ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿ ಮರಿಚಿಕೆಯಾಗಿದೆ. ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಮೂಡಿಗೆರೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿ ಮರಿಚಿಕೆಯಾಗಿದೆ. ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟಣದ ರಸ್ತೆ ನೋಡೋಕೆ ಆಗುತ್ತಿಲ್ಲ. ಟ್ರಾಫಿಕ್ ಸಮಸ್ಯೆ ಬಿಗಡಾಯಿಸುತ್ತಲೇ ಇದೆ. ಕಳೆದ 3 ವರ್ಷದಿಂದ 173 ಮತ್ತು 73 ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಬಗ್ಗೆ ಜನರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ನಾವು ಕೊಡಬೇಕಾದ ಸಹಕಾರ ಎಲ್ಲವೂ ನೀಡುತ್ತಿದ್ದರೂ ರಸ್ತೆ ವಿಸ್ತರಣೆ ತಡವಾಗುತ್ತಿದೆ. ಎಲ್ಲಾ ತೊಡಕುಗಳನ್ನು ಬಗೆಹರಿಸಿ ಶೀಘ್ರದಲ್ಲೇ ರಸ್ತೆ ವಿಸ್ತರಣೆಗೆ ಕ್ರಮ ವಹಿಸಬೇಕೆಂದು ಹೆದ್ದಾರಿ ಪ್ರಾಧಿಕಾರ ಅಧಿಕಾರಿ ಚಿಂತಾಮಣಿ ಕಾಂಬ್ಳೆ ಅವರಿಗೆ ತಾಕೀತು ಮಾಡಿದರು.

ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಈ ಬಾರಿ ನೀರಿನ ಸಮಸ್ಯೆ ಯಾವ ಗ್ರಾಮದಲ್ಲೂ ಬಾರದಂತೆ ನಿಗಾ ವಹಿಸಬೇಕು. ಪಿಡಬ್ಲೂಡಿ ಇಲಾಖೆ ರಸ್ತೆಗೆ ₹30 ಕೋಟಿ ಟೆಂಡರ್ ಆಗಿರುವ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ₹19.5 ಕೋಟಿ ಬಾಕಿ ಇರುವ ಟೆಂಡರ್ ಪ್ರಕ್ರಿಯೆ ನಡೆದ ಬಳಿಕ ತ್ವರಿತವಾಗಿ ಕೆಲಸ ಪ್ರಾರಂಭಿಸಬೇಕು. ಅಲ್ಲದೇ ಎಲ್ಲಾ ಇಲಾಖೆ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಮುಂದಿನ ಕೆಡಿಪಿ ಸಭೆಯೊಳಗೆ ಮುಕ್ತಾಯಗೊಳಿಸಬೇಕು ಎಂದು ಸೂಚಿಸಿದರು.

ಎನ್.ಆರ್.ಪುರದಲ್ಲಿ ಮಂಗನ ಕಾಯಿಲೆ ಕಂಡು ಬಂದಿದೆ. ಹಾಗಾಗಿ ಕ್ಷೇತ್ರದಲ್ಲಿ ಆರೋಗ್ಯ ಇಲಾಖೆ ಮುನ್ನಚ್ಚರಿಕೆ ಕ್ರಮ ವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ನೀಗಿಸುವ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದರು.

ಕಳಸದಲ್ಲಿ ಹಾಸ್ಟಲ್‌ ನಿರ್ಮಿಸಲು ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಕಿ ಇರುವ ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಜಾಗ ಮೀಸಲಿರಿಸಲು ಕ್ರಮ ವಹಿಸಲಾಗುವುದು. ಶಾಲೆ ದುರಸ್ತಿಗೆ ಅನುದಾನ ಬಂದಿದೆ. ಬೇಸಿಗೆ ರಜೆ ಅಂತ್ಯದೊಳಗೆ ಮಳೆಗಾಲದಲ್ಲಿ ಯಾವುದಾದರೂ ಕುಸಿಯುವ ಹಂತದಲ್ಲಿರುವ ಶಾಲೆಗಳಿದ್ದರೆ ಮಾಹಿತಿ ಪಡೆದು ತನಗೆ ತಿಳಿಸಬೇಕು. ಮಳೆ ಪ್ರಾರಂಭಗೊಳ್ಳುವ ಮುನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ದುರಸ್ತಿ ಕಾರ್ಯ ಬೇಸಿಗೆ ರಜೆಯಲ್ಲಿ ಪೂರ್ಣಗೊಳಿಸಬೇಕೆಂದು ಬಿಇಒ ಮೀನಾಕ್ಷಿ ಅವರಿಗೆ ತಾಕೀತು ಮಾಡಿದರು.ಮೂಡಿಗೆರೆ ತಾಪಂ ಇಒ ದಯಾವತಿ, ಕಳಸ ತಾಪಂ ಇಒ ಸುದೀಪ್, ಮೂಡಿಗೆರೆ ತಹಸೀಲ್ದಾರ್ ಎಸ್.ಅಶ್ವಿನಿ, ಕಳಸ ತಹಸೀಲ್ದಾರ್ ಶಾರದ, ಆಡಳಿತಾಧಿಕಾರಿ ಆನಂದ್, ಕೆಡಿಪಿ ಸದಸ್ಯರಾದ ರವಿ ಕುನ್ನಳ್ಳಿ, ಸುರೇಂದ್ರ ಉಗ್ಗೆಹಳ್ಳಿ, ಸಂಪತ್ ಬಿಳಗುಳ, ರಫೀಕ್ ಕಳಸ, ಅಶ್ವತ್ ಮಾಕೋನಹಳ್ಳಿ. ಪ್ರವೀಣ್, ಅಬ್ದುಲ್ ಶುಕೂರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.