ಸಾರಾಂಶ
ರಾಣಿಬೆನ್ನೂರು: ಇಂದಿನ ದಿನಗಳಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗವು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪ್ರಾಮಾಣಿಕತೆ, ನೈತಿಕತೆ ಯಾವುದರಲ್ಲೂ ಕಂಡುಬರುತ್ತಿಲ್ಲದಿರುವುದು ವಿಷಾದನೀಯವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.ನಗರದ ಮೇಡ್ಲೇರಿ ರಸ್ತೆಯ ಆದಿಶಕ್ತಿ ದೇವಸ್ಥಾನದ ಸಮುದಾಯ ಭವನದಲ್ಲಿ ಗುರುವಾರ ಸಂಜೆ ರಾಜ್ಯ ಪತ್ರಿಕಾ ವಿತರಕರ ಹಾಗೂ ತಾಲೂಕು ಪತ್ರಿಕಾ ವಿತರಕರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ 3 ಅಂಗಗಳು ಸರಿಯಾಗಿ ಕೆಲಸ ಮಾಡದಿದ್ದಾಗ ಸರಿದಾರಿಗೆ ತರುವ ಕೆಲಸವನ್ನು ಪತ್ರಿಕಾ ರಂಗವು ಇನ್ನು ಮೇಲಾದರೂ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು.ತಾಂತ್ರಿಕ ಯುಗದಲ್ಲಿ ಪತ್ರಿಕೆಗಳ ಓದುಗರ ಸಂಖ್ಯೆ ಬಹಳಷ್ಟು ಕ್ಷೀಣಿಸುತ್ತಿದೆ. ಆನ್ಲೈನನಲ್ಲಿ ಓದುಗರ ಸಂಖ್ಯೆ ಹೆಚ್ಚಾಗುತ್ತಿದೆ. ಪತ್ರಿಕೆ ವಿತರಕರು ಹೊಸ ಹೊಸ ಕೌಶಲ್ಯ ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದರು.ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಪತ್ರಿಕೆಯ ಓದುಗರರಿಗೆ ತಲುಪಿಸುವ ಕಾರ್ಯ ಮಾಡುವ ವಿತರಕರ ಕಾರ್ಯ ಮಳೆ, ಚಳಿ, ಎನ್ನದೆ ಪ್ರತಿನಿತ್ಯ ಸಾಗುತ್ತಿದೆ. ಈ ನಿಟ್ಟಿನಲ್ಲಿ ಅವರನ್ನು ಗುರುತಿಸುವ ಕೆಲಸ ಸರ್ಕಾರಗಳು ಮಾಡಬೇಕು ಎಂದರು.ಶಹರ ಠಾಣೆಯ ಸಿಪಿಐ ಡಾ. ಶಂಕರ್.ಎಸ್. ಕೆ. ಮಾತನಾಡಿ, ಪತ್ರಿಕಾ ವಿತರಕರು ಹಾಗೂ ಪೊಲೀಸರ ನಡುವೆ ಇರುವ ಸಂಬಂಧ ಅವಿನಾಭಾವವಾದುದು. ಸೂರ್ಯೋದಯಕ್ಕೂ ಮುನ್ನ ಇವರುಗಳ ಕಾರ್ಯ ಯಾರಿಗೂ ಗೊತ್ತಾಗದು. ಅಂತಹ ಸೇವೆ ಮಾಡುವ ಎಲ್ಲರಿಗೂ ಸರ್ಕಾರದ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದರು.ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಿಕಾ ವಿತರಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಸಂಕಪ್ಪ ಮಾರನಾಳ, ತಾಲೂಕು ಅಧ್ಯಕ್ಷ ಪರಶುರಾಮ ಕಾಳೇರ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಪತ್ರಕರ್ತರಾದ ಎಂ. ಚಿರಂಜೀವಿ, ಮುಕ್ತೇಶ ಕೆ., ಕೆ.ಎಸ್. ನಾಗರಾಜ, ನಾಗರಾಜ ಹಾವನೂರು, ಬಸವರಾಜ ಸರೂರ, ಮಂಜುನಾಥ ಕುಂಬಳೂರ, ಸಂತೋಷ ಮಹಾಂತಶೆಟ್ಟರ, ಪತ್ರಿಕಾ ಏಜೆಂಟರಾದ ವಿ.ಎಸ್. ಹಿರೇಮಠ, ವಿನಾಯಕ ಸಾಗರ, ವಿತರಕರಾದ ಬಿ.ಪಿ. ಕಾಟೋಟಿ, ವೀರಪ್ಪ ಹಾವನೂರ, ಹರೀಶ ಬಳಿಗಾರ, ಮಧುಸೂದನ ಮಾಳೋದೆ, ಬೀರಪ್ಪ ಮುದ್ದಿ, ರವಿ ಹಾವನೂರು, ಮಣಿಕಂಠ ದೈವಜ್ಞ, ಅಜ್ಜಪ್ಪ ಕಾಂಬಳೆ, ವಾಸುದೇವ ಲದ್ವಾ, ಬಸವರಾಜ, ಪ್ರಕಾಶ ತೇರದಾಳ, ಅಜಯ್ ಏಕಬೋಟೆ, ಆಕಾಶ, ಕೃಷ್ಣ ಸಾಳೇರ, ನಾಗರಾಜ ಕುನ್ನಬೇವು, ಪಾಂಡುರಂಗ ಲದ್ವಾ, ಚಿಕ್ಕಪ್ಪ ಬಜ್ಜಿ ಸೇರಿದಂತೆ ಮತ್ತಿತರರು ಇದ್ದರು.