ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸುಯೋಗ್ ಆಸ್ಪತ್ರೆಯು ರಾಜ್ಯದಲ್ಲಿ ಶ್ರೇಷ್ಠ ಮಟ್ಟದ ಆರೋಗ್ಯ ಸೇವೆಯನ್ನೇ ನೀಡುತ್ತಿದ್ದು, ಖಾಸಗಿ ವಲಯದಲ್ಲಿ ಬಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ಏಕೈಕ ವೈದ್ಯಕೀಯ ಸಂಸ್ಥೆಯಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ನಡೆದ ಉಚಿತ ಹೃದ್ರೋಗ ತಪಾಸಣೆ ಹಾಗೂ ಉಚಿತ ಆಂಜಿಯೋಗ್ರಾಂ ಮತ್ತು ಆಂಜಿಯೋಪ್ಲಾಸ್ಟಿ ಶಿಬಿರವನ್ನು ಉದ್ಘಾಟಿಸಿ, ವೈದ್ಯ ಸಾಹಿತಿ ಡಾ.ಎಸ್.ಪಿ. ಯೋಗಣ್ಣ ರಚಿಸಿರುವ ಹಾರ್ಟ್ ಅಟ್ಯಾಕ್ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಯಾವುದೇ ಸರ್ಕಾರದ ಅನುದಾನವಿಲ್ಲದೆ ಖಾಸಗಿ ವಲಯದ ಆಸ್ಪತ್ರೆಯಾದ ಸುಯೋಗ್ ಆಸ್ಪತ್ರೆ ಈ ರೀತಿಯ ಜನೋಪಯೋಗಿಯಾದ ಕೆಲಸಗಳನ್ನು ಮಾಡುತ್ತಿರುವುದು ಅಭಿನಂದನೀಯ. ಡಾ.ಎಸ್.ಪಿ. ಯೋಗಣ್ಣ ಅವರು ಎಲ್ಲಾ ವೈದ್ಯರಿಗಿಂತ ಭಿನ್ನ ಎಂದ ಅವರು ಸಾಮಾಜಿಕ ಕಾಳಜಿ, ಮಾನವೀಯ ಅಂತಃಕರಣ ಹೊಂದಿದ್ದು, ವೈದ್ಯ ಸಾಹಿತಿಯಾಗಿಯೂ ಹಲವಾರು ಕೃತಿಗಳನ್ನು ನಾಡಿಗೆ ನೀಡಿರುವುದು ಶ್ಲಾಘನೀಯ ಎಂದರು.ಇಂದು ಬಿಡುಗಡೆಗೊಂಡಿರುವ ಹಾರ್ಟ್ ಅಟ್ಯಾಕ್ ಕೃತಿ ಹೃದ್ರೋಗಿಗಳ ಪಾಲಿನ ಸಂಜೀವಿನಿ. ಪ್ರಸ್ತುತ ಕೃತಿಯಲ್ಲಿ ಹೃದ್ರೋಗಿಗಳಿಗೆ ಅವಶ್ಯಕವಿರುವ ಸಕಲ ಮಾಹಿತಿಗಳೂ ಇದ್ದು ಸಂಗ್ರಹ ಯೋಗ್ಯ ಕೃತಿಯಾಗಿದೆ ಎಂದು ಅವರು ಶ್ಲಾಘಿಸಿದರುರು.
ಇಂದು ವೈದ್ಯರು ಅತಿಯಾದ ಮಾನಸಿಕ ಒತ್ತಡದಿಂದ ನಲಗುತ್ತಿದ್ದು, ಇನ್ನಿತರರಿಗಿಂತ ವೈದ್ಯರ ಆಯಸ್ಸಿನ ಅವಧಿ ಕುಸಿಯುತ್ತಿರುವುದು ಆತಂಕಕಾರಿ. ವೈದ್ಯರು ಸಮುದಾಯದ ಆರೋಗ್ಯವನ್ನು ರಕ್ಷಿಸುತ್ತಿರುವ ವೈದ್ಯೋ ನಾರಾಯಣೋ ಹರಿ ಎಂಬ ಸೂಕ್ತಿಗೆ ಅನ್ವರ್ಥಪ್ರಾಯರು ಎಂದರು.ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಅಧ್ಯಕ್ಷತೆ ವಹಿಸಿದ್ದರು. ಆದಿಚುಂಚನಗಿರಿ ಶಾಖಾಮಠದ ಶ್ರೀ ಸೋಮನಾಥಾನಂದ ಸ್ವಾಮೀಜಿ, ಶ್ರೀರಾಮಕೃಷ್ಣ ಪರಮಹಂಸ ಸೇವಾ ಸಂಸ್ಥೆಯ ಗೌರವ ಅಧ್ಯಕ್ಷ ಡಿ. ಮಾದೇಗೌಡ, ವಿಶ್ರಾಂತ ಕುಲಪತಿ ಡಾ.ಎನ್.ಎಸ್. ರಾಮೇಗೌಡ, ಸುಯೋಗ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಸುಯೋಗ್ ಯೋಗಣ್ಣ, ಟ್ರಸ್ಟಿ ಸುಧಾ ಯೋಗಣ್ಣ, ವೈದ್ಯಕೀಯ ನಿರ್ದೇಶಕ ಡಾ.ಆರ್. ರಾಜೇಂದ್ರಪ್ರಸಾದ್, ನಿರ್ದೇಶಕರಾದ ಡಾ. ಸೀಮಾ ಯೋಗಣ್ಣ, ಡಾ. ಯಶಿತಾರಾಜ್, ಹೃದ್ರೋಗ ತಜ್ಞ ಡಾ. ರವಿಕುಮಾರ್ ಇದ್ದರು.