ಬಿ.ಜಿ ಕೆರೆ ಬಳಿ ರು.1.48 ಕೋಟಿ ವೆಚ್ಚದ ಫೂಟ್ ಓವರ್ ಬ್ರಿಡ್ಜ್

| Published : Jul 12 2024, 01:32 AM IST

ಸಾರಾಂಶ

Near Bg kere Fhoot bridge soon

-ಕನ್ನಡಪ್ರಭದ ವರದಿ ಪ್ರದರ್ಶಿಸಿದ ಸಂಸದ ಗೋವಿಂದ ಕಾರಜೋಳ । ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಭೆ

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಮೊಳಕಾಲ್ಮುರು ತಾಲೂಕಿನ ಬಿ.ಜಿ ಕೆರೆ ಗ್ರಾಮದ ಬಳಿ ಸಾರ್ವಜನಿಕ ಓಡಾಟಕ್ಕೆ ಅನುಕೂಲವಾಗುವಲ್ಲಿ ರು.1.48 ಕೋಟಿ ರು. ವೆಚ್ಚದ ಫೂಟ್ ಓವರ್ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಈ ಸಂಬಂಧ ಜುಲೈ 9 ರ ಮಂಗಳವಾರ ಕನ್ನಡಪ್ರಭ ಪ್ರಕಟಿಸಿದ್ದ ಬಿ.ಜಿಕೆರೆ ಅಂಡರ್ ಪಾಸ್, ಭರವಸೆ ಫೇಲ್ ಎಂಬ ತಲೆ ಬರಹದ ವಿಶೇಷ ವರದಿಯ ಸಭೆಯಲ್ಲಿ ಪ್ರದರ್ಶಿಸಿದರು.

ಬಿ.ಜಿ ಕೆರೆ ಬಳಿಯ ಹೆದ್ದಾರಿ ಕಾಮಗಾರಿಯಿಂದ ಗ್ರಾಮ ಎರಡು ಹೋಳಾಗಿದೆ. ಪ್ರತಿನಿತ್ಯ ಜನರು, ಶಾಲಾ ಮಕ್ಕಳು ಓಡಾಡಲು ತೊಂದರೆಯಾಗಿದೆ ಎಂದು ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿದೆ. ಸಮಸ್ಯೆ ನಿವಾರಣೆಗಾಗಿ ರು. 1.48 ಕೋಟಿ ವೆಚ್ಚದ ಫೂಟ್ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಬ್ರಿಡ್ಜ್ ನಿರ್ಮಾಣವಾದಲ್ಲಿ ಶಾಲಾ ಮಕ್ಕಳು ಹಾಗೂ ಸ್ಥಳೀಯರಿಗೆ ಉಪಯೋಗವಾಗಲಿದೆ ಎಂದು ಗೋವಿಂದ ಎಂ ಕಾರಜೋಳ ತಿಳಿಸಿದರು.

ಚಿತ್ರದುರ್ಗ-ಚಳ್ಳಕೆರೆ-ಪಾವಗಡ ಮಧ್ಯದ 120 ಕಿಮೀ ಉದ್ದದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ರಸ್ತೆ ಅಭಿವೃದ್ದಿಯಿಂದ ಆಂದ್ರಪ್ರದೇಶಕ್ಕೆ ಹಾಗೂ ಕರ್ನಾಟಕದ ನಡುವೆ ಸಂಪರ್ಕ ವೃದ್ಧಿಸಲಿದೆ. ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ಅನುಮೋದನೆ ಪಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಕಾರಜೋಳ ಹೇಳಿದರು.

