ಪಟ್ಟಣದ ತಾಪಂ ಸಭಾಂಗಣದಲ್ಲಿ ಶಾಸಕಿ ನಯನಾ ಮೋಟಮ್ಮ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆ

ಕನ್ನಡಪ್ರಭ ವಾರ್ತೆ ಮೂಡಿಗೆರೆ

ರಸ್ತೆ ಬದಿ ಕಸ ಹಾಕುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಾಸಕಿ ನಯನಾ ಮೋಟಮ್ಮ ಸೂಚಿಸಿದ್ದಾರೆ.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶಾಸಕಿ ನಯನಾ ಮೋಟಮ್ಮ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ವೈದ್ಯರ ಸಮಸ್ಯೆ, ಕುಡಿಯುವ ನೀರು, ವಿದ್ಯುತ್, ಬೆಳೆ ಮಾಪನ, ಕಸ ವಿಲೇವಾರಿ ಸೇರಿದಂತೆ ಅನೇಕ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಆರಂಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಅನುಪಾಲನೆ ವರದಿ ಹಾಗೂ ಇಲಾಖೆಯಲ್ಲಿ ನಡೆದ ಪ್ರಗತಿ ಬಗ್ಗೆ ವರದಿ ನೀಡಿದರು.

ನಂತರ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಎಂಜಿಎಂ ಆಸ್ಪತ್ರೆಯಲ್ಲಿ ಅರವಳಿಕೆ ವೈದ್ಯರ ನೇಮಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾದ 4 ವೈದ್ಯರ ನೇಮಕ ಮಾಡುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಬಳಿ ಮಾತನಾಡುತ್ತೇನೆ ಎಂದು ತಿಳಿಸಿದರು.


ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಅನೇಕ ರಸ್ತೆ ಬದಿಯಲ್ಲಿ ಜನರು ಕಸ ಹಾಕುತ್ತಿದ್ದಾರೆ. ಇದನ್ನು ಬಗೆಹರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಪ.ಪಂ ಹಾಗೂ ಎಲ್ಲಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕಸ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ನಂತರವೂ ಜನರು ಕಸ ಹಾಕಿದರೆ ಮುಲಾಜಿಲ್ಲದೇ ಅವರಿಗೆ ದಂಢ ವಿಧಿಸಬೇಕೆಂದು ತಾ.ಪಂ. ಇಒ ದಯಾವತಿಗೆ ಸೂಚನೆ ನೀಡಿದರು.

ತಾನು ಶಾಸಕಿಯಾದ ಬಳಿಕ ಕೆಲವೊಂದು ಸಮಸ್ಯೆಗಳು ಅಧಿಕಾರಿಗಳ ಗಮನಕ್ಕೆ ತಂದರೂ ಬಗೆಹರಿಸುತ್ತಿಲ್ಲ. ಹೇಳುವವರೆಗೆ ಹಾಗೂ ಮಾಧ್ಯಮದಲ್ಲಿ ತನ್ನ ವಿರುದ್ಧ ಸುದ್ದಿ ಬಂದ ಬಳಿಕ ಕೆಲಸ ಮಾಡಲು ಮುಂದಾಗುತ್ತಿರುವ ಕ್ರಮ ಸಹಿಸುವುದಿಲ್ಲ. ಜನರ ಆರೋಗ್ಯ ಹಾಗೂ ಜೀವಕ್ಕೆ ಕುತ್ತು ಬರುವಂತಹ ತುರ್ತು ಪರಿಸ್ಥಿತಿ ಎದುರಾದಾಗ ನಿಯಮಗಳು ಅಡ್ಡಿ ಬಂದರೂ ಕೂಡ ಮೊದಲು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬೇಕು.

ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ ತಾಲೂಕಿನಲ್ಲಿ 16 ಮಳೆ ಮಾಪನ ಕೇಂದ್ರ ಕೆಲಸ ಮಾಡುತ್ತಿಲ್ಲ. ಅದನ್ನು ಮಳೆ ಪ್ರಾರಂಭವಾದ ಮೇಲೆ 15 ದಿನದಲ್ಲಿ ಸರಿಪಡಿಸಲು ಮುಂದಾದರೆ, ಅಲ್ಲಿಯವರೆಗೆ ಮಳೆ ಪ್ರಮಾಣದ ಲೆಕ್ಕ ಸಿಗುವುದಿಲ್ಲ. ಇದರಿಂದ ವಿಮೆ ಕಟ್ಟಿದ ರೈತರಿಗೆ ಪರಿಹಾರ ಕೊಡಲು ಹೇಗೆ ಸಾಧ್ಯ ಕೂಡಲೇ ಈ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಬೇಕು. ಈಗಾಗಲೇ ಮಳೆ ಪ್ರಾರಂಭವಾಗಿದೆ. ಸಮಸ್ಯೆ ಉದ್ಭವಗೊಳ್ಳಲಾರಂಭಿಸುತ್ತದೆ. ತಾಲೂಕಿನ ಬಹುತೇಕ ಚರಂಡಿಗಳು ಮುಚ್ಚಿ ಹೋಗಿದ್ದು, ಮಳೆ ನೀರು ರಸ್ತೆ ಮೇಲೆ ಹರಿದು ರಸ್ತೆಗಳೆಲ್ಲಾ ಹಾಳಾಗುತ್ತಿದೆ. ಗುಡ್ಡ ಗಳು ಕುಸಿಯತ್ತವೆ. ಮರ, ವಿದ್ಯುತ್ ಕಂಬಗಳು ನೆಲಕ್ಕುರುಳುತ್ತದೆ. ಅದಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಮೂಡಿಗೆರೆ ತಹಸೀಲ್ದಾರ್ ಎಸ್.ಅಶ್ವಿನಿ, ಕಳಸ ತಹಸೀಲ್ದಾರ್ ಶಾರದ, ಮೂಡಿಗೆರೆ ಇಒ ದಯಾವತಿ, ಆಡಳಿತಾಧಿಕಾರಿ ಸಿ.ಎಂ. ಮಹೇಶ್, ಕಳಸ ಇಒ ಸುದೀಪ್, ಆಡಳಿತಾಧಿಕಾರಿ ಆನಂದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ಪ್ಪ : ಮೂಡಿಗೆರೆ ಪಟ್ಟಣದಲ್ಲಿ ಶಾಸಕಿ ನಯನಾ ಮೋಟಮ್ಮ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. ಈ ವೇಳೆ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್,ತಹಸೀಲ್ದಾರ್ ಎಸ್.ಅಶ್ವಿನಿ, ಕಳಸ ತಹಸೀಲ್ದಾರ್ ಶಾರದ, ಮೂಡಿಗೆರೆ ಇಒ ದಯಾವತಿ, ಆಡಳಿತಾಧಿಕಾರಿ ಸಿ.ಎಂ.ಮಹೇಶ್ ಮೊದಲಾದವರಿದ್ದರು.