ಸಾರಾಂಶ
ಮಂಗಳೂರು: ರಾಜ್ಯಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಮಂಗಳೂರು ಇದರ 19ನೇ ವಾರ್ಷಿಕ ಸಾಮಾನ್ಯ ಸಭೆಯು ಅಧ್ಯಕ್ಷರಾದ ಭಾಸ್ಕರ್ ಎಸ್. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು.ವರದಿಯ ವರ್ಷದಲ್ಲಿ ಸಂಸ್ಥೆಯು 1.03 ಕೋಟಿ ರು. ಲಾಭ ಗಳಿಸಿದ್ದು , ತನ್ನ ಸದಸ್ಯರಿಗೆ ಶೇ.9.00 ಡಿವಿಡೆಂಡ್ ಘೋಷಿಸಿದೆ.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾಸ್ಕರ್ ಎಸ್.ಕೋಟ್ಯಾನ್, ವರದಿ ವರ್ಷದಲ್ಲಿ ಸಂಸ್ಥೆಯು ಎಲ್ಲ ಸದಸ್ಯರ ಮತ್ತು ಠೇವಣಿದಾರರ ಸಹಕಾರದಿಂದ ಉತ್ತಮ ಅಭಿವೃದ್ಧಿಯನ್ನು ಸಾಧಿಸಿದೆ. ಸಂಸ್ಥೆಯು 13944 ‘ಆ’ ವರ್ಗದ ಸದಸ್ಯರನ್ನು ಹೊಂದಿದ್ದು, 2.04 ಕೋಟಿ ರು. ಪಾಲು ಬಂಡವಾಳ ಹೊಂದಿದೆ. ಸಂಸ್ಥೆಯು 84.72 ಕೋಟಿ ರು. ಠೇವಣಿಯನ್ನು ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ 84.49 ಕೋಟಿ ರು. ಸಾಲವನ್ನು ನೀಡಿದೆ ಎಂದರು.
ಹೊಸ ಶಾಖೆಗಳು : ಸಂಸ್ಥೆಯು ಈಗಾಗಲೇ 15 ಶಾಖೆಗಳನ್ನು ಹೊಂದಿದ್ದು, ಮುಂದಿನ ವರ್ಷದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಂಕಿ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ ಮತ್ತು ಬೆಳ್ತಂಗಡಿ, ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಉಡುಪಿಯಲ್ಲಿ ಹೊಸ ಶಾಖೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದರು.ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಸಂಸ್ಥೆಯ ಉಪಾಧ್ಯಕ್ಷ ಎಸ್.ರಾಜು ಪೂಜಾರಿ, ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಇದರ ಟ್ರಸ್ಟಿ ಮೇಘರಾಜ್ ಜೈನ್, ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರುಗಳಾದ ಎಂ.ವಾದಿರಾಜ ಶೆಟ್ಟಿ. ವಿನಯ ಕುಮಾರ್ ಸೂರಿಂಜೆ, ರತ್ನಾಕರ ಶೆಟ್ಟಿ , ಮೋನಪ್ಪ ಶೆಟ್ಟಿ ಎಕ್ಕಾರು, ಸುನೀಲ್ ಕುಮಾರ್ ಬಜಗೋಳಿ, ಟಿ.ರಾಘವ ಶೆಟ್ಟಿ , ಎಸ್.ಜಗದೀಶ್ಚಂದ್ರ, ನಜೀರ್ ಹುಸೈನ್, ಸಾವಿತ್ರಿ ರೈ. ಕೆ, ಗುಲ್ಜರ್ ಹುಸೈನ್, ಲೆಕ್ಕ ಪರಿಶೋಧಕರಾದ ಪಿ.ನರೇಂದ್ರ ಪೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವಾಕರ ಎಂ., ಸಂಸ್ಥೆಯ ಕಾನೂನು ಸಲಹೆಗಾರ ಜನಾರ್ದನ ಕುಡುಪು ಇದ್ದರು.