ಸಾರಾಂಶ
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಜೀವನದ ಏಳು ಬೀಳುಗಳೊಂದಿಗೆ ಬೆಳೆದ ಪರಿಣಾಮವೇ ಅವರ ಜೀವನದಲ್ಲಿ ಯಶಸ್ವಿಯಾಗಿ ಬೆಳೆಯಲು ಸಾದ್ಯ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯಪಟ್ಟಿದ್ದಾರೆ.ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.ನೆಲ್ಯಹುದಿಕೇರಿ ಕೆಪಿಎಸ್ ಯಾವುದೇ ಖಾಸಗಿಶಾಲೆಗೂ ಕಮ್ಮಿಇಲ್ಲದಂತೆ ಅಭಿವೃದ್ಧಿ ಹೊಂದಿದೆ. ಇದೀಗ ರು. 2 ಕೋಟಿ ವೆಚ್ಚದಲ್ಲಿ 11 ಕೊಠಡಿಗಳನ್ನೊಳಗೊಂಡ ನೂತನ ಸುಸಜ್ಜಿತ ಕೊಠಡಿಗಳ ಕಟ್ಟಡ ಉದ್ಘಾಟನೆಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶ ಮಾಡಲಾಗಿದೆ ಎಂದರು.
ಇತ್ತೀಚೆಗೆ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿರುವ ನಡುವೆ ನೆಲ್ಯಹುದಿಕೇರಿ ಕೆಪಿಎಸ್ ಸಂಸ್ಥೆ ಅತೀ ಹೆಚ್ಚು ವಿದ್ಯಾರ್ಥಿಗಳು ಹೊಂದಿರುವುದು ವಿಶೇಷವಾಗಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಹೆಚ್ಚಳವಾಗುತ್ತಿದ್ದಂತೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ಈ ನಿಟ್ಟಿನಲ್ಲಿ ಸಿಬ್ಬಂದಿಗಳ ಕೊರತೆಯಾಗದಂತೆ ಎಚ್ಚರವಹಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.ಪೋಷಕರು ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡ ಹಾಕಬಾರದು. ಬದಲಿಗೆ ಕಲಿಕೆಯೊಂದಿಗೆ ಕಲೆ, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಮೂಲಕ ಸಾಧನೆಗೆ ಅವಕಾಶ ಮಾಡಿಕೊಡಬೇಕೆಂದರು.
ವಸಂತಕುಮಾರ್ ಮಾತನಾಡಿದರು.ಪ್ರೌಢಶಾಲೆ ವಿಭಾಗದ ಫುಟ್ಬಾಲ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಂತರ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭೋಜನ ಕೂಟ ಏರ್ಪಡಿಸಲಾಗಿತ್ತು.ಕೆಪಿಎಸ್ ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಮುಸ್ತಫಾ ಪಿ ಕೆ, ಗ್ರಾ.ಪಂ ಅಧ್ಯಕ್ಷೆ ದಮಯಂತಿ, ಪಿಡಿಒ ನಂಜುಂಡಸ್ವಾಮಿ, ಸದಸ್ಯರಾದ ಹಕೀಂ, ಹನೀಫ, ಅಫ್ಸಲ್, ಸುಜಾತಾ, ತಾಲೂಕು ಗ್ಯಾರಂಟಿ ಯೋಜನ ಅನುಷ್ಠಾನ ಸಮಿತಿ ಸದಸ್ಯ ಶಶಿಧರ್, ಕೆಡಿಪಿ ಸದಸ್ಯೆ ಸುನಿತಾ ಮಂಜುನಾಥ್, ಬಿಇಒ ಭಾಗ್ಯ, ಪ್ರಾಂಶುಪಾಲರಾದ ಆಲ್ವರೀಸ್, ಉಪಪ್ರಾಂಶುಪಾಲ ಅನಿಲ್, ಮುಖ್ಯೋಪಾಧ್ಯಾಯ ಭಾರತಿ ಮತ್ತಿತರರು ಹಾಜರಿದ್ದರು.