ಹೊಸ ವರ್ಷಾಚರಣೆ: ರೆಸಾರ್ಟ್‌ ಬಾಡಿಗೆ ಲಕ್ಷ ರು.!

| Published : Dec 31 2024, 01:03 AM IST

ಸಾರಾಂಶ

ಹೊಸವರ್ಷಾಚರಣೆಗೆ ಪ್ರವಾಸಿತಾಣ ಸಕಲ ರೀತಿಯಲ್ಲಿ ಸಜ್ಜಗೊಂಡಿದ್ದು, ಎಲ್ಲ ಕಡಲತೀರದ ಹೊಟೇಲ್, ರೆಸಾರ್ಟ್‌ಗಳನ್ನು ವಿದ್ಯುತ್ ದೀಪಾಲಂಕಾರ, ವಿಶೇಷ ಆಕರ್ಷಕ ಬಣ್ಣಗಳಿಂದ ಶೃಂಗರಿಸಲಾಗಿದೆ.

ಗೋಕರ್ಣ: ಹೊಸ ವರ್ಷಾಚರಣೆಗೆ ಗೋಕರ್ಣ ಸಜ್ಜಾಗುತ್ತಿದ್ದು, ವಸತಿಗೃಹದ ಒಂದು ದಿನದ ಬಾಡಿಗೆ ದರ ಒಂದು ಲಕ್ಷ ರು. ವರೆಗೂ ಏರಿಕೆಯಾಗಿದೆ!

ಹೊಸವರ್ಷಾಚರಣೆಗೆ ಪ್ರವಾಸಿತಾಣ ಸಕಲ ರೀತಿಯಲ್ಲಿ ಸಜ್ಜಗೊಂಡಿದ್ದು, ಎಲ್ಲ ಕಡಲತೀರದ ಹೊಟೇಲ್, ರೆಸಾರ್ಟ್‌ಗಳನ್ನು ವಿದ್ಯುತ್ ದೀಪಾಲಂಕಾರ, ವಿಶೇಷ ಆಕರ್ಷಕ ಬಣ್ಣಗಳಿಂದ ಶೃಂಗರಿಸಲಾಗಿದೆ.

ಈಗಾಗಲೇ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಮಂಗಳವಾರ ಮತ್ತಷ್ಟು ಹೆಚ್ಚಾಗಲಿದೆ. ಇಲ್ಲಿನ ಓಂ, ಕುಡ್ಲೆ, ಪ್ಯಾರಡೈಸ್, ಮುಖ್ಯಕಡಲತೀರ, ದುಬ್ಬನಸಶಿ, ಗಂಗಾವಳಿಯವರಿಗಿನ ಕಡಲ ತೀರಗಳ ರೆರ್ಸಾಟ್‌ಗಳು ಮುಂಗಡವಾಗಿ ಕಾಯ್ದಿರಿಸಿದ್ದು ಎಲ್ಲವೂ ಭರ್ತಿಯಾಗಿದೆ. ಇನ್ನೂ ಪೇಟೆಯಲ್ಲಿ ವಸತಿ ಗೃಹ , ಹೋಮ್ ಸ್ಟೇ ಸಹ ಜನರಿಂದ ತುಂಬಿದೆ.

ಡಿ.ಜೆ. ಡ್ಯಾನ್ಸ್‌ ಅಬ್ಬರ

ಹಲವು ಕಡೆ ಡಿ.ಜೆ. ಹಾಡಿಗೆ ಹೆಜ್ಜೆ ಹಾಕಲು ವೇದಿಕೆ ನಿರ್ಮಿಸಿದ್ದಾರೆ. ಇನ್ನೂ ಅನೇಕ ಕಡೆ ಪ್ರವಾಸಿಗರಿಗೆ ವಿಶೇಷ ಮನೋರಂಜನಾ ಚಟುವಟಿಕೆ ಆಯೋಜಿಸಿದ್ದಾರೆ. ಮಧ್ಯರಾತ್ರಿ ಆಗುತ್ತಿದ್ದಂತೆ ಕುಣಿದು ಕುಪ್ಪಳಿಸುವ ಕ್ಷಣಕ್ಕೆ ಅಣಿಯಾಗುತ್ತಿದ್ದಾರೆ.