ಚಳ್ಳಕೆರೆ ತಾಲೂಕಿನ 8000 ಎಕರೆ ಪ್ರದೇಶದಲ್ಲಿ ಐಐ ಎಸ್ಸಿ, ಇಸ್ರೋ, ಡಿಆರ್ ಡಿಓ ಸಂಸ್ಥೆಗಳ ಸ್ಥಾಪನೆಯಿಂದ ಈ ಪ್ರದೇಶ ದೇಶದ ಗಮನ ಸೆಳೆದಿದೆ. ಚಳ್ಳಕೆರೆ ನಗರ ವ್ಯಾಪ್ತಿಯ ರಸ್ತೆಗಳು ಸರಿಯಿಲ್ಲ. ಈ ರಸ್ತೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರವು ಅಭಿವೃದ್ಧಿ ಪಡಿಸುತ್ತಿಲ್ಲ. ಆದ್ದರಿಂದ ಚಳ್ಳಕೆರೆ ನಗರ ಪ್ರದೇಶದ 5.7 ಕಿಮೀ, ರಸ್ತೆಯನ್ನು ರು.50 ಕೋಟಿ ವೆಚ್ಚದಲ್ಲಿ ಒಂದು ಬಾರಿಗೆ ಅಭಿವೃದ್ಧಿ ಪಡೆಸಲು ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹಿರಿಯೂರು-ಹುಳಿಯಾರು ಹೆದ್ದಾರಿಯ 31.3 ಕಿಮೀ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ 26 ಕಿಮೀ ಹಾಗೂ ಹೊಸದುರ್ಗ-ಹೊಳಲ್ಕೆರೆ ಹೆದ್ದಾರಿಯ 31.72 ಕಿಮೀ ರಸ್ತೆ ಕಾಮಗಾರಿಯಲ್ಲಿ 26 ಕಿಮೀ ರಸ್ತೆ ನಿರ್ಮಿಸಲಾಗಿದೆ. ಎರಡು ಕಾಮಗಾರಿಗಳ ಪೈಕಿ ಬಾಕಿ ಇರುವ 5 ಕಿಮೀ ರಸ್ತೆಗಳನ್ನು ಇನ್ನೆರೆಡು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಕಡೂರು-ಹೊಸದುರ್ಗ ಹೊಸ ಹೆದ್ದಾರಿ ಕಾಮಗಾರಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 184 ಕೋಟಿ ವೆಚ್ಚದಲ್ಲಿ 48 ಕಿಮೀ ಹೆದ್ದಾರಿ ನಿಮಾರ್ಣಕ್ಕೆ ಶೀಘ್ರ ಕೆಲಸ ಪ್ರಾರಂಭಿಸಲಾಗುವುದು. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 353 ಕಿಮೀ ಉದ್ದ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಇದರಲ್ಲಿ 218 ಕಿಮೀ ರಸ್ತೆ ಭಾರತ ಸರ್ಕಾರದ ಎನ್ ಹೆಚ್ ಎಐ ನಿರ್ವಹಣೆ ಮಾಡುತ್ತಿದೆ. ಉಳಿದ ರಸ್ತೆಯನ್ನು ರಾಜ್ಯದ ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ನಿರ್ವಹಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹೈವೆ ಕಾಮಗಾರಿಗಳನ್ನು 8 ರಿಂದ 10 ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಕಾರಜೋಳ ಹೇಳಿದರು.

ಚಳ್ಳಕೆರೆ ಹಾಗೂ ಹಿರಿಯೂರು ಮಧ್ಯದ ಹೆದ್ದಾರಿ ಕಾಮಗಾರಿ ಭೂ ಸ್ವಾಧೀನ ಸಮಸ್ಯೆ ಹಾಗೂ ಸ್ಥಳೀಯರ ಆಕ್ಷೇಪಣೆಯಿಂದ ವಿಳಂಭ ಆಗಿದೆ. ಸದ್ಯ ಹಿರಿಯೂರು ಸಮೀಪದ 9 ಕಿಮೀ ರಸ್ತೆ ನಿರ್ಮಾಣ ಬಾಕಿ ಇದೆ. ವಿನಾ ಕಾರಣ ಯಾರು ಹೆದ್ದಾರಿ ಅಭಿವೃದ್ಧಿಗೆ ಅಡ್ಡಿಗಾಲು ಹಾಕಬಾರದು. ಸೂಕ್ತ ಪೊಲೀಸ್ ಬಂದೋಬಸ್ತ್ ನಲ್ಲಿ ಈ ಹೆದ್ದಾರಿ ಕಾಮಗಾರಿಯನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ವಿಭಾಗ ಹಾಗೂ ಪ್ರಾಧಿಕಾರದ ಅಧಿಕಾರಿಗಳು ಇದ್ದರು.

-------------------

ಪೋಟೋ:

ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ, ಜುಲೈ 9 ರ ಮಂಗಳವಾರ ಕನ್ನಡಪ್ರಭ ಪ್ರಕಟಿಸಿದ್ದ ಬಿಜಿ ಕೆರೆ ಅಂಡರ್‌ ಪಾಸ್‌, ಭರವಸೆ ಫೇಲ್ ಎಂಬ ತಲೆ ಬರಹದ ವಿಶೇಷ ವರದಿಯ ಪ್ರದರ್ಶಿಸಿದರು.

---------

ಪೋಟೋ: 11 ಸಿಟಿಡಿ4