ಬೀದಿ ನಾಯಿಗಳ ನಿಯಂತ್ರಣಕ್ಕೆ ಇದೀಗ 8ನೇ ಬಾರಿ ಟೆಂಡರ್‌ ಆಹ್ವಾನ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ನಗರ ಸಭೆ ವ್ಯಾಪ್ತಿಯ ಬೀದಿ ನಾಯಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಬಿಸಿ (ಅನಿಮಲ್ ಬರ್ತ್ ಕಂಟ್ರೋಲ್) ಹಾಗೂ ಆ್ಯಂಟಿ ರೇಬಿಸ್‌ ಚುಚ್ಚುಮದ್ದು (ಎಆರ್‌ವಿ) ಕಾರ್ಯಕ್ರಮ ಅನುಷ್ಠಾನಕ್ಕೆ ಬರೋಬ್ಬರಿ 7 ಬಾರಿ ಟೆಂಡರ್‌ ಆಹ್ವಾನಿಸಿದರೂ ಅರ್ಹ ಯಾವುದೇ ಸಂಸ್ಥೆ ಮುಂದೆ ಬಂದಿಲ್ಲ.

- ಇದೀಗ 8ನೇ ಬಾರಿ ಟೆಂಡರ್‌ ಆಹ್ವಾನಿಸಲಾಗಿದೆ. ಭಾಗವಹಿಸಲು ಆ.14ರ ವರೆಗೆ ಕಾಲಾವಕಾಶ ನೀಡಲಾಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿ ಸಿದಂತೆ ಚಿಕ್ಕಮಗಳೂರು ನಗರ ಸಭೆಯಿಂದ ಈಗಾಗಲೇ 7 ಬಾರಿ ಎಬಿಸಿ ಹಾಗೂ ಎಆರ್‌ವಿ ಕಾರ್ಯಕ್ರಮ ಅನುಷ್ಠಾನಕ್ಕೆ ಟೆಂಡರ್‌ ಆಹ್ವಾನಿಸಿದೆ. ಆದರೆ, ಯಾವುದೇ ಅರ್ಹ ಸಂಸ್ಥೆ ಟೆಂಡರ್‌ನಲ್ಲಿ ಭಾಗಿಯಾಗಿಲ್ಲ. ಹೀಗಾಗಿ, ಬೀದಿ ನಾಯಿಗಳ ನಿಯಂತ್ರಣ ಮಾಡುವುದು ನಗರ ಸಭೆಗೆ ದೊಡ್ಡ ತಲೆನೋವಾಗಿದೆ.


2023 ನಂತರ ಎಬಿಸಿ ಆಗಿಲ್ಲ:

ಚಿಕ್ಕಮಗಳೂರು ನಗರ ಸಭೆ ವ್ಯಾಪ್ತಿಯಲ್ಲಿ ಒಟ್ಟು 6 ಸಾವಿರ ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಇದೀಗ ಸುಮಾರು 2 ಸಾವಿರ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಹಾಗೂ 1 ಸಾವಿರ ಬೀದಿ ನಾಯಿಗಳಿಗೆ ಆ್ಯಂಟಿ ರೇಬಿಸ್‌ ಚುಚ್ಚುಮದ್ದು ನೀಡುವ ಯೋಜನೆ ರೂಪಿಸಲಾಗಿದೆ.

2021 ಹಾಗೂ 2023ದಲ್ಲಿ ತಲಾ ಎರಡು ಸಾವಿರ ಬೀದಿ ನಾಯಿಗಳಂತೆ ಒಟ್ಟು ನಾಲ್ಕು ಸಾವಿರ ಬೀದಿ ನಾಯಿಗಳನ್ನು ಎಬಿಸಿ ಮಾಡಿಸಲಾಗಿತ್ತು. ಆ ಬಳಿಕ 2025ರಲ್ಲಿ 2 ಸಾವಿರ ಬೀದಿ ನಾಯಿಗಳಿಗೆ ಎಬಿಸಿ ಮಾಡಿಸುವುದಕ್ಕೆ ಟೆಂಡರ್‌ ಆಹ್ವಾನಿಸಿದರೂ ಯಾವೊಂದು ಸಂಸ್ಥೆ ಭಾಗವಹಿಸುತ್ತಿಲ್ಲ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.₹35 ಲಕ್ಷ ವೆಚ್ಚದಲ್ಲಿ ಎಬಿಸಿ: ಒಂದು ಸಾವಿರ ಗಂಡು ಹಾಗೂ ಒಂದು ಸಾವಿರ ಹೆಣ್ಣು ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸುವುದು. ಜತೆಗೆ ತಲಾ 500 ಬೀದಿ ನಾಯಿಗಳಿಗೆ ಆ್ಯಂಟಿ ರೇಬಿಸ್‌ ಚುಚ್ಚುಮದ್ದು ನೀಡುವುದಕ್ಕೆ ಒಟ್ಟು ₹35 ಲಕ್ಷ ರು. ಮೊತ್ತದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ.

--- ಬಾಕ್ಸ್‌ ---

ಬೀದಿ ನಾಯಿಗಳ ಆಶ್ರಯ ತಾಣಕ್ಕೆ ಎರಡು ಎಕರೆ

ಚಿಕ್ಕಮಗಳೂರು ನಗರದ ವ್ಯಾಪ್ತಿಯ ಬೀದಿ ನಾಯಿಗಳಿಗೆ ಆಶ್ರಯ ತಾಣ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಉಪ್ಪಳಿಯ ಸಮೀಪದಲ್ಲಿ 2 ಎಕರೆ ಜಾಗ ಮಂಜೂರು ಮಾಡಲಾಗಿದೆ. ಈ ಜಾಗದಲ್ಲಿ ಕಾಂಪೌಂಡ್‌ ಸೇರಿದಂತೆ ಇತರೆ ಕೆಲಸ ಕಾರ್ಯ ನಿರ್ವಹಿಸಬೇಕಾಗಿದೆ. ಸದ್ಯ ₹80 ಲಕ್ಷ ಅನುದಾನ ಲಭ್ಯವಿದೆ. ಯೋಜನಾ ವರದಿ ಸಿದ್ಧ ಪಡಿಸಿಕೊಂಡು ಬಾಕಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಚಿಕ್ಕಮಗಳೂರು ನಗರ ಸಭೆ ಆಯುಕ್ತ ಬಸವರಾಜ್‌ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.-- ಬಾಕ್ಸ್‌---ಚಿಕ್ಕಮಗಳೂರು ತಾಲೂಕಿನಲ್ಲಿ 2389 ನಾಯಿ ಕಚ್ಚಿದ ಪ್ರಕರಣಬೀದಿ ನಾಯಿಗಳು ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂಬುದಕ್ಕೆ ನಾಯಿಗಳು ಕಚ್ಚಿದ ಪ್ರಕರಣ ಹೆಚ್ಚಳವೇ ಸಾಕ್ಷಿ . ಕಳೆದ ಜನವರಿಯಿಂದ ಜುಲೈ ಅಂತ್ಯದ ವರೆಗೆ ಒಟ್ಟು 2389 ನಾಯಿ ಕಚ್ಚಿನ ಪ್ರಕರಣ ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿ ಯಲ್ಲಿ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಕರಣ ಸಂಖ್ಯೆ ದ್ವಿಗುಣಗೊಂಡಿದ್ದು, ಕಳೆದ 2025ರ ಇದೇ ಅವಧಿ ಯಲ್ಲಿ ಕೇವಲ 1056 ಪ್ರಕರಣ ಮಾತ್ರ ದಾಖಲಾಗಿದ್ದವು ಎಂದು ಆರೋಗ್ಯ ಇಲಾಖೆ ಮಾಹಿತಿಯಲ್ಲಿ ತಿಳಿದು ಬಂದಿದೆ.

(ಸೂಕ್ತ ಬೀದಿ ನಾಯಿಗಳ ಹಿಂಡಿನ ಫೋಟೋ ಬಳಸಿ)

( ಆಯುಕ್ತ ಬಸವರಾಜ್‌ ಫೋಟೋ ಇದೆ ಬಳಸಿ)