ನಗರದಲ್ಲಿ ಆ.1ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದ್ದ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದ ಸ್ಥಳದಲ್ಲಿಯೇ ಎರಡು ತಿಂಗಳು ಕಳೆದರೂ ಒಂದು ಭಾಗದ ತ್ಯಾಜ್ಯ ತೆರವುಗೊಳಿಸದೆ ನಿರ್ಲಕ್ಷ್ಯ ತೋರಿದ ಉಸ್ತುವಾರಿ ಬಿಡಿಎ ಅಧಿಕಾರಿಯನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತೀವ್ರ ತರಾಟೆಗೆ ತೆಗೆದುಕೊಂಡರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಆ.1ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದ್ದ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದ ಸ್ಥಳದಲ್ಲಿಯೇ ಎರಡು ತಿಂಗಳು ಕಳೆದರೂ ಒಂದು ಭಾಗದ ತ್ಯಾಜ್ಯ ತೆರವುಗೊಳಿಸದೆ ನಿರ್ಲಕ್ಷ್ಯ ತೋರಿದ ಉಸ್ತುವಾರಿ ಬಿಡಿಎ ಅಧಿಕಾರಿಯನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತೀವ್ರ ತರಾಟೆಗೆ ತೆಗೆದುಕೊಂಡರು.ಹೆಬ್ಬಾಳ ಮೇಲ್ಸೇತುವೆ ಬಳಿ ಶುಕ್ರವಾರ ದಿಢೀರ್ ಭೇಟಿ ನೀಡಿದ ಅವರು, ಫ್ಲೈಓವರ್ ಪಕ್ಕದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಇರುವುದನ್ನು ಕಂಡು ಇದು ಯಾರಿಗೆ ಸೇರಿದ್ದು ಎಂದು ಪ್ರಶ್ನಿಸಿದ್ದಕ್ಕೆ, ಬಿಡಿಎ ಎಇಇ ವಿಜಯ ರೆಡ್ಡಿ ಬಿಡಿಎ ವ್ಯಾಪ್ತಿಗೆ ಬರುತ್ತೆ, ಕಂಟ್ರಾಕ್ಟರ್ ಈ ಮೆಟೀರಿಯಲ್ ಇರಿಸಿದ್ದಾರೆ, ಅವರಿಗೆ ಹೇಳುತ್ತೇನೆ ಎಂದಿದ್ದಾರೆ.
ಇದಕ್ಕೆ ಕೋಪಗೊಂಡ ಸಚಿವರು, ಎಲ್ಲರೂ ಕಂಟ್ರಾಕ್ಟರ್ಗಳ ಪರ ಮಾತನಾಡಲು ಬರುತ್ತೀರಿ, ನೀವು ಕೆಲಸ ಮಾಡುತ್ತಿರುವುದು ಕಂಟ್ರಾಕ್ಟರ್ ಪರವಾಗಿಯೋ ಅಥವಾ ಸಾರ್ವಜನಿಕರಿಗಾಗಿಯೋ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದ ಅಧಿಕಾರಿ ಕೂಡಲೆ ಈ ತ್ಯಾಜ್ಯ ತೆರವು ಮಾಡುತ್ತೇನೆ ಎಂದು ತಿಳಿಸಿದರು.ನಂತರ ಸಚಿವರು ಅಧಿಕಾರಿಗೆ ಕೂಡಲೆ ಈ ಸ್ಥಳದ ನಕ್ಷೆ ಬೇಕು. ಈ ಜಾಗದಲ್ಲಿ ಏನು ಬರಬೇಕು. ಇಲ್ಲಿ ಖಾಲಿ ಬಿಟ್ಟಿರುವುದು ಏಕೆ ತಿಳಿಯಬೇಕು. ನಕ್ಷೆ ಪರಿಶೀಲಿಸಿ ಈ ತ್ಯಾಜ್ಯ ತೆರವಿಗೆ ಖಾಲಿ ಜಾಗ ಇರುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು. ಸಚಿವರು ಸ್ಥಳದಿಂದ ತೆರಳಿದ ನಂತರ ವಿಜಯ್ ರೆಡ್ಡಿ ಅಲ್ಲಿದ್ದ ತ್ಯಾಜ್ಯವನ್ನು ತೆರವುಗೊಳಿಸಿದರು.
ಗುಡಿಸಲು ತೆರವು:ಆ.1ರಿಂದ ಆರಂಭಿಸಲಾಗಿದ್ದ ತ್ಯಾಜ್ಯದಿಂದ ತೆರವು ಅಭಿಯಾನದಿಂದ ಹೆಬ್ಬಾಳ ಫ್ಲೈಓವರ್ ಸುತ್ತಮುತ್ತ ಇದ್ದ ತ್ಯಾಜ್ಯ ತೆರವುಗೊಳಿಸಿ ಶೇ.90ರಷ್ಟು ಜಾಗ ಖಾಲಿಯಾಗಿದೆ. ಆದರೆ, ಈ ಜಾಗದಲ್ಲಿ ಅಲ್ಲಲ್ಲಿ ಕಲ್ಲು, ಮಣ್ಣು ಇತರೆ ವಸ್ತುಗಳು ಬಿದ್ದಿದ್ದು, ಕಳೆದ ತಿಂಗಳು ಇದನ್ನು ಸರಿಪಡಿಸಿ ಅಕ್ರಮವಾಗಿ ಕೆಲ ಜನರು ಗುಡಿಸಲು ನಿರ್ಮಿಸಲು ಮುಂದಾಗಿದ್ದರು ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಲ್ಲಿಂದ ಗುಡಿಸಲು ತೆರವುಗೊಳಿಸಿದರು ಎನ್ನಲಾಗಿದೆ.
ಇದರಿಂದಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಬಿಡಿಎ ಸೇರಿದಂತೆ ಇತರೆ ಇಲಾಖೆಗಳು ಪಾಲಿಕೆ ಜೊತೆ ಸಹಕರಿಸದಿದ್ದರೆ, ಬೆಂಗಳೂರು ನಗರದ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ, ಎಲ್ಲರೂ ಪರಸ್ಪರ ಸಹಕಾರ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
