ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಪಶ್ಚಿಮದ ರಾಷ್ಟ್ರಗಳ ರಾಷ್ಟ್ರೀಯತೆ ಇತರ ದೇಶಗಳಿಗೆ ಸೂಕ್ತವಲ್ಲ. ಭಾರತದ ರಾಷ್ಟ್ರೀಯತೆ ಎಂದರೆ ಹಿಂದುತ್ವ, ಹಿಂದೂ ರಾಷ್ಟ್ರ ಎಂಬ ವಿಚಾರಗಳೇ ಮುನ್ನೆಲೆಗೆ ಬರುತ್ತವೆ ಎಂದು ಭಾರತೀಯ ಗುಪ್ತಚರ ಸಂಸ್ಥೆ ‘ರಾ’ ಮಾಜಿ ನಿರ್ದೇಶಕ ವಿಕ್ರಮ್ ಸೂದ್ ಅಭಿಪ್ರಾಯಪಟ್ಟರು.ಮಂಗಳೂರು ಲಿಟ್ ಫೆಸ್ಟ್ ೭ನೇ ಆವೃತ್ತಿಯ ಮೊದಲ ದಿನ ಶನಿವಾರದ ಎರಡನೇ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಿರೂಪಣಾ ಕಥಾನಕಗಳು ಅಥವಾ ನರೇಟಿವ್ಸ್ ಅನ್ನುವುದು ಒಂದು ಬಗೆಯ ಪ್ರಚಾರ ಸಮರದ ಕಲೆಯಾಗಿದೆ. ಇದನ್ನು ರಚನಾತ್ಮಕ ಅಥವಾ ವಿಘಟನಾತ್ಮಕ ಉದ್ದೇಶಗಳಿಗೆ ಬಳಸಲು ಸಾಧ್ಯವಿದೆ. ಬಹುತೇಕ ಸಂದರ್ಭಗಳಲ್ಲಿ ರಚನಾತ್ಮಕ ಉದ್ದೇಶಗಳಿಗಿಂತ ವಿಭಜನಾತ್ಮಕ ಉದ್ದೇಶಗಳಿಗೆ ಬಳಕೆಯಾಗುವುದೇ ಹೆಚ್ಚು ಎಂದರು.
ಸಿಎಎ ಜಾರಿ ವಿಚಾರ, ಮೋದಿ ಸರ್ಕಾರ ಮುಸ್ಲಿಂ ವಿರೋಧಿ ಎಂಬ ಅಪಪ್ರಚಾರ, ಕಾಶ್ಮೀರದ ಮಾನವ ಹಕ್ಕುಗಳ ವಿಚಾರಗಳಲ್ಲಿ ಸರ್ಕಾರದ ವಿರುದ್ಧ ನಡೆಸಲಾದ ಅಪಪ್ರಚಾರಗಳು ಇದಕ್ಕೆ ಉದಾಹರಣೆಯಾಗಿದೆ. ಇದಕ್ಕೆ ಬಳಸಿದ ಟೂಲ್ಸ್, ಮತ್ತು ವಿಧಾನಗಳನ್ನು ಗಮನಿಸಬೇಕು ಎಂದರು.ಇಂಟರ್ನೆಟ್, ಟಿವಿ, ರೇಡಿಯೋ- ಸಂವಹನದ ವಿವಿಧ ವ್ಯವಸ್ಥೆಗಳನ್ನು ಬಳಸಿಕೊಂಡು ಪ್ರಚಾರ ಮತ್ತು ಅಪಪ್ರಚಾರಕ್ಕೆ ನರೇಟಿವ್ ಗಳನ್ನು ಬಳಸಲಾಗುತ್ತಿದೆ ಎಂದರು.ಡ್ರೋನ್ ನಂತಹ ಆಧುನಿಕ ತಂತ್ರಜ್ಞಾನದ ಮೂಲಕ ಮಿಲಿಟರಿ ಶಕ್ತಿ ವರ್ಧನೆ ಮಾಡಿಕೊಳ್ಳುವುದು ಒಂದು ಬಗೆಯಾದರೆ, ಆಹಾರದ ಕೊರತೆ ನೀಗಲು ಕೃತಕ ಆಹಾರ ನೀಡಲಾಗುತ್ತಿದೆ ಎಂಬುದು ಒಂದು ಬಗೆಯ ನರೇಟಿವ್. ಜನಸಂಖ್ಯೆ ಕಡಿಮೆ ಮಾಡಲು ಕೋವಿಡ್ ಅಸ್ತ್ರವನ್ನು ಬಳಕೆ ಮಡಲಾಗಿದೆ ಎನ್ನುವುದೂ ಒಂದು ನರೇಟಿವ್. ಆದರೆ ಇವೆಲ್ಲ ಎಷ್ಟು ಶಕ್ತಿಶಾಲಿ ಎಂಬುದು ಪರಿಗಣನೆಗೆ ಬರುತ್ತದೆ ಎಂದರು.
ಇನ್ನೊಬ್ಬರನ್ನು ಕೌಂಟರ್ ಮಾಡಬಹುದು. ಸೋಶಿಯಲ್ ಮೀಡಿಯಾದ ಬಳಕೆ ಮತ್ತು ದುರ್ಬಳಕೆ ಕೂಡ ಇದೇ ಉದ್ದೇಶದಿಂದ ಮಾಡಲಾಗುತ್ತದೆ. ಗ್ರಹಿಕೆಯನ್ನು ಆಧರಿಸಿದ ಸತ್ಯದ ಪ್ರತಿಪಾದನೆಯೇ ನರೇಟಿವ್ ಎಂದು ವಿಕ್ರಮ್ ಸೂದ್ ವಿವರಿಸಿದರು.ಆರ್ಗನೈಸರ್ ಪತ್ರಿಕೆಯ ಮಾಜಿ ಸಂಪಾದಕ ಹಾಗೂ ಸಂವಾದ ಪತ್ರಿಕೆಯ ಹಾಲಿ ಸಂಪಾದಕ ಪ್ರಶಾಂತ್ ವೈದ್ಯರಾಜ್ ಸಂವಾದ ನಿರ್ವಹಿಸಿದರು.