ಕುಡಿಯುವ ನೀರು ಪೂರೈಕೆಯಲ್ಲಿ ಅಗತ್ಯ ಕ್ರಮ

| Published : Apr 18 2025, 12:46 AM IST

ಸಾರಾಂಶ

ಸದ್ಯ ಪಟ್ಟಣದಲ್ಲಿ ಪ್ರತಿ ವಾರ್ಡ್‌ನಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ನಿರಂತರ ನಿಗಾ ವಹಿಸಲಾಗಿದೆ. ಜತೆಗೆ 2025-26ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಎಸ್ಸಿಪಿ ಹಾಗೂ ಟಿಎಸ್‌ಪಿ ಅನುದಾನದಡಿಯಲ್ಲಿ ವಿವಿಧ ಕ್ರೀಯಾ ಯೋಜನೆ ಮಂಜೂರಾತಿಗೆ ಅನುಮೋದನೆ ಕೂಡ ಪಡೆಯಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಸದ್ಯ ಪಟ್ಟಣದಲ್ಲಿ ಪ್ರತಿ ವಾರ್ಡ್‌ನಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ನಿರಂತರ ನಿಗಾ ವಹಿಸಲಾಗಿದೆ. ಜತೆಗೆ 2025-26ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಎಸ್ಸಿಪಿ ಹಾಗೂ ಟಿಎಸ್‌ಪಿ ಅನುದಾನದಡಿಯಲ್ಲಿ ವಿವಿಧ ಕ್ರೀಯಾ ಯೋಜನೆ ಮಂಜೂರಾತಿಗೆ ಅನುಮೋದನೆ ಕೂಡ ಪಡೆಯಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ ಹೇಳಿದರು.

ಪಪಂ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಪಂ ವಿವಿಧ ವಾರ್ಡ್‌ಗಳಲ್ಲಿನ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಿ ಮುಂದಿನ ಕ್ರಮಗಳ ಕುರಿತು ಸಭೆಯ ಗಮನಕ್ಕೆ ತಂದು ಮಾತನಾಡಿದರು.ಪಟ್ಟಣದ11ನೇ ವಾರ್ಡ್‌ ಸದಸ್ಯೆ ಮೀನಾಕ್ಷಿ ಕೊತ್ತಲಮಠ ಮಾತನಾಡಿ, ನನ್ನ ವಾರ್ಡ್‌ನಲ್ಲಿ ಚರಂಡಿ ತುಂಬಿ ಗಬ್ಬೆದ್ದು ನಾರುತ್ತಿವೆ. ರಸ್ತೆ, ಕುಡಿಯುವ ನೀರಿನ ಸಮಸ್ಯೆಯಿದೆ. ನಾನು ಹಲವಾರು ಬಾರಿ ಸಭೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಜನರಿಗೆ ಏನೆಂದು ಮುಖ ತೋರಿಸಲಿ ಎಂದು ಅಸಮಾಧಾನ ತೋಡಿಕೊಂಡರು.ಇದಕ್ಕೆ ಪ್ರತಿಕ್ರಿಯಿಸಿದ ಪಪಂ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ, ಆದಷ್ಟು ಬೇಗನೆ ಒಳಚರಂಡಿ ಸ್ವಚ್ಛತೆಗೊಳಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸಿಬ್ಬಂದಿಗೆ ಸೂಚಿಸಿದರು.ಪಟ್ಟಣದ ಸರ್ಕಾರಿ ಆಸ್ಪತ್ರೆ ಹತ್ತಿರ ಆಶ್ರಯ ಕಾಲೋನಿಯಲ್ಲಿ 60ಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿವೆ. ಅಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್ ಹಾಗೂ ಇತರೆ ಯಾವುದೇ ಮೂಲಸೌಲಭ್ಯಗಳಿಲ್ಲ. ಆ ಸ್ಥಳದಲ್ಲಿ ವಾಸವಾಗಿರುವ ಜನರ ಗತಿಯೇನು? ಪಟ್ಟಣದಲ್ಲಿ ಮನೆಯ ಬಾಡಿಗೆ ಹೆಚ್ಚಾಗಿರುವುದರಿಂದ ಬಾಡಿಗೆ ತುಂಬಲಾರದೆ ಆಶ್ರಯ ಮನೆಗಳ ಆಶ್ರಯ ಪಡೆಯಲು ಸುಮಾರು ಹತ್ತಾರು ಮನೆಯ ಕುಟುಂಬಸ್ಥರು ಅಲ್ಲಿ ವಾಸವಾಗಿದ್ದಾರೆ ಎಂದು ಆಶ್ರಯ ಕಾಲೋನಿಯ ಕುರಿತು ಪಪಂ ಸದಸ್ಯರಾದ ಸಿದ್ದಲಿಂಗೇಶ ನಾಗರಾಳ, ಅಜೀಜ ಬಾಯಿಸರ್ಕಾರ ಹಾಗೂ ಸಿದ್ದು ಮಾದರ ಜಂಟಿಯಾಗಿ ಸಭೆಯ ಗಮನ ಸೆಳೆದರು.

ಆಶ್ರಯ ಕಾಲೋನಿಯಲ್ಲಿ ಕಚ್ಚಾ ರಸ್ತೆ ನಿರ್ಮಾಣ ಮಾಡಿ, ಕುಡಿಯುವ ನೀರಿನ ತೊಟ್ಟೆ, ಮುಳ್ಳುಕಂಟೆ ಸ್ವಚ್ಛತೆ ಹಾಗೂ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು. ಶೀಘ್ರದಲ್ಲಿಯೇ ಆಶ್ರಯ ಕಾಲೋನಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು.ಪಟ್ಟಣದ ಹೋಟೆಲ್‌ಗಳಲ್ಲಿ ಹಾಗೂ ಬೀದಿಬದಿ ವ್ಯಾಪಾರಿಗಳು ಸಾರ್ವಜನಿಕರು ತಿನ್ನುವ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತರಲಾಯಿತು. ಆಗ ಇದರ ಬಗ್ಗೆ ಚರ್ಚೆ ಮಾಡಲು ಪಪಂ ಕಾರ್ಯಾಲಯದಲ್ಲಿ ಹೋಟೆಲ್ ಮಾಲೀಕರ ಹಾಗೂ ಬೀದಿಬದಿ ವ್ಯಾಪಾರಸ್ಥರ ಸಭೆಯನ್ನು ಆಯೋಜಿಸಿ ಚರ್ಚಿಸಲಾಗುವುದು ಎಂದರು.ಪಪಂ ಅಧ್ಯಕ್ಷ ರಾಮಚಂದ್ರ ಬೋರ್ಜಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕಲಾವತಿ ಗಡ್ಡದವರ, ಸದಸ್ಯರಾದ ಪಡಿಯಪ್ಪ ಕರಿಗಾರ, ರುಕ್ಮವ್ವ ಗಚ್ಚಿನಮನಿ, ಮುತ್ತವ್ವ ಗಾಣಿಗೇರ, ಸಂತೋಷ ನಿಂಬಾಳಕರ, ಯಲಗುರದಪ್ಪ ಬೋರ್ಜಿ, ಅಜಿನಾಬೇಗಂ ಜುಮನಾಳ, ಪರಶುರಾಮ ಮಮದಾಪೂರ ಇದ್ದರು.