ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಹೇಮಾವತಿ ನಾಲೆಯಿಂದ ನವಿಲೆ ಕೆರೆಗೆ ನೀರುಹರಿಸುವ ನಿಟ್ಟಿನಲ್ಲಿ ಕಾರ್ಯಾಂಗ ಹಾಗೂ ಶಾಸಕಾಂಗದ ನಿರ್ಲಕ್ಷ್ಯವನ್ನು ಖಂಡಿಸಿ ಪಟ್ಟಣದಲ್ಲಿ ನೀರಾವರಿ ಹೋರಾಟ ಸಮಿತಿಯಿಂದ ಅನಿರ್ದಿಷ್ಟಕಾಲ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು.ಸಮಿತಿಯ ಕರೆಯ ಮೇರೆಗೆ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ಮೂಲಕ ರೈತರು ಆಗಮಿಸಿದ್ದರು. ಪಟ್ಟಣದ ಮತಿಘಟ್ಟಗೇಟ್ ನಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ನೆಹರೂ ವೃತ್ತದ ಮೂಲಕ ಸಾಗಿ ತಾಲೂಕು ಕಚೇರಿಯ ಮುಂಭಾಕ್ಕೆ ಆಗಮಿಸಿದ ನಂತರ ಗೋಡೆಕೆರೆ ಶ್ರೀಮಠದ ಶ್ರೀ ಮೃತ್ಯುಂಜಯ ದೇಶೀಕೇಂದ್ರಸ್ವಾಮಿಗಳು ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.
ಈ ಹಿಂದೆ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳ ಮತ್ತು ಹೇಮಾವತಿ ನಾಲಾ ಎಂಜಿನಿಯರ್ಗಳ ಸಮ್ಮುಖದಲ್ಲಿ ಹೋರಾಟಗಾರರಿಗೆ ನೀಡಿದ್ದ ಭರವಸೆ ಇದುವರೆಗೂ ಈಡೇರದ ಕಾರಣ ನವಿಲೆ ಭಾಗಕ್ಕೆ ನೀರುಹರಿಸುವವರೆಗೂ ಈ ಹೋರಾಟ ಮುಂದುವರೆಯಲಿರುವ ಬಗ್ಗೆ ಸಮಸ್ತ ರೈತರಪರವಾಗಿ ಮನವಿಯನ್ನು ತಹಸೀಲ್ದಾರ್ ಶ್ರೀಮತಿ ಮಮತರವರಿಗೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೆಆರ್ಎಸ್ ಪಕ್ಷದ ಮುಖಂಡ ಭಟ್ಟರಹಳ್ಳಿ ಮಲ್ಲಿಕಾರ್ಜುನ್ , ಕುಪ್ಪೂರು ತಮ್ಮಡಿಹಳ್ಳಿ ಮಠಾಧೀಶರಾದ ಡಾ. ಅಭಿನವ ಮಲ್ಲಿಕಾರ್ಜುನ ಸ್ವಾಮಿಗಳು, ವಾಗೀಶ್, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎಚ್.ಆರ್. ಬೋಜರಾಜ್, ರೈತಸಂಘ, ವಿವಿಧ ವರ್ತಕರ ಸಂಘ, ವಕೀಲರಸಂಘ, ಆಟೋಚಾಲಕರ ಸಂಘ, ಕನ್ನಡ ಸಂಘ, ವಿವಿಧ ಮಹಿಳಾ ಸಂಘ, ಕಲಾವಿದರ ಸಂಘವೂ ಸೇರಿದಂತೆ ಹಲವರು ಹೋರಾಟಕ್ಕೆ ಕೈ ಸೂಚಿಸಿವೆ.