ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕ, ಸಂತ ಜೊಸೆಫರ ಪದವಿ ಕಾಲೇಜು ಹಾಗೂ ಮಡಿಕೇರಿ ರಕ್ತನಿಧಿ ಕೇಂದ್ರಗಳ ಆಶ್ರಯದಲ್ಲಿ ಸ್ಥಳೀಯ ಸಂತ ಜೊಸೆಫರ ಪದವಿ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಮತ್ತು ರಕ್ತದಾನ ಶಿಬಿರ ಶನಿವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕ, ಸಂತ ಜೊಸೆಫರ ಪದವಿ ಕಾಲೇಜು ಹಾಗೂ ಮಡಿಕೇರಿ ರಕ್ತನಿಧಿ ಕೇಂದ್ರಗಳ ಆಶ್ರಯದಲ್ಲಿ ಸ್ಥಳೀಯ ಸಂತ ಜೊಸೆಫರ ಪದವಿ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಮತ್ತು ರಕ್ತದಾನ ಶಿಬಿರ ಶನಿವಾರ ನಡೆಯಿತು. ತಾಪಂ ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿಕೊಂಡಿರುವ ಪತ್ರಿಕಾ ರಂಗ ಸಮಾಜದಲ್ಲಿ ಪ್ರಮುಖ ಅಂಗವಾಗಿದೆ. ದೇಶದ ಆಡಳಿತ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹೆಚ್ಚಿನ ಜನರು ಇಂದಿಗೂ ಪ್ರತಿದಿನ ಪತ್ರಿಕೆಯೊಂದಿಗೆ ದಿನಚರಿ ಆರಂಭಿಸುತ್ತಿದ್ದಾರೆ. ನಮ್ಮ ಜೀವನದ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿರುವ ಪತ್ರಿಕೆಯನ್ನು ಎಲ್ಲರೂ ಓದುವ ಮೂಲಕ ನಮ್ಮ ಜೀವನವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ರವಿ ಕರುಂಬಯ್ಯ ಮಾತನಾಡಿ, ರಕ್ತಕ್ಕೆ ಪರ್ಯಾಯವಾಗಿ ಇಂದಿಗೂ ಯಾವುದೇ ರಕ್ತವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಮಾನವನ ರಕ್ತವೇ ಪ್ರಮುಖವಾಗಿದೆ. ದಾನ ಮಾಡಿದ ರಕ್ತ ವಾರದೊಳಗೆ ಮರು ಪೂರಣವಾಗುತ್ತದೆ. ಒಬ್ಬರು ನೀಡಿದ ರಕ್ತದಿಂದ ಕನಿಷ್ಠ ಮೂರು ಜೀವ ಉಳಿಸಲು ಸಾಧ್ಯ. ರಕ್ತದಾನದಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಬದಲಿಗೆ ನಮ್ಮ ಆರೋಗ್ಯ ಸುಧಾರಣೆಯಾಗುವುದು ಎಂದರು.

ಸಂತ ಜೊಸೆಫರ ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆಂಟ್, ರೆ.ಫಾ. ಅವಿನಾಶ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ದಿನಪತ್ರಿಕೆಗಳು ಸಮಾಜದ ಕಣ್ಣು ಕಿವಿ ಇದ್ದ ಹಾಗೆ. ಅದು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಸರಿ ದಾರಿಯಲ್ಲಿ ಸಮಾಜ ಮುನ್ನೆಡೆಯಲು ಕೆಲಸ ಮಾಡುವ ಮೂಲಕ, ಸಮಾಜಕ್ಕೆ ಒಳಿತನ್ನು ಮಾಡುತ್ತಿದೆ ಎಂದರು. ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಚ್.ಆರ್. ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಜನಪದ ಪರಿಷತ್ ಅಧ್ಯಕ್ಷ ಕೆ.ಎ. ಪ್ರಕಾಶ್, ಕೊಡಗು ಪತ್ರಕರ್ತರ ಸಂಘದ ಉಪಾಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ, ಜಿಲ್ಲಾ ಕ್ಷೇಮ ನಿಧಿ ಅಧ್ಯಕ್ಷ ಜಿ.ವಿ. ರವಿ ಕುಮಾರ್, ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ. ಮುರಳೀಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಘದ ಸಹ ಕಾರ್ಯದರ್ಶಿ ಪ್ರಸಾದ್ ಸಂಪಿಗೆ ಕಟ್ಟೆ, ಹಿರಿಯ ಪತ್ರಕರ್ತ ವಿನ್ಸೆಂಟ್ ಮತ್ತಿತರರು ಇದ್ದರು.ಹಿರಿಯ ಪತ್ರಕರ್ತ ಸಯ್ಯದ್ ಇರ್ಫಾನ್, ಕನ್ನಡ ಸಿರಿ ಸ್ನೇಹ ಬಳಗದ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಡಿ.ಪಿ. ಲೋಕೇಶ್ ಅವರನ್ನು ಸನ್ಮಾನಿಸಲಾಯಿತು.