ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಬೇಕು: ನ್ಯಾ. ಆರ್. ಚಂದ್ರಪ್ಪ ಹೊನ್ನೂರು

| Published : Jun 19 2025, 11:50 PM IST / Updated: Jun 19 2025, 11:51 PM IST

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಬೇಕು: ನ್ಯಾ. ಆರ್. ಚಂದ್ರಪ್ಪ ಹೊನ್ನೂರು
Share this Article
  • FB
  • TW
  • Linkdin
  • Email

ಸಾರಾಂಶ

ಬಾಲಕಾರ್ಮಿಕ ಪದ್ದತಿ ಎನ್ನುವ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಂಘ-ಸಂಸ್ಥೆಗಳು ಜಾಥಾ ನಡೆಸುವ ಮೂಲಕ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಆರ್. ಚಂದ್ರಪ್ಪ ಹೊನ್ನೂರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸೊರಬ

ಬಾಲಕಾರ್ಮಿಕ ಪದ್ದತಿ ಎನ್ನುವ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಂಘ-ಸಂಸ್ಥೆಗಳು ಜಾಥಾ ನಡೆಸುವ ಮೂಲಕ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಆರ್. ಚಂದ್ರಪ್ಪ ಹೊನ್ನೂರು ಅಭಿಪ್ರಾಯಪಟ್ಟರು.

ಗುರುವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ವತಿಯಿಂದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ತಬ್ದ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದರು.

ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಹಾಗೂ ಈ ಅನಿಷ್ಟ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜೂನ್ ೧೨ ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ದೇಶದಲ್ಲಿ ಬಾಲಕಾರ್ಮಿಕರನ್ನು ನಿಷೇಧಿಸಲಾಗಿದ್ದು, ಹದಿನಾಲ್ಕು ವರ್ಷದೊಳಗಿನ ವಯಸ್ಸಿನ ಮಕ್ಕಳನ್ನು ಬಾಲ ಕಾರ್ಮಿಕರೆನ್ನಲಾಗಿದೆ. ಆದರೆ ಇಂದಿಗೂ ಬಡತನವೆನ್ನುವುದು ಅನೇಕ ಮಕ್ಕಳನ್ನು ದುಡಿಯುವಂತೆ ಮಾಡುತ್ತಿದೆ. ಬಡತನ, ಪೋಷಕರ ನಿರ್ಲಕ್ಷ್ಯದ ಕಾರಣ ವಿಶ್ವದಾದ್ಯಂತ ಕೋಟ್ಯಾಂತರ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಲೇ ಇದ್ದಾರೆ. ಹೀಗಾಗಿ ಓದುವ ವಯಸ್ಸಿನಲ್ಲಿ ದುಡಿಯಲು ಹೋಗಿ ಸುಂದರವಾದ ಬಾಲ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿರುವ ಬಾಲಕಾರ್ಮಿಕತನವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಪ್ರತಿಯೊಂದು ಸಂಘ-ಸಂಸ್ಥೆಗಳು ಶ್ರಮಿಸಬೇಕಿದೆ ಎಂದರು.

ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ಸ್ತಬ್ಧ ವಾಹನದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪೋಷಕರು ತಮ್ಮ ಮಕ್ಕಳನ್ನು ಲಾಲನೆ, ಪಾಲನೆ, ಪೋಷಣೆ ಮಾಡಿ ಉತ್ತಮ ಶಿಕ್ಷಣ ನೀಡಬೇಕು ಎನ್ನುವುದು ಜಾಥಾದ ಉದ್ದೇಶವಾಗಿದೆ. ಆದ್ದರಿಂದ ಅಪಾಯಕಾರಿ ಕೆಲಸದಲ್ಲಿ ಮತ್ತು ಯಾವುದೋ ರೂಪದಲ್ಲಿ ಬಾಲಕಾರ್ಮಿಕರು ಕಂಡು ಬಂದಲ್ಲಿ ತಕ್ಷಣ ಕಾರ್ಮಿಕ ಅಧಿಕಾರಿಗಳಿಗೆ ಮಾಹಿತಿ ತಿಳಿಸಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶ ರಾಜು ಕೆ. ಶೇಡಬಾಳಕರ್, ವಕೀಲರ ಸಂಘದ ಅಧ್ಯಕ್ಷ ಸಿ.ವೈ. ಅಶೋಕ್, ಕಾರ್ಯದರ್ಶಿ ಅರುಣ್, ಉಪಾಧ್ಯಕ್ಷೆ ಸಿ.ಬಿ. ಮಂಜಮ್ಮ, ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್, ಸೊರಬ ವೃತ್ತ ಕಾರ್ಮಿಕ ನಿರೀಕ್ಷಕಿ ಬಿ. ಶಿಲ್ಪಾ, ಯೋಜನಾ ನಿರ್ದೇಶಕ ರಘುನಾಥ್, ಹಿರಿಯ ವಕೀಲ ಎಂ.ಆರ್. ಪಾಟೀಲ್, ರಂಗನಾಥ ಚಕ್ರಪಾಣಿ, ಉಮೇಶ್, ಸುಧಾಕರ ಪಿ. ನಾಯ್ಕ, ಓಂಕಾರಪ್ಪ, ಆಶಿಕ್ ನಾಗಪ್ಪ, ಗುರುನಾಥ ಪಾಟೀಲ್, ರಾಮಪ್ಪ, ಶಾಂಭವಿ ಮೊದಲಾದವರು ಹಾಜರಿದ್ದರು.