ದೊಡ್ಡಣಗುಡ್ಡೆ ಶ್ರೀದುರ್ಗಾ ಕ್ಷೇತ್ರದಲ್ಲಿ ನವರಾತ್ರಿ ವೈಭವ

| Published : Sep 24 2025, 01:02 AM IST

ಸಾರಾಂಶ

ಪ್ರಾತಃಕಾಲ ಮಂಗಳವಾದ್ಯ ಸಹಿತ ಕದಿರನ್ನು ದೇವಾಲಯದೊಳಗೆ ಬರಮಾಡಿಕೊಳ್ಳಲಾಯಿತು. ನಂತರ ಪೂಜೆ ನೆರವೇರಿಸಿ ಸಾನ್ನಿಧ್ಯಕ್ಕೆ ಕದಿರು ಕಟ್ಟಲಾಯಿತು. ನಂತರ ಕ್ಷೇತ್ರದ ವತಿಯಿಂದ ಭಕ್ತರಿಗೆ ಕದಿರು ವಿತರಿಸಲಾಯಿತು. ಪುರೋಹಿತರಾದ ಗಣೇಶ ಸರಳಾಯ ಮತ್ತು ವಿಖ್ಯಾತ್ ಭಟ್, ಧಾರ್ಮಿಕ ಕಾರ್ಯಕ್ರಮಗಳ‍ನ್ನು ನೆರವೇರಿಸಿದರು.

ಕದಿರು ಕಟ್ಟಿ ಚಾಲನೆ । ಚಂಡಿಕಾಯಾಗ, ದುರ್ಗಾಪೂಜೆ, ಅನ್ನಸಂತರ್ಪಣೆ, ನೃತ್ಯ ಸೇವೆಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಸೋಮವಾರ ಕದಿರು ಕಟ್ಟುವಿಕೆಯೊಂದಿಗೆ ವೈಭವದ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.ಪ್ರಾತಃಕಾಲ ಮಂಗಳವಾದ್ಯ ಸಹಿತ ಕದಿರನ್ನು ದೇವಾಲಯದೊಳಗೆ ಬರಮಾಡಿಕೊಳ್ಳಲಾಯಿತು. ನಂತರ ಪೂಜೆ ನೆರವೇರಿಸಿ ಸಾನ್ನಿಧ್ಯಕ್ಕೆ ಕದಿರು ಕಟ್ಟಲಾಯಿತು. ನಂತರ ಕ್ಷೇತ್ರದ ವತಿಯಿಂದ ಭಕ್ತರಿಗೆ ಕದಿರು ವಿತರಿಸಲಾಯಿತು. ಪುರೋಹಿತರಾದ ಗಣೇಶ ಸರಳಾಯ ಮತ್ತು ವಿಖ್ಯಾತ್ ಭಟ್, ಧಾರ್ಮಿಕ ಕಾರ್ಯಕ್ರಮಗಳ‍ನ್ನು ನೆರವೇರಿಸಿದರು.ಬಳಿಕ ಆದ್ಯ ಗಣಪತಿಯಾಗ, ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ ನೆರವೇರಿತು. ಸುಕ್ಷಿತ್- ರಶ್ಮಿ ದಂಪತಿ ಹಾಗೂ ವಿಘ್ನೇಶ್ ಕೊಕ್ಕರ್ಣೆ ಮತ್ತು ಮನೆಯವರಿಂದ ಚಂಡಿಕಾಯಾಗಗಳು, ಶಾಂತಾ ಮತ್ತು ಮನೆಯವರಿಂದ ದುರ್ಗಾ ನಮಸ್ಕಾರ ಪೂಜೆ, ಶ್ರೀರಂಗಪೂಜೆಗಳು ವಿಜೃಂಬಣೆಯಿಂದ ನೆರವೇರಿದವು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.ಮಧ್ಯಾಹ್ನ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಶರಣ್ಯಾ, ಶ್ರೇಷ್ಠಾ, ಶ್ರೇಯಾ ಆಚಾರ್ಯ ಮತ್ತು ಸುಮಲತಾ ಅವರ ಶಿಷ್ಯೆಯರು ಹಾಗೂ ರಾತ್ರಿ ಸ್ವದಾ ಭಟ್ ಅವರು ದೇವಿಗೆ ನೃತ್ಯ ಸೇವೆಯನ್ನು ಸಮರ್ಪಿಸಿದರು. ನವಶಕ್ತಿ ವೇದಿಕೆಯಲ್ಲಿ ಪ್ರಜ್ಞಾ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ ನಡೆಯಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.-----------

ಗುರುಗಳಿಂದ ಅನ್ನಸಂತರ್ಪಣೆ

ಕ್ಷೇತ್ರದಲ್ಲಿ ನಿರಂತರವಾಗಿ 10 ದಿನ ನೆರವೇರಲಿರುವ ಅನ್ನಸಂತರ್ಪಣೆಗೆ ಸ್ವತಃ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರು ನೆರೆದ ಭಕ್ತರಿಗೆ ಅನ್ನ ಮತ್ತು ಸಾರು ಬಡಿಸುವುದರ ಮೂಲಕ ಚಾಲನೆ ನೀಡಿದರು.