ಸಾರಾಂಶ
ಕಾರವಾರ: ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಯ ಫೋಟೋಗಳನ್ನು ಪಾಕಿಸ್ತಾನ ಹಾಗೂ ವಿದೇಶಿ ಗುಪ್ತಚರ ಏಜೆಂಟರಿಗೆ ಕಳುಹಿಸಿದ ಆರೋಪದ ಮೇಲೆ ಮೂವರನ್ನು ಎನ್ಐಎ ವಿಚಾರಣೆ ನಡೆಸಿದೆ.ಎನ್ಐಎನ ಮೂವರು ಅಧಿಕಾರಿಗಳು ಸೇರಿದಂತೆ ಆರು ಜನರ ತಂಡ ಕಾರವಾರಕ್ಕೆ ಆಗಮಿಸಿ ನೌಕಾದಳದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತೋಡೂರಿನ ಸುನೀಲ ನಾಯ್ಕ, ಮುದಗಾದ ವೇತನ ತಾಂಡೇಲ ಹಾಗೂ ಅಂಕೋಲಾ ಹಳವಳ್ಳಿಯ ಅಕ್ಷಯ ನಾಯ್ಕ ಅವರನ್ನು ವಿಚಾರಣೆ ನಡೆಸಿದೆ. ರಾಷ್ಟ್ರ ವಿರೋಧಿ ಚಟುವಟಿಕೆ ಆಧಾರದಲ್ಲಿ 2023ರಲ್ಲಿ ಹೈದರಾಬಾದ್ನಲ್ಲಿ ಎನ್ಐಎ ದೀಪಕ್ ಹಾಗೂ ಇತರರನ್ನು ಬಂಧಿಸಿತ್ತು. ಆಗ ಅವರು ಈ ಮೂವರ ಹೆಸರನ್ನು ಬಾಯಿಬಿಟ್ಟಿದ್ದರು. ನೌಕಾಪಡೆಯ ಯುದ್ಧ ಹಡಗು, ಸ್ಥಳದ ಮಾಹಿತಿ ಇರುವ ಫೋಟೋಗಳನ್ನು ಇವರು ದೀಪಕ ಎಂಬಾತನಿಗೆ ಕಳುಹಿಸಿದ ಆರೋಪ ಎದುರಿಸುತ್ತಿದ್ದಾರೆ.
ಹನೇಹಳ್ಳಿಗೆ ಎನ್ಐಎ ತಂಡ ಭೇಟಿಗೋಕರ್ಣ: ಇಲ್ಲಿನ ಹನೇಹಳ್ಳಿಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಭೇಟಿ ನೀಡಿದ್ದು, ಕೆಲಕಾಲ ಸ್ಥಳೀಯರಿಗೆ ಕುತೂಹಲದ ಜತೆ ಆತಂಕ ಉಂಟಾಗಿತ್ತು.ಆದರೆ, ಇದೇ ಹೆಸರು ಹೋಲುವ ಬೇರೆ ತಾಲೂಕಿನ ಹಳ್ಳಿಗೆ ತೆರಳುವ ಬದಲು ತಪ್ಪು ಗ್ರಹಿಸಿ ಹನೇಹಳ್ಳಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ನೌಕಾನೆಲೆಯ ಫೋಟೋಗಳನ್ನು ತೆಗೆದು ರವಾನಿಸಿದ ಬಗ್ಗೆ ಹಲವರನ್ನು ವಶಕ್ಕೆ ಪಡೆಯಲು ಜಿಲ್ಲೆಯ ವಿವಿಧೆಡೆ ಎನ್ಐಎ ದಾಳಿ ನಡೆಸಿತ್ತು. ಅದರಂತೆ ಈ ಪುಟ್ಟ ಹಳ್ಳಿಯಲ್ಲೂ ದೇಶದ್ರೋಹಿ ಚಟುವಟಿಕೆ ನಡೆದಿತ್ತೆ ಎಂದು ಸ್ಥಳೀಯರಲ್ಲಿ ಚರ್ಚೆ ಜೋರಾಗಿತ್ತು.