ಹೊಸಕೋಟೆ: ಬಿರು ಬೇಸಿಗೆ ಪ್ರಾರಂಭವಾಗಿ ನಗರಸಭೆ ವ್ಯಾಪ್ತಿ ಸೇರಿದಂತೆ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಉಂಟಾಗುವ ನೀರಿನ ಸಮಸ್ಯೆ ನಿವಾರಣೆಗೆ ನೂತನ ಕೊಳವೆ ಬಾವಿ ಕೊರೆಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಹೊರವಲಯದ ದೊಡ್ಡಮಾನಿಕೆರೆಯಲ್ಲಿ ನಗರಸಭೆ ಹಾಗೂ ವೈಯುಕ್ತಿಕ ಅನುದಾನದಲ್ಲಿ ನೂತನ ಕೊಳೆಬಾವಿಗಳ ಕೊರೆಸಲು ಚಾಲನೆ ನೀಡಿ ಮಾತನಾಡಿದ ಅವರು, ಬೇಸಿಗೆಯಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿ ಉಲ್ಬಣವಾಗುವ ಹಿನ್ನೆಲೆಯಲ್ಲಿ ನಗರ ದೊಡ್ಡ ಅಮಾನಿಕೆರೆಯಲ್ಲಿ ನಗರಸಭೆ ವತಿಯಿಂದ 9, ವೈಯುಕ್ತಿಕವಾಗಿ 6, ಒಟ್ಟು 15 ಕೊಳವೆಬಾವಿಗಳನ್ನು ಕೊರೆಸುವ ಮೂಲಕ ನಗರ ನಾಗರಿಕರಿಗೆ ನೀರಿನ ಸಮಸ್ಯೆ ಉಂಟಾಗದಂತೆ ಸಮರ್ಪಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಕಳೆದ ಮಳೆಗಾಲದಲ್ಲಿ ತಾಲೂಕಿನಲ್ಲಿ ಸರಾಸರಿ 880 ಮಿಲಿ ಮಳೆಯಾಗುತ್ತಿತ್ತು. ಆದರೆ ಈ ಭಾರಿ ಕೇವಲ ೮೦೦ಮಿಲಿ ಮಳೆಯಾಗಿರುವ ಕಾರಣ ಬೆಳೆಗಳಿಗೆ ಬೇಕಾದಷ್ಟೆ ನೀರು ದಕ್ಕಿದ್ದು, ಕಾಲುವೆ ಮೂಲಕ ಕೆರೆಯಲ್ಲಿ ಶೇಖರಣೆಯಾಗುವಷ್ಟು ಸಂಗ್ರಹವಾಗಿಲ್ಲ. ಆದ್ದರಿಂದ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿ ಸುಮಾರು 40 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವ ಕಡೆ ನೂತನ ಕೊಳವೆಬಾವಿ ಕೊರೆಸಲು ಅನುಮತಿ ಹಾಗೂ ರೈತರು ತಮ್ಮ ಕೊಳವೆಬಾವಿಗಳಿಂದ ನೀಡುವ ನೀರಿಗೆ ಸ್ಥಳೀಯ ಗ್ರಾಪಂ, ನಗರಸಭೆಯಿಂದ ನೀಡಬೇಕಾದ ಅನುದಾನ ಕೊಡುತ್ತೇವೆ ಎಂದರು.ಒಟ್ಟಾರೆ ಯುಗಾದಿ ಹಬ್ಬದ ವೇಳೆಗೆ ಮೂರ್ನಾಲ್ಕು ದಿನಕ್ಕೊಮ್ಮೆ ನಗರಕ್ಕೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. 15 ಕೊಳವೆಬಾಕಿ ಪೈಕಿ 5 ಬಾಲಾಜಿ ಲೇ ಔಟ್, 4 ಘಟ್ಟಿಗನಬ್ಬೆ ಸಂಪ್ ಭಾಗದಲ್ಲಿ, ದೊಡ್ಡಬಾವಿ ಸಂಪ್ಗೆ ಹರಿಸಲು 6 ಕೊಳವೆಬಾವಿಗಳನ್ನು ದೊಡ್ಡಕೆರೆ ಭಾಗದಲ್ಲಿ ಕೊರೆಸಲಾಗುತ್ತಿದೆ ಎಂದರು.
ಈ ವೇಳೆ ನಗರಸಭೆ ಪೌರಾಯುಕ್ತ ನೀಲಲೋಚನಪ್ರಭು, ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿವಿ.ಭೈರೇಗೌಡ, ಬಿಎಂಆರ್ಡಿಎ ಅಧ್ಯಕ್ಷ ಕೇಶವಮೂರ್ತಿ, ಮಾಜಿ ಅದ್ಯಕ್ಷ ವಿಜಯ್ ಕುಮಾರ್, ಟೌನ್ ಬ್ಯಾಂಕ್ ಉಪಾಧ್ಯಕ್ಷ ಬೈರಿಜಾನ್, ನಿರ್ದೇಶಕ ವಿಷ್ಣು, ಗೋಪಾಲ್, ಯುವ ಮುಖಂಡ ರಾಕೇಶ್, ವರುಣ್, ಅನೂಪ್ಗೌಡ, ನಾಗರಾಜ್, ಹರೀಶ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.ಫೋಟೋ: 5 ಹೆಚ್ಎಸ್ಕೆ 1
ಹೊಸಕೋಟೆ ನಗರದ ದೊಡ್ಡಅಮಾನಿಕೆರೆ ವ್ಯಾಪ್ತಿಯಲ್ಲಿ ನೂತನ ಕೊಳವೆ ಬಾವಿಗಳನ್ನು ಕೊರೆಸಲು ಶಾಸಕ ಶರತ್ ಬಚ್ಚೇಗೌಡ, ಟೌನ್ ಕಾಂಗ್ರೆಸ್ ಅದ್ಯಕ್ಷ ಬಿ.ವಿ.ಬೈರೇಗೌಡ ಭೂಮಿಪೂಜೆ ನೆರವೇರಿಸಿದರು.