- ಚನ್ನಗಿರಿಯಲ್ಲಿ ಪತ್ರಿಕಾ ದಿನಾಚರಣೆ । ಪದಾಧಿಕಾರಿಗಳ ಸೇವಾ ಸ್ವೀಕಾರ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಕ್ರೈಸ್ತ ಮಿಷನರಿಗಳು ತಮ್ಮ ಧರ್ಮ ಪ್ರಚಾರ ಮಾಡಲು ಮುದ್ರಣ ಮಾಧ್ಯಮ ಬಳಸುತ್ತಿದ್ದರು. ಅನಂತರ ಮಹಾತ್ಮ ಗಾಂಧಿ ಸ್ವಾತಂತ್ರ್ಯ ಚಳವಳಿಯಲ್ಲಿ ಮುದ್ರಣ ಮಾಧ್ಯಮಗಳ ಮೂಲಕ ಜನಜಾಗೃತಿ ಮೂಡಿಸಲು ಬಳಸಿಕೊಳ್ಳುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಗಳ ನಡುವೆ ಪೈಪೋಟಿ ನಡೆಯುತ್ತಿದೆ ಎಂದು ಪತ್ರಕರ್ತ ಚಂದ್ರಹಾಸ ಹಿರೇಮಳಲಿ ಹೇಳಿದರು.ಇಲ್ಲಿನ ವಾಲ್ಮೀಕಿ ಸಮುದಾಯ ಭವನದಲ್ಲಿ ಮಂಗಳವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ತಾಲೂಕು ಪತ್ರಕರ್ತ ಸಂಘದ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ದೃಶ್ಯಮಾಧ್ಯಮಗಳು ಎಷ್ಟೇ ಮುಂದುವರೆದು ಸುದ್ದಿಗಳ ಬಿತ್ತರಿಸಿದರೂ ನೈಜತೆಯನ್ನು ಕಳೆದುಕೊಂಡಿವೆ. ಆದರೆ, ಮುದ್ರಣ ಮಾಧ್ಯಮಗಳ ಸುದ್ದಿ ಜನರಲ್ಲಿ ನಂಬಿಕೆ ಹೆಚ್ಚಿಸಿವೆ ಎಂದರು.
ರಾಜ್ಯ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, 1932ರಲ್ಲಿ ಡಿ.ವಿ.ಗುಂಡಪ್ಪ ಅವರು ಸ್ಥಾಪಿಸಿದ ರಾಜ್ಯ ಪತ್ರಕರ್ತರ ಸಂಘಟನೆಗೆ 95 ವರ್ಷಗಳ ಇತಿಹಾಸವಿದೆ. ಈ ಸಂಘಟನೆಗೆ ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಆಯ್ಕೆಯಾದ ಮೇಲೆ ಪತ್ರಕರ್ತರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸವಾಗುತ್ತಿದೆ ಎಂದರು.
ಜೀವ ವೈವಿಧ್ಯ ನಿಗಮದ ಅಧ್ಯಕ್ಷ ವಡ್ನಾಳ್ ಜಗದೀಶ್, ತಾಲೂಕು ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್, ರೈತ ಮುಖಂಡ ತೇಜಸ್ವಿ ವಿ. ಪಟೇಲ್ ಮಾತನಾಡಿದರು. ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪತ್ರಕರ್ತ ಟಿ.ಎನ್.ಜಗದೀಶ್ ಅವರಿಗೆ ಕೆಳದಿ ಚನ್ನಮ್ಮ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುಸ್ಕಾರವನ್ನು ನೀಡಿ ಗೌರವಿಸಲಾಯಿತು.ಸಂಘದ ಹಿರಿಯ ಪತ್ರಕರ್ತರಾದ ವೀರೇಶ್ ಪ್ರಸಾದ್, ಎಚ್.ಕುಮಾರ್, ಸಿರಾಜ್ ಅಹಮದ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಟಿ.ಮಹಾರುದ್ರಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಎನ್.ಜೆ.ನಾಗರಾಜ್, ಪುರಸಭೆ ಮುಖ್ಯಾಧಿಕಾರಿ ಜೆ.ವಿ.ಮಂಜುನಾಥ್, ಬಿಇಒ ಜಯಪ್ಪ, ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಬದರೀನಾಥ್, ಜೆ.ಎಸ್.ವೀರೇಶ್, ಜಿಲ್ಲಾ ನಿರ್ದೇಶಕ ಕೆ.ಬಿ.ರಘುಪ್ರಸಾದ್, ಎಸ್.ಜೆ.ಕಿರಣ್, ಸುರೇಶ್ ಕುಣಿಬೆಳಕೆರೆ, ಚಿದಾನಂದ್, ಅಣ್ಣೋಜಿರಾವ್, ಎಂ.ಬಿ.ನಾಗರಾಜ್, ಬಾ.ರಾ.ಮಹೇಶ್, ಪ್ರಸನ್ನ, ಲಿಂಗರಾಜ್, ಸತೀಶ್ ಎಂ.ಪವಾರ್ ಇತರರು ಹಾಜರಿದ್ದರು.
- - -28ಕೆಸಿಎನ್ಜಿ2: ಪತ್ರಕರ್ತ ಟಿ.ಎನ್.ಜಗದೀಶ್ ಅವರಿಗೆ ಕೆಳದಿ ರಾಣಿ ಚನ್ನಮ್ಮ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.