ಹುಟ್ಟೂರು ಎಂದಿಗೂ ಮರೆಯದಿರಿ: ಶಿವಾನಂದ ಹೆಬ್ಬಾರ

| Published : Feb 10 2025, 01:48 AM IST

ಸಾರಾಂಶ

ದೇವಸ್ಥಾನದ ಅಭಿವೃದ್ಧಿ ಹಣ ಕೊಟ್ಟರಷ್ಟೇ ಸಾಲದು. ಇಲ್ಲಿಗೆ ಬಂದು ತಮ್ಮ ಕೈಲಾದಷ್ಟರ ಮಟ್ಟಿಗೆ ಸೇವೆ ಮಾಡಿದರೆ ಪುಣ್ಯ ಸಿಗುತ್ತದೆ.

ಭಟ್ಕಳ: ಕಿತ್ರೆ ದೇವಿಮನೆಯ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಧಂತಿ ಮತ್ತು ರಥೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಶಿವಾನಂದ ಹೆಬ್ಬಾರ ಮುಲ್ಲೆಮಕ್ಕಿ ಮಾತನಾಡಿ, ಕಿತ್ರೆ ದೇವಿಮನೆ ಸಾಕಷ್ಟು ಅಭಿವೃದ್ಧಿ ಆಗಿದ್ದು, ಮತ್ತಷ್ಟು ಅಭಿವೃದ್ಧಿಗೆ ಹೊಸ ಕಮಿಟಿಗೆ ಸಹಕಾರ ನೀಡಬೇಕು.

ಊರಿನಿಂದ ಹೊರಗಿದ್ದವರು ದೇವಸ್ಥಾನದ ವರ್ಧಂತಿ, ರಥೋತ್ಸವಕ್ಕೆ ಆಗಮಿಸಬೇಕು. ಬೇರೆ ಬೇರೆ ಕಡೆ ಉದ್ಯೋಗದಲ್ಲಿದ್ದವರು ತಮ್ಮ ಹುಟ್ಟೂರು, ಕುಲದೇವಸ್ಥಾನ ಮತ್ತು ಸಮಾಜವನ್ನು ಎಂದಿಗೂ ಮರೆಯದೇ ಊರಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತಮ್ಮ ಮಕ್ಕಳು ಕುಟುಂಬದೊಂದಿಗೆ ಪಾಲ್ಗೊಳ್ಳುವಂತಾಗಬೇಕು. ಅಂದಾಗ ಮಾತ್ರ ಸಮಾಜದವರೊಂದಿಗೆ ಪ್ರೀತಿ, ವಿಶ್ವಾಸ, ಒಡನಾಟ ಮುಂದುವರಿಯಲು ಸಾಧ್ಯವಾಗುತ್ತದೆ ಎಂದರು.

ದೇವಿಮನೆಯ ಸಮನ್ವಯಧಿಕಾರಿ ವೇ.ಮೂ. ನೀಲಕಂಠ ಉಪಾಧ್ಯಾಯ ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ಹಣ ಕೊಟ್ಟರಷ್ಟೇ ಸಾಲದು. ಇಲ್ಲಿಗೆ ಬಂದು ತಮ್ಮ ಕೈಲಾದಷ್ಟರ ಮಟ್ಟಿಗೆ ಸೇವೆ ಮಾಡಿದರೆ ಪುಣ್ಯ ಸಿಗುತ್ತದೆ ಎಂದರು.

ದೇವಸ್ಥಾನ ತಾಂತ್ರಿಕ ವೇ.ಮೂ. ಅಮೃತೇಶ್ವರ ಭಟ್ಟ ಗೋಕರ್ಣ ಮಾತನಾಡಿ, ದೇವಿಮನೆ ಶಕ್ತಿ ಕ್ಷೇತ್ರವಾಗಿದ್ದು, ಇಂತಹ ದೇವಸ್ಥಾನವನ್ನು ಪಡೆದಿರುವುದೇ ಈ ಭಾಗದ ಭಕ್ತರ ಪುಣ್ಯ. ದೇವಸ್ಥಾನದ ಇನ್ನಷ್ಟು ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವೆಂದರು. ಸನ್ಮಾನ ಸ್ವೀಕರಿಸಿದ ಡಾ. ಲಿಂಗಪ್ರಸಾದ ಮಾತನಾಡಿದರು.

ಮಾಜಿ ಸಮನ್ವಯಧಿಕಾರಿ ಎಂ.ಎಂ. ಹೆಬ್ಬಾರ, ರಾಧಾಕೃಷ್ಣ ಬೆಂಗಳೂರು, ಭವತಾರಿಣಿ ವಲಯದ ಮಾತೃ ವಿಭಾಗದ ಮುಖ್ಯಸ್ಥೆ ಗಾಯತ್ರಿ ಹೆಬ್ಬಾರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಧಕರಾದ ಡಾ. ಲಿಂಗಪ್ರಸಾದ, ಶ್ರೀರಕ್ಷಾ ಗಜಾನನ ಹೆಬ್ಬಾರ, ಪೂರ್ಣ ಸದಾಶಿವ ಹೆಗಡೆ ಹಾಗೂ ಅಕುಲ್ ಗೊಂಡ ಅವರನ್ನು ಸನ್ಮಾನಿಸಲಾಯಿತು.

ದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭವತಾರಿಣಿ ಸೀಮಾ ಪರಿಷತ್ ಅಧ್ಯಕ್ಷ ವಿನಾಯಕ ಭಟ್ಟ ತೆಕ್ನಗದ್ದೆ ವಂದಿಸಿದರು. ಶುಭಾ ದೇಸಾಯಿ ನಿರೂಪಿಸಿದರು.ಉಮೇಶ ಭಟ್ಟ ಸಾಧಕರ ಪರಿಚಯ ಮಾಡಿದರು.

ಸವಾಲುಗಳ ಎದುರಿಸಲು ದೈಹಿಕ, ಮಾನಸಿಕ ಸದೃಢತೆ ಮುಖ್ಯ

ಶಿರಸಿ: ಆಧುನಿಕ ಸವಾಲುಗಳನ್ನು ಎದುರಿಸುವಲ್ಲಿ ಮಾನಸಿಕ ಹಾಗೂ ದೈಹಿಕ ಸದೃಡತೆ ಮುಖ್ಯ ಎಂದು ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ತಿಳಿಸಿದರು.ನಗರದ ಅರಣ್ಯ ಕಾಲೇಜಿನ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಸ್ಕೋಡ್‌ವೆಸ್ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಿತ್ಯ ಎಲ್ಲ ಕ್ಷೇತ್ರದಲ್ಲಿ ಪೈಪೋಟಿ ಎದುರಿಸಬೇಕಾದ ಸಂದರ್ಭ ಇರುವುದರಿಂದ ಮಾನಸಿಕ ಹಾಗೂ ದೈಹಿಕ ಕ್ರಿಯಾಶೀಲತೆಯನ್ನು ನಿರ್ವಹಿಸುವ ಮೂಲಕ ಉತ್ತಮ ಬದುಕು ರೂಪಿಸಬೇಕು ಎಂದರು.ಕ್ರೀಡಾ ಪ್ರಮಾಣವಚನ ಭೋಧಿಸಿ‌ ಮಾತನಾಡಿದ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ವಾಸುದೇವ, ಬದುಕಿನ‌ ಜಂಜಾಟದ ನಿರ್ವಹಣೆಯಲ್ಲಿ ಕ್ರೀಡಾ ಮನೋಭಾನೆ ರೂಪಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.ರಾಷ್ಟ್ರ‌ಪ್ರಶಸ್ತಿ ವಿಜೇತ ಎಸ್.ಎಸ್. ಭಟ್ ಲೋಕೇಶ್ವರ ಅವರು ಕ್ರೀಡಾಜ್ಯೋತಿ ಹಸ್ತಾಂತರಿಸಿ ಶುಭ ಕೋರಿದರು.ಸ್ಕೋಡ್‌ವೆಸ್ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ವಿ. ಖೂರ್ಸೆ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಕೆ.‌ಎನ್ ಹೊಸ್ಮನಿ, ವಕೀಲ ದಯಾನಂದ‌ ಅಗಾಸೆ ಸ್ಕೋಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಸರಸ್ವತಿ ಎನ್. ರವಿ ವಂದಿಸಿದರು.22 ಜಿಲ್ಲೆಗಳಿಂದ ಸುಮಾರು 250ಕ್ಕೂ ಅಧಿಕ ಸಿಬ್ಬಂದಿ ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್ ಸೇರಿ ಗ್ರಾಮೀಣ‌‌ ಕ್ರೀಡೆಗಳಾದ ಹಗ್ಗ ಜಗ್ಗಾಟ ವಿವಿಧ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದರು.