ಸಂವಿಧಾನದ ಆಶಯ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಜಾತ್ಯತೀತತೆಯನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಪ್ರಾದೇಶಿಕ ರಾಜಕೀಯ ಪಕ್ಷ ಸ್ಥಾಪಿಸುವ ಚಿಂತನೆ ನಡೆದಿದ್ದು, ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ 25 ಸಾವಿರ ಜನರನ್ನು ಸೇರಿಸಿ ಪಕ್ಷದ ಅಧಿಕೃತ ಘೋಷಣೆ, ಚಿಹ್ನೆ ಹಾಗೂ ಬಾವುಟ ಬಿಡುಗಡೆಗೊಳಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಆಳಂದ ಸಂವಿಧಾನದ ಆಶಯ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಜಾತ್ಯತೀತತೆಯನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಪ್ರಾದೇಶಿಕ ರಾಜಕೀಯ ಪಕ್ಷ ಸ್ಥಾಪಿಸುವ ಚಿಂತನೆ ನಡೆದಿದ್ದು, ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ 25 ಸಾವಿರ ಜನರನ್ನು ಸೇರಿಸಿ ಪಕ್ಷದ ಅಧಿಕೃತ ಘೋಷಣೆ, ಚಿಹ್ನೆ ಹಾಗೂ ಬಾವುಟ ಬಿಡುಗಡೆಗೊಳಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ ಘೋಷಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಚೇತನ್‌ ನೇತೃತ್ವದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಯುವ ಮುಖಂಡರು, ಸಾಮಾಜಿಕ ಹೋರಾಟಗಾರರು, ವಿಚಾರವಂತರು, ಪ್ರಗತಿಪರರು ಹಾಗೂ ಸಮಾನ ಮನಸ್ಕರಿಗಾಗಿ ಆಯೋಜಿಸಿದ್ದ ರಾಜಕೀಯ ಮುನ್ನೋಟ ಸಭೆಯಲ್ಲಿ ಮಾತನಾಡಿದರು.ಹೊಸ ಪಕ್ಷವು ಯಾವುದೇ ಒಂದು ವರ್ಗ, ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗದೆ ಎಲ್ಲರ ಹಕ್ಕು, ಸಮಾನ ಅವಕಾಶ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ ಎತ್ತಲಿದೆ. ಜನರ ಸಮಸ್ಯೆಗಳನ್ನು ರಾಜಕೀಯ ವೇದಿಕೆಯ ಮೂಲಕ ಮುನ್ನೆಲೆಗೆ ತಂದು ಅವುಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ನಡೆಸಬೇಕಿದೆ. ಈ ಆಶಯ ಹೊಂದಿರುವ ಸಮಾನ ಮನಸ್ಕರು ಪಕ್ಷದೊಂದಿಗೆ ಕೈಜೋಡಿಸಬೇಕು ಎಂದು ಚೇತನ್ ಅಹಿಂಸಾ ಮನವಿ ಮಾಡಿದರು.

ಜನಪರ ಸಮಸ್ಯೆಗಳ ಕುರಿತು ಚರ್ಚೆ: ಸಭೆಯಲ್ಲಿ ತಾಲೂಕಿನ ಪ್ರಮುಖ ಸಮಸ್ಯೆಗಳು, ಜನರ ಮೂಲಅಗತ್ಯಗಳು, ಅಭಿವೃದ್ಧಿಗೆ ಎದುರಾಗಿರುವ ಸವಾಲುಗಳು ಹಾಗೂ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಮುಖಂಡರು ಸಮಗ್ರವಾಗಿ ಚರ್ಚಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಆಧರಿಸಿ ಹೋರಾಟ, ಜನಜಾಗೃತಿ ಹಾಗೂ ಸಂಘಟನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ರೂಪುರೇಷೆ ಸಿದ್ಧಪಡಿಸಲಾಯಿತು. ಮಲ್ಲಿಕಾರ್ಜುನ ಶ್ರೀಂಗೇರಿ, ಲಕ್ಷ್ಮೀಕಾಂತ ಭಜನ, ಮಹಾದೇವ ಕಾಂಬಳೆ, ಬಾಬುರಾವ್ ಬೀಳಗಿ, ಅಂಬೇಶ ದೇವನೂರ, ರಫೀಕ್ ಕಿಂಗ್, ರಫೀಕ್ ಮುಲ್ಲಾ, ಯು.ಕೆ. ಇನಾಮದಾರ, ಸಿದ್ಧಾರ್ಥ ಸಿಂಗೆ, ಅಕ್ಷಯ ಮಂಟಕಿ, ಸುಧಾಕರ ಮೊದಲೆ, ಕಲ್ಯಾಣಿ ತುಕಾಣಿ, ಅಪ್ಪು ಗೊಪ್ಪಾಳೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

-----ಫೋಟೊ--------

ಶೀರ್ಷಿಕೆ ೬ಎಎಲ್‌ಡಿ೧ಆಳಂದ ಪಟ್ಟಣದಲ್ಲಿ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ನೇತೃತ್ವದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು, ಸಾಮಾಜಿಕ ಹೋರಾಟಗಾರರ ಉಪಸ್ಥಿತಿಯಲ್ಲಿ ರಾಜಕೀಯ ಮುನ್ನೋಟ ಸಭೆ ನಡೆಯಿತು.