ನಗರದ ಬೋಳಾರದ ನೇತ್ರಾವತಿ ನದಿ ತೀರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ 68 ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿರುವ ವಾಟರ್ ಫ್ರಂಟ್- ಸೈಕಲ್ ಟ್ರ್ಯಾಕ್ ಕಾಮಗಾರಿಯ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಪೀಠ ಅಂತಿಮ ಆದೇಶ ಹೊರಡಿಸಿದ್ದು, ಸಿಆರ್ಝಡ್-2011ನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಅದರಂತೆ ಮುಂದಿನ 15 ದಿನದೊಳಗೆ ಯೋಜನೆಯ ನಿರ್ಮಾಣಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಈ ಆದೇಶ ಅನುಷ್ಠಾನಗೊಳಿಸುವಂತೆ ಎನ್ಜಿಟಿಗೆ ಎಕ್ಸಿಕ್ಯೂಟಿವ್ ಪಿಟಿಶನ್ ಸಲ್ಲಿಸಲಾಗುವುದು
ಮಂಗಳೂರು: ನಗರದ ಬೋಳಾರದ ನೇತ್ರಾವತಿ ನದಿ ತೀರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ 68 ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿರುವ ವಾಟರ್ ಫ್ರಂಟ್- ಸೈಕಲ್ ಟ್ರ್ಯಾಕ್ ಕಾಮಗಾರಿಯ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಪೀಠ ಅಂತಿಮ ಆದೇಶ ಹೊರಡಿಸಿದ್ದು, ಸಿಆರ್ಝಡ್-2011ನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಅದರಂತೆ ಮುಂದಿನ 15 ದಿನದೊಳಗೆ ಯೋಜನೆಯ ನಿರ್ಮಾಣಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಈ ಆದೇಶ ಅನುಷ್ಠಾನಗೊಳಿಸುವಂತೆ ಎನ್ಜಿಟಿಗೆ ಎಕ್ಸಿಕ್ಯೂಟಿವ್ ಪಿಟಿಶನ್ ಸಲ್ಲಿಸಲಾಗುವುದು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್ಇಸಿಎಫ್) ಪದಾಧಿಕಾರಿಗಳು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್ಇಸಿಎಫ್ ಗೌರವ ಕಾರ್ಯದರ್ಶಿ ಶಶಿಧರ ಶೆಟ್ಟಿ, 2011ರ ಸಿಆರ್ಝಡ್ ನಿಯಮದಂತೆ ಈ ವ್ಯಾಪ್ತಿಯಡಿ ಕೈಗೊಳ್ಳಬಹುದಾದ ಯೋಜನೆಗಳ ಪಟ್ಟಿ ಇದೆ. ಅವುಗಳನ್ನು ಬಿಟ್ಟು ಸೈಕಲ್ ಟ್ರ್ಯಾಕ್, ವಾಕಿಂಗ್ ಪಾತ್ ಸೇರಿದಂತೆ ಬೇರಾವ ಯೋಜನೆಗಳನ್ನೂ ಮಾಡಲು ಅವಕಾಶವಿಲ್ಲ. ಆದ್ದರಿಂದ ಈಗಾಗಲೇ ಯೋಜನೆ ಹೆಸರಿನಲ್ಲಿ ಮಾಡಿರುವ ನಿರ್ಮಾಣಗಳನ್ನು ತೆರವುಗೊಳಿಸಿ ಅಲ್ಲಿನ ಪರಿಸರವನ್ನು ಈ ಹಿಂದಿನಂತೆ ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.ಈ ಯೋಜನೆಗಾಗಿ ನೇತ್ರಾವತಿ ನದಿ ದಂಡೆಯಲ್ಲಿದ್ದ ಪರಿಸರ ಸೂಕ್ಷ್ಮ ಕಾಂಡ್ಲಾ ವನ, ಬಹಳಷ್ಟು ಮರಗಳನ್ನು ಕಡಿಯಲಾಗಿದೆ. ಮೇಲಾಗಿ ಸಿಆರ್ಝಡ್ ನಿಯಮ ಉಲ್ಲಂಘಿಸಿರುವ ಕುರಿತು 2014ರಲ್ಲಿ ಎನ್ಜಿಟಿಯಲ್ಲಿ ದೂರು ದಾಖಲಿಸಿದ್ದೆವು. ಯೋಜನೆ ಆರಂಭವಾದಾಗಿನಿಂದ ಅಲ್ಲಿನ ಜೀವ ಸಂಕುಲಕ್ಕೆ ಹಾನಿಯಾಗಿದೆ ಎಂದರು.
ಎನ್ಇಸಿಎಫ್ ಸದಸ್ಯ ಬೆನೆಡಿಕ್ಟ್ ಫರ್ನಾಂಡಿಸ್ ಮಾತನಾಡಿ, 2.1 ಕಿ.ಮೀ. ಉದ್ದದ ಈ ಜಲಮುಖಿ ವಾಯು ವಿಹಾರ ಯೋಜನೆಗಾಗಿ ಈವರೆಗೆ 600 ಮೀ. ಉದ್ದದ ವಾಕಿಂಗ್ ಪಾತ್, ಟಿಕೆಟ್ ಕೌಂಟರ್ ಕಟ್ಟಡ, ಶೌಚಾಲಯ ಕಟ್ಟಡ ಇತ್ಯಾದಿ ನಿರ್ಮಾಣಗಳನ್ನು ಮಾಡಲಾಗಿದೆ. ಸಿಆರ್ಝಡ್ ನಿಯಮದಡಿ ಇಂತಹ ಶಾಶ್ವತ ನಿರ್ಮಾಣಕ್ಕೆ ಅವಕಾಶವಿಲ್ಲದಿದ್ದರೂ ಮಾಡಿದ್ದಾರೆ. ಎನ್ಜಿಟಿ ಆದೇಶದಂತೆ ಇದೆಲ್ಲವನ್ನೂ ತೆರವುಗೊಳಿಸಿ ಪರಿಸರ ಉಳಿಸುವ ಕಾರ್ಯಕ್ಕೆ ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.ಸಿಆರ್ಝಡ್ ವ್ಯಾಪ್ತಿಯಲ್ಲಿ ಬಂದರು, ಜೆಟ್ಟಿಗಳು, ಕ್ವೇಗಳು, ಸವೆತ ನಿಯಂತ್ರಣ ಕ್ರಮಗಳು, ಬ್ರೇಕ್ ವಾಟರ್, ಪೈಪ್ಲೈನ್, ಲೈಟ್ ಹೌಸ್ಗಳು, ನ್ಯಾವಿಗೇಶನಲ್ ಸುರಕ್ಷತಾ ಸೌಲಭ್ಯಗಳು, ಕರಾವಳಿ ಪೊಲೀಸ್ ಠಾಣೆ ಮೊದಲಾದ ಕಾರ್ಯಾಚರಣೆ ನಡೆಸಲು ಅವಕಾಶವಿದೆ. ಆದರೆ ಸೈಕಲ್ ಟ್ರ್ಯಾಕ್ನಂತಹ ಯೋಜನೆ ನಡೆಸುವಂತಿಲ್ಲ. 2019ರ ಕಾನೂನು ಪ್ರಕಾರ ಮಾಡಬಹುದು ಎಂದು ಪ್ರತಿವಾದಿಗಳು ವಾದಿಸಬಹುದಾದರೂ ಸೈಕಲ್ ಟ್ರ್ಯಾಕ್, ನದಿ ತೀರದಿಂದ 10 ಮೀಟರ್ ದೂರದಲ್ಲಿ ಮಾಡಬೇಕು. ಆದರೆ ಇಲ್ಲಿ ಈ ಅಂತರವನ್ನೂ ಬಿಡದೆ ಕಾಮಗಾರಿ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.ಎನ್ಇಸಿಎಫ್ ಅಧ್ಯಕ್ಷ ಜೋಸನ್ ಡಿಸೋಜ ಇದ್ದರು.
ಎಮ್ಮೆಕೆರೆ ಈಜುಕೊಳ ವಿರುದ್ಧವೂ ದೂರುಎಮ್ಮೆಕೆರೆಗೆ ಮಣ್ಣು ಹಾಕಿ ನಿರ್ಮಾಣ ಮಾಡಲಾಗಿರುವ ಅಂತಾರಾಷ್ಟ್ರೀಯ ಈಜುಕೊಳವನ್ನು ಬಫರ್ ಝೋನ್ ನಿಯಮ ಉಲ್ಲಂಘಿಸಿ ಮಾಡಲಾಗಿದ್ದು, ಇದರ ವಿರುದ್ಧವೂ ರಾಷ್ಟ್ರೀಯ ಹಸಿರು ನ್ಯಾಯ ಪೀಠದಲ್ಲಿ ಎನ್ಇಸಿಎಫ್ನಿಂದ ದೂರು ದಾಖಲಿಸಲಾಗಿದ್ದು, ಏ.16ರಂದು ವಿಚಾರಣೆ ನಡೆಯಲಿದೆ ಎಂದು ಶಶಿಧರ ಶೆಟ್ಟಿ ತಿಳಿಸಿದರು.
