ಮಲ್ಪೆ: ಇಲ್ಲಿನ ಕೊಚ್ಚಿನ್ ಶಿಫ್‌ಯಾರ್ಡ್‌ನಿಂದ ದೇಶದ ಸುಭದ್ರತೆಗೆ ಅಪಾಯವನ್ನುಂಟು ಮಾಡುವಂತಹ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನೆ ಮಾಡಿದ್ದ ಇನ್ನೊಬ್ಬ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಪಶ್ಚಿಮ ಬಂಗಾಲದ ಜಲ್‌ಪೈಗುರಿ ಜಿಲ್ಲೆಯ ಬರಗಾರಿಯ ಗ್ರಾಮದ ನಿವಾಸಿ ಆಲಿಫ್ ಇಸ್ಲಾಮ್ (21) ಆರೋಪಿ ಎಂದು ಗುರುತಿಸಲಾಗಿದೆ. ಈತ ಕೊಚ್ಚಿನ್ ಶಿಪ್‌ಯಾರ್ಡ್‌ನ ಕೇರಳದ ಘಟಕದಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ಅಲ್ಲಿನ ಇಡುಕಿ ಜಿಲ್ಲೆಯ ಮರಾಯ ಗ್ರಾಮದಲ್ಲಿ ವಾಸವಾಗಿದ್ದ. ಅಲ್ಲಿಂದ ಆತನನ್ನು ಬಂಧಿಸಿ ಉಡುಪಿಗೆ ಕರೆತಂದು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಫೆ. 21ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಕೊಚ್ಚಿನ್ ಶಿಪ್ ಯಾರ್ಡ್‌ನಿಂದ ನ. 21ರಂದು ಉತ್ತರಪ್ರದೇಶ ರಾಜ್ಯದ ಸುಲ್ತಾನ್‌ಪುರ ನಿವಾಸಿಗಳಾದ ರೋಹಿತ್ (29) ಮತ್ತು ಸಂತ್ರಿ (37) ಎಂಬವರನ್ನು ಮತ್ತು ಡಿ. 22ರಂದು ಗುಜರಾತ್ ರಾಜ್ಯದ ಕೈಲಾಶ್‌ನಗರಿಯ ಹಿರೇಂದ್ರ ಕುಮಾರ್ (34) ಎಂಬಾತನನ್ನು ಬಂಧಿಸಲಾಗಿತ್ತು. 18 ತಿಂಗಳಿಂದ ಆರೋಪಿಗಳಾದ ರೋಹಿತ್ ಮತ್ತು ಸಂತ್ರಿ ಅವರು ಮಲ್ಪೆಯ ಈ ಶಿಪ್‌ಯಾರ್ಡ್‌ಗೆ ಬರುವ ಭಾರತೀಯ ನೌಕಾಪಡೆಯ ಹಡಗುಗಳ ಚಲನವಲನ, ಫೋಟೋ ಮತ್ತು ಇತರ ಮಾಹಿತಿಗಳನ್ನು ವಾಟ್ಸಾಪ್‌ ಮೂಲಕ ಪಾಕಿಸ್ತಾನಕ್ಕೆ ಕಳುಹಿಸುತಿದ್ದರು. ಅವರಿಗೆ ಹಿರೇಂದ್ರ ಕುಮಾರ್ ಸಿಮ್ ಕಾರ್ಡ್‌ ಗಳನ್ನು ಪೂರೈಸುತಿದ್ದ. ಇದೀಗ ಅವರಿಗೆ ಕೇರಳದಲ್ಲಿರುವ ಶಿಪ್‌ಯಾರ್ಡ್‌ನಿಂದ ಮಾಹಿತಿ ಒದಗಿಸುತ್ತಿದ್ದ ಹಿನ್ನೆಲೆಯಲ್ಲಿ ಆಲೀಫ್ ಇಸ್ಲಾಂನಲ್ಲಿ ಬಂಧಿಸಲಾಗಿದೆ.

ಹಣಕ್ಕಾಗಿ ಈ ದೇಶದ್ರೋಹ ಕೆಲಸ ಮಾಡುತ್ತಿದ ಈ ಆರೋಪಿಗಳ ಹಿಂದೆ ಭಾರೀ ಹಣಕಾಸಿನ ವರ್ಗಾವಣೆ ಮತ್ತು ಭಾರಿ ಜಾಲ ಇರುವ ಬಗ್ಗೆ ಶಂಕೆ ಇದೆ.