. ಶುದ್ಧವಾಗಿದ್ದರೆ ಒಂದು ಲೋಟ ನೀರನ್ನು ಕುಡಿದು ತೋರಿಸಿ ಎಂದು ಸವಾಲೆಸೆದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರತಿಕ್ರಿಯಿಸಿ, ಈ ಬಗ್ಗೆ ಸ್ಥಳೀಯ ಗ್ರಾ.ಪಂ. ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿ, ಪಾಲಿಕೆ ಅಧಿಕಾರಿಗಳು ಸೇರಿದಂತೆ ಎಸ್ಟಿಪಿ, ಕಾಲೇಜು ಹಾಗೂ ಅಪಾರ್ಟ್ಮೆಂಟ್ನಿಂದ ಬಿಡಲಾಗುವ ನೀರಿನ ಬಗ್ಗೆ ಜಂಟಿ ಪರಿಶೀಲನೆ ನಡೆಸಿ ತಕ್ಷಣ ವರದಿ ನೀಡುವಂತೆ ಸೂಚನೆ ನೀಡಿದರು.ಶಾಸಕ ಹರೀಶ್ ಪೂಂಜಾ ಮಾತನಾಡಿ, ಗುರುವಾಯನಕೆರೆಗೂ ಸ್ಥಳೀಯ ಕಾಲೇಜಿನ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಹರಿಸಲಾಗುತ್ತಿದೆ ಎಂದು ಆರೋಪಿಸಿದಾಗ ಸಂಬಂಧಪಟ್ಟವರಿಗೆ ನೋಟೀಸು ನೀಡಿ ಕ್ರಮ ವಹಿಸುವುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ತಿಳಿಸಿದರು.ಶಾಖಾಘಾತ ತಡೆಗೆ ಕರೆಂಟ್ ಕಟ್!
ದ.ಕ. ಜಿಲ್ಲೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದ್ದು, ಆಗಾಗ್ಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಮೆಸ್ಕಾಂ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆಯೇ, ಈ ವಿದ್ಯುತ್ ಕಡಿತ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಶಾಸಕ ಹರೀಶ್ ಪೂಂಜಾ ಆಗ್ರಹಿಸಿದರು.ಮೆಸ್ಕಾಂ ಹಿರಿಯ ಅಧಿಕಾರಿ ರವಿಕಾಂತ್ ಪ್ರತಿಕ್ರಿಯಿಸಿ, ಕಳೆದ ಕೆಲವು ದಿನಗಳಿಂದ ದ.ಕ. ಜಿಲ್ಲೆಯಲ್ಲಿಯೂ ಬಿಸಿಗಾಳಿಯು ತೀವ್ರವಾಗಿದೆ. ಇದರಿಂದ ವಿದ್ಯುತ್ ಉಪಕರಣಗಳೂ ಶಾಖಾಘಾತಕ್ಕೆ ಒಳಗಾಗಿ ತೊಂದರೆಯಾಗುವ ಆತಂಕ ಎದುರಾಗಿದ್ದು, ಅವುಗಳ ಸುರಕ್ಷತೆಯ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತ ಆಗುತ್ತಿದ್ದು, ಈ ಸಮಸ್ಯೆ ಶೀಘ್ರವೇ ಬಗೆಹರಿಯಲಿದೆ ಎಂದರು.