ಆನ್ ಲೈನ್ ಬುಕಿಂಗ್ ರೇಟ್ ಹೈ

ಡಿ. 28ರಿಂದ ಜ. 1ನೇ ತಾರೀಖಿನ ವರೆಗೆ ಇಲ್ಲಿನ ರೆಸಾರ್ಟ್‌, ವಸತಿ ಗೃಹದಲ್ಲಿ ಯಾವುದೇ ಕೊಠಡಿ ದೊರೆಯುತ್ತಿಲ್ಲ. ಸಾಮಾನ್ಯ ಪ್ರವಾಸಿಗ ಬಂದರೆ ಬಸ್ ನಿಲ್ದಾಣ, ಇಲ್ಲವೇ ರಸ್ತೆ ಅಂಚಿನಲ್ಲಿ ರಾತ್ರಿ ಕಳೆಯಬೇಕಿದೆ. ಮುಂಗಡವಾಗಿ ಕಾಯ್ದಿರಿಸಿದ ಹಲವು ರೆಸಾರ್ಟ್‌ಗಳನ್ನು ಆನ್‌ಲೈನ್‌ನಲ್ಲಿ ಹುಡುಕುತ್ತ ಸಾಗಿದರೆ, ಕನಿಷ್ಠ ಐದು ಸಾವಿರದಿಂದ ಒಂದು ಲಕ್ಷದ ವರೆಗೆ ಒಂದು ದಿನಕ್ಕೆ ಬಾಡಿಗೆ ನಿಗದಿಯಾಗಿದ್ದು, ಕೇವಲ ಒಂದೇ ಕೊಠಡಿ ಲಭ್ಯವಿದ್ದು, ಬೇಕಿದ್ದರೆ ಈಗಲೇ ಬುಕಿಂಗ್ ಮಾಡಿ ಎಂಬ ಮಾಹಿತಿ ದೊರೆಯುತ್ತಿದೆ. ಮಿರ್ಜಾನ್‌ನಿಂದ ಗೋಕರ್ಣದ ವರೆಗೆ ಎಲ್ಲೆಡೆ ವಸತಿ ಗೃಹ, ಹೋಮ್ ಸ್ಟೇ ಆಗಿದ್ದರೂ ಎಲ್ಲಿಯೂ ಒಂದು ಕೊಠಡಿ ಈ ದಿನಗಳಲ್ಲಿ ದೊರೆಯುತ್ತಿಲ್ಲ. ಅಂದರೆ ಪ್ರವಾಸಿಗರ ಭೇಟಿ ಸಂಖ್ಯೆ ಅದೆಷ್ಟು ಹೆಚ್ಚಾಗಿದೆ ಎಂಬುದು ತಿಳಿಯುತ್ತದೆ.

ದರ ಹೆಚ್ಚಳದ ಬಗ್ಗೆ ವಸತಿ ಗೃಹದವರ ಕೇಳಿದರೆ ವರ್ಷದಲ್ಲಿ ಒಮ್ಮೆ ಜನರು ಹೆಚ್ಚು ಬರುತ್ತಾರೆ. ನಂತರ ಎಲ್ಲವೂ ಖಾಲಿ, ಈ ಸಮಯದಲ್ಲಾದರೂ ವಹಿವಾಟು ನಡೆಸುತ್ತೇವೆ ಎನ್ನುತ್ತಾರೆ. ಒಟ್ಟಿನಲ್ಲಿ ಹೊಸ ನಿರೀಕ್ಷೆಯಲ್ಲಿ ಹೊಸ ವರ್ಷಕ್ಕೆ ಕಾಲಿಡಲು ಜನರು ಅದೆಷ್ಟೆ ಖರ್ಜಾದರೂ ಸಂಭ್ರಮಿಸಲು ಕಾಯುತ್ತಿದ್ದಾರೆ.

ಪೊಲೀಸ್ ಭದ್ರತೆ

ರಾತ್ರಿ ವೇಳೆ ಎಲ್ಲ ಕಡಲತೀರದಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಲಿದ್ದು, ಇದಕ್ಕಾಗಿ ಕಾರವಾರದಲ್ಲಿ ಮೀಸಲು ಪೊಲೀಸ್ ಪಡೆ ಹಾಗೂ ಎರಡು ಪಿಎಸ್‌ಐಗಳು, 20 ಹೋಮ್ ಗಾರ್ಡ್‌, 18 ಹೊರ ಠಾಣೆಯಿಂದ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಖಡಕ್ ಸೂಚನೆ

ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ಈಗಾಗಲೇ ತೆಗೆದುಕೊಂಡಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಹೊಟೇಲ್, ರೆಸಾರ್ಟ್ ಮಾಲಕರಿಗೂ ನಿಯಮದಂತೆ ಹೊಸವರ್ಷಾಚರಣೆಗೆ ಖಡಕ್ ಸೂಚನೆ ನೀಡಿದ್ದೇವೆ.

ವಸಂತ್ ಆಚಾರ್, ಪಿ.ಐ. ಗೋಕರ್ಣ ಪೊಲೀಸ್ ಠಾಣೆ