ಈ ವರ್ಷದ ಕೊನೆಯ ಡಿ.12ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಯಶಸ್ಸಿಗೊಳಿಸಲು ತಾಲೂಕು ಆಡಳಿತ, ಪೊಲೀಸ್ ಇಲಾಖೆ, ವಕೀಲರ ಸಂಘ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಬೇಕು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಈ ವರ್ಷದ ಕೊನೆಯ ಡಿ.12ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಯಶಸ್ಸಿಗೊಳಿಸಲು ತಾಲೂಕು ಆಡಳಿತ, ಪೊಲೀಸ್ ಇಲಾಖೆ, ವಕೀಲರ ಸಂಘ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಫೆಲಿಕ್ಸ್ ಅಲ್ಫೋನ್ಸ್ ಅಂಥೋಣಿ ತಿಳಿಸಿದರು.ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಗುರುವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಪಟ್ಟಣದ ನಾಲ್ಕು ನ್ಯಾಯಾಲಯಗಳಲ್ಲಿ ಒಟ್ಟು 8576 ಪ್ರಕರಣಗಳಿದ್ದು, ಈ ಪೈಕಿ 1006 ಪ್ರಕರಣ ಲೋಕ ಅದಾಲತ್ನಲ್ಲಿ ಇತ್ಯರ್ಥ ಪಡಿಸಲು ಗುರುತಿಸಲಾಗಿದೆ ಎಂದರು.
ಅದಾಲತ್ಗೆ ಇನ್ನೂ ಒಂದು ವಾರ ಕಾಲಾವಕಾಶವಿದೆ. ಮತ್ತಷ್ಟು ಪ್ರಕರಣಗಳನ್ನು ವರ್ಗಾಯಿಸಿ ಅತಿ ಹೆಚ್ಚು ಪ್ರಕರಣ ಇತ್ಯರ್ಥ ಪಡಿಸಬೇಕೆಂದು ನಿರ್ಧರಿಸಲಾಗಿದೆ. ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಉಳಿದಿರುವ ವ್ಯವಹಾರಿಕ ಸಾಧನ, ಅಪಘಾತ, ಚೆಕ್ ಬೌನ್ಸ್ ಹಾಗೂ ಪರಿಹಾರಕೋರಿ ಸಲ್ಲಿಸಿರುವ ಪ್ರಕರಣಗಳೂ ಸೇರಿದಂತೆ ಹಲವು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸುವುದು ಲೋಕ ಅದಾಲತ್ನ ಮುಖ್ಯಉದ್ದೇಶವಾಗಿದೆ ಎಂದರು.ಎರಡೂ ಕಡೆಯ ಕಕ್ಷಿದಾರರು ಪರಸ್ಪರ ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವುದರಿಂದ ಬಹಳಷ್ಟು ಅನುಕೂಲವಾಗುತ್ತದೆ. ಕಕ್ಷಿದಾರರು ತಮ್ಮ ತಪ್ಪು ಒಪ್ಪಿಕೊಂಡು ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಲು ಮುಂದೆ ಬಂದರೆ ಶೇ.50 ರಷ್ಟು ದಂಡ ವಿನಾಯ್ತಿ ಕೊಟ್ಟು ಪ್ರಕರಣ ಮುಕ್ತಾಯ ಮಾಡುವ ಅವಕಾಶವಿದೆ. ಕಕ್ಷಿದಾರರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಎರಡೂ ಕಡೆಯ ಕಕ್ಷಿದಾರರು ಗೆಲುವು ಸಾಧಿಸಬೇಕೆಂದರೆ ರಾಜೀ ಸಂಧಾನದಿಂದ ಮಾತ್ರ ಸಾಧ್ಯ. ಕಾನೂನು ಬದ್ಧವಾಗಿ ನ್ಯಾಯಾಲಯದಲ್ಲಿಯೇ ರಾಜೀ ಸಂಧಾನವನ್ನು ನಡೆಸಿ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಲಾಗುವುದು. ಲೋಕ್ ಅದಾಲತ್ನಿಂದ ದ್ವೇಷ, ಅಸೂಯೆ, ಕ್ರಿಮಿನಲ್ ಪ್ರಕರಣಗಳು ಹೆಚ್ಚಾಗುವುದನ್ನು ತಡೆಗಟ್ಟಬಹುದು. ತಾಲೂಕು ಆಡಳಿತ, ವಕೀಲರು ಮತ್ತು ಪೊಲೀಸರು ಕಕ್ಷಿದಾರರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ಅದಾಲತ್ ಯಶಸ್ವಿಗೆ ಸಹಕರಿಸಬೇಕು ಎಂದರು.ಈ ವೇಳೆ ಪ್ರಧಾನ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ನರಸಿಂಹಮೂರ್ತಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ಎಸ್.ಶಿವರಾಜು, ಪ್ರಧಾನ ಅಪರ ಸಿವಿಲ್ ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಮಮತ, ನಿರಂಜನ್, ಎಜಿಪಿ ಶಿವಲಿಂಗೇಗೌಡ, ತಾಪಂ ಇಒ ಸತೀಶ್, ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್, ಪಿಎಸ್ಐಗಳಾದ ವೈ.ಎನ್.ರವಿಕುಮಾರ್, ಮಾರುತಿ, ವಲಯ ಅರಣ್ಯಾಧಿಕಾರಿ ಸಂಪತ್ ಪಟೇಲ್, ಅಬಕಾರಿ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಕೀಲರು, ಬ್ಯಾಂಕ್ ಅಧಿಕಾರಿಗಳು, ಕಾನೂನು ಸೇವಾ ಸಮಿತಿ ಸಿಬ್ಬಂದಿ ಸೋನುಮೂರ್ತಿ, ರಮೇಶ್ ಇದ್ದರು.