ಕನ್ನಡ ನಾಡು, ನುಡಿಯ ರಕ್ಷಣೆಗೆ ಕನ್ನಡ ಪರ ಸಂಘಟನೆಗಳ ಹೋರಾಟ ಅವಿಸ್ಮರಣೀಯವಾಗಿದ್ದು, ಇದೀಗ ಒಕ್ಕೂಟ ರಚಿಸುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅಭಿನಂದಿಸಿದರು.
ಕನ್ನಡಪ್ರಭ ವಾರ್ತೆ ಕೋಲಾರ
ಕನ್ನಡಪರ ಸಂಘಟನೆಗಳ ಒಕ್ಕೂಟದ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ನಗರದ ರೋಟರಿ ಭವನದಲ್ಲಿ ನಡೆಸಲಾಗಿದ್ದು, ನಾಡು, ನುಡಿ, ನೆಲ, ಜಲ ರಕ್ಷಣೆಗೆ ಸಂಘಟಿತ ಹೋರಾಟ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.ಪದಗ್ರಹಣ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಗೋಪಾಲಗೌಡ ಮಾತನಾಡಿ, ಕನ್ನಡ ನಾಡು, ನುಡಿಯ ರಕ್ಷಣೆಗೆ ಕನ್ನಡ ಪರ ಸಂಘಟನೆಗಳ ಹೋರಾಟ ಅವಿಸ್ಮರಣೀಯವಾಗಿದ್ದು, ಇದೀಗ ಒಕ್ಕೂಟ ರಚಿಸುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅಭಿನಂದಿಸಿದರು.
ಜಿಲ್ಲೆಗೆ ಹೊಸ ತೇರು ಬಂದಿದ್ದು, ಅದನ್ನು ಎಳೆದುಕೊಂಡು ಸಾಗುವ ಕೆಲಸ ನಿಮ್ಮೆಲ್ಲರ ಹೆಗಲ ಮೇಲೆ ಇರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಕೆಲಸಗಳನ್ನು ಮಾಡಿಕೊಂಡು ಹೋಗಬೇಕೆಂದು ತಿಳಿಸಿ, ನಾವು ಸಹ ಸದಾ ನಿಮ್ಮ ಜೊತೆಯಲ್ಲಿ ಇರುತ್ತೇವೆ ಎಂದು ಹೇಳಿದರು.ನೂತನ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್ ಮಾತನಾಡಿ, ಸಂಘಟನೆಯನ್ನು ಬಲಿಷ್ಠಗೊಳಿಸುವ ಮುಖಾಂತರ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಂಘಟನೆಯನ್ನು ಮಾಡಿ ಹಿರಿಯರ ಆಶೀರ್ವಾದದೊಂದಿಗೆ ಮುನ್ನಡೆಯಲಾಗುತ್ತದೆ, ಕನ್ನಡ ನಾಡು, ನುಡಿಗೆ ಧಕ್ಕೆ ಆದಾಗ ಎಲ್ಲ ಕನ್ನಡಪರ ಸಂಘಟನೆಗಳು ಒಗ್ಗೂಡಿ ಹೋರಾಟಗಳನ್ನು ಮಾಡುವುದರ ಮುಖಾಂತರ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.ಹಿರಿಯ ಹೋರಾಟಗಾರ ಅ.ಕೃ. ಸೋಮಶೇಖರ್, ಕನ್ನಡ ಪರ ಹೋರಾಟ ನಡೆದು ಬಂದ ಹಾದಿಯ ಕುರಿತು ವಿವರಿಸಿ, ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಎಷ್ಟೇ ಇರಲಿ, ಕನ್ನಡಕ್ಕಾಗಿ ಒಂದಾಗೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಜಯದೇವ ಪ್ರಸನ್ನ, ಕಲಾವಿದ ವಿಷ್ಣು ಮತ್ತಿತರರು ಪಾಲ್ಗೊಂಡು ಒಕ್ಕೂಟ ಸರಿಯಾದ ಹಾದಿಯಲ್ಲಿ ನಡೆಯಲಿ, ಕನ್ನಡ ನಾಡು, ನುಡಿಯ ಹೋರಾಟದಲ್ಲಿ ಮುಂಚೂಣಿಯಲ್ಲಿರಲಿ ಎಂದು ಹಾರೈಸಿದರು.ಪದಾಧಿಕಾರಿಗಳ ಪದಗ್ರಹಣ:
ಕನ್ನಡ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾಗಿ ಚಂಬೆ ರಾಜೇಶ್, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ತ್ಯಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀಸಾಗರ ಕೃಷ್ಣೇಗೌಡ, ಜಿಲ್ಲಾ ಉಪಾಧ್ಯಕ್ಷರಾಗಿ ರಾಮಾಂಜನಪ್ಪ, ಕನ್ನಡ ಮಿತ್ರ ವೆಂಕಟಪ್ಪ, ಸೋಮಶೇಖರ್, ಜಿಲ್ಲಾ ಖಜಾಂಚಿಯಾಗಿ ಚೇತನ್ ಬಾಬು, ಗೌರವ ಕಾರ್ಯದರ್ಶಿಯಾಗಿ ಎಂ. ನಾರಾಯಣಸ್ವಾಮಿ, ಬಾಬಣ್ಣ, ಗೌರವ ಸಂಘಟನಾ ಕಾರ್ಯದರ್ಶಿಯಾಗಿ ಶೇಷಾದ್ರಿ ಶಾಸ್ತ್ರಿ, ಗೌರವ ಸಂಚಾಲಕರಾಗಿ ನಾಗರಾಜ್, ಉಪೇಂದ್ರ, ಪ್ರಧಾನ ಸಂಚಾಲಕರಾಗಿ ಪ್ರಕಾಶ್, ಸಹ ಸಂಚಾಲಕರಾಗಿ ಪ್ರವೀಣ್ ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ವೆಂಕಟೇಶ್, ಪ್ರಧಾನ ಸಂಚಾಲಕರಾಗಿ ನಾ.ಮಂಜುನಾಥ್, ವೆಂಕಟಕೃಷ್ಣಪ್ಪ ಇವರನ್ನು ಆಯ್ಕೆ ಮಾಡಲಾಯಿತು.