ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದ ನೆಲ್ಲಿಕಟ್ಟೆಯಲ್ಲಿರುವ ಉದ್ಯಾನವನದಲ್ಲಿ ಶನಿವಾರ ಕರ್ನಾಟಕ ರಾಜ್ಯದಲ್ಲಿ ಮೂರನೇ ಅತೀ ಎತ್ತರದ ರಾಷ್ಟ್ರ ಧ್ವಜಸ್ತಂಭ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಷ್ಟ್ರ ಧ್ವಜಸ್ತಂಭಕ್ಕೆ ಶಿಲಾನ್ಯಾಸ ನೆರವೇರಿತು.

ಇದು ರಾಜ್ಯದ ಮೂರನೇ ಅತಿ ದೊಡ್ಡ ಧ್ವಜಸ್ತಂಭ: ಶಾಸಕ ಅಶೋಕ್‌ ರೈ

ಪುತ್ತೂರು: ರಾಜ್ಯದಲ್ಲಿ ತಾಲೂಕು ಮಟ್ಟದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ರಾಷ್ಟ್ರ ಧ್ವಜಸ್ತಂಭ ಪ್ರಥಮವಾಗಿ ನಿರ್ಮಾಣಗೊಳ್ಳುತ್ತಿದೆ. ರಾಷ್ಟ್ರಪ್ರೇಮಕ್ಕಾಗಿ ಅಳವಡಿಸಿದ ಧ್ವಜಸ್ತಂಭ ಎಂದು ಇದು ಇತಿಹಾಸದ ಪುಟದಲ್ಲಿ ದಾಖಲಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದ ನೆಲ್ಲಿಕಟ್ಟೆಯಲ್ಲಿರುವ ಉದ್ಯಾನವನದಲ್ಲಿ ಶನಿವಾರ ಕರ್ನಾಟಕ ರಾಜ್ಯದಲ್ಲಿ ಮೂರನೇ ಅತೀ ಎತ್ತರದ ರಾಷ್ಟ್ರ ಧ್ವಜಸ್ತಂಭ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಷ್ಟ್ರ ಧ್ವಜಸ್ತಂಭಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತಾಡಿದರು.

ಶಾಸಕರ ಅನುದಾನದ ರು.೨೫ ಲಕ್ಷ, ಪುತ್ತೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ರು. ೩೫ ಲಕ್ಷ ಹಾಗೂ ನಗರಸಭೆಯ ರು.೪೦ ಲಕ್ಷ ಸೇರಿದಂತೆ ಒಟ್ಟು ಸೇರಿಸಿಕೊಂಡು ರು. ೧ ಕೋಟಿ ವೆಚ್ಚದಲ್ಲಿ ಧ್ವಜಸ್ತಂಭ ನಿರ್ಮಾಣವಾಗಲಿದೆ.

ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಶಾಸಕ ಆಶೋಕ್ ಕುಮಾರ್ ರೈ, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಧ್ವಜಸ್ತಂಭ ನಿರ್ಮಾಣ ಆಗುತ್ತಿರುವುದು ಪುತ್ತೂರಿನಲ್ಲೇ ಪ್ರಥಮ. ಧ್ವಜಸ್ತಂಭ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯಲಿದ್ದು ಮುಂದಿನ ಗಣರಾಜ್ಯೋತ್ಸವ ದಿನ ಜ.೨೬ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದರು. ಪುತ್ತೂರಿನ ಪುಡಾದಲ್ಲಿ ಸುಮಾರು ರು. ೮ ಕೋಟಿ ಹಣ ಹಲವು ವರ್ಷಗಳಿಂದ ಬಳಕೆಯಾಗದೆ ಉಳಿದಿತ್ತು. ಈ ಹಣವನ್ನು ಧ್ವಜಸ್ತಂಭ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಜೊತೆಗೆ ನಗರದ ಬೊಳುವಾರಿನಲ್ಲಿ ಸರ್ಕಲ್, ದರ್ಬೆಯಲ್ಲಿ ಕ್ಲಾಕ್ ಟವರ್, ಅರುಣಾ ಚಿತ್ರಮಂದಿರದ ಬಳಿ ರಸ್ತೆ ಅಭಿವೃದ್ಧಿ, ಮಯೂರ ಚಿತ್ರಮಂದಿರದ ಬಳಿ ರಸ್ತೆ ವಿಸ್ತರಣೆ, ರು. ೨.೭೩ ಕೋಟಿ ಹಣದಲ್ಲಿ ದೇವಾಲಯದ ಕೆರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಪುತ್ತೂರು ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ, ಈ ಧ್ವಜಸ್ತಂಭ ೮೦ ಮೀಟರ್ ಎತ್ತರ. ೧ ಸಾವಿರ ಚರದ ಅಡಿ ವಿಸ್ತೀರ್ಣ ಹೊಂದಿದ್ದು, ೨೪೦೦ ಚದರ ಅಡಿಯ ಧ್ವಜದೊಂದಿಗೆ ಹಾರಾಡಲಿದೆ ಎಂದರು. ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ನಗರಸಭಾ ಇಂಜಿನಿಯರ್ ಕೃಷ್ಣಮೂರ್ತಿ ರೆಡ್ಡಿ ಹಾಜರಿದ್ದರು.ಪ್ರಮುಖರಾದ ಪಂಜಿಗುಡ್ಡೆ ಈಶ್ವರ ಭಟ್, ಡಾ. ರಾಜಾರಾಂ ಕೆ.ಬಿ., ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಜಯಂತಿ ಬಲ್ನಾಡು, ಸೂತ್ರಬೆಟ್ಟು ಜಗನ್ನಾಥ ರೈ, ಪ್ರಸಾದ್ ಕೌಶಲ್ ಶೆಟ್ಟಿ, ವಲೇರಿಯನ್ ಡಯಾಸ್, ಝೇವಿಯರ್ ಡಿಸೋಜ, ವಾಸುದೇವ ಆಚಾರ್ಯ, ನಳಿನಿ ಪಿ. ಶೆಟ್ಟಿ, ಮುರಳೀಧರ ರೈ ಮಠಂತಬೆಟ್ಟು, ಯೂಸುಫ್, ಶಿವರಾಮ ಆಳ್ವ, ಪ್ರಸನ್ನ ಶೆಟ್ಟಿ, ಅಬೂಬಕ್ಕರ್ ಆರ್ಲಪದವು, ಜೋಕಿಂ ಡಿಸೋಜ, ಚಂದ್ರಹಾಸ ಶೆಟ್ಟಿ, ಚಂದ್ರಪ್ರಭಾ ಗೌಡ ಮತ್ತಿತರರಿದ್ದರು.ಪುಡಾ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್ ಸ್ವಾಗತಿಸಿದರು. ಅನ್ವರ್ ಖಾಸಿಂ ವಂದಿಸಿದರು. ನಿಹಾಲ್ ಪಿ. ಶೆಟ್ಟಿ ನಿರ್ವಹಿಸಿದರು.