ಕಾಂಗ್ರೆಸ್‌ ಯಾವ ಶಾಸಕರೂ ಪಕ್ಷ ಬಿಡೋಲ್ಲ: ಸಚಿವ ಮಧು ಬಂಗಾರಪ್ಪ

| Published : Oct 29 2023, 01:01 AM IST

ಸಾರಾಂಶ

ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಇದೆ. ಮುಖ್ಯಮಂತ್ರಿ ವಿಚಾರವನ್ನು ಅವರೇ ತೀರ್ಮಾನಿಸುತ್ತಾರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಇನ್ನು ಮುಂದೆ ಬಿಜೆಪಿಯ ಎಲ್ಲ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್‌ಗಳು ಫ್ಲಾಪ್‌ ಆಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಕಾಂಗ್ರೆಸ್‌ ಶಾಸಕರಿಗೆ ₹50 ಕೋಟಿ ಆಫರ್ ನೀಡುತ್ತಿದ್ದಾರೆ. ಬಿಜೆಪಿಯ ಈ ತಂತ್ರಗಾರಿಕೆ ಹೊಸತೇನಲ್ಲ. ಆದರೆ, ಅದು ಅಟ್ಟರ್ ಫ್ಲಾಪ್ ಆಗಿದೆ. ಕಾಂಗ್ರೆಸ್‌ನ ಒಬ್ಬನೇ ಒಬ್ಬ ಶಾಸಕನೂ ಪಕ್ಷ ಬಿಡುವುದಿಲ್ಲ ಎಂದರು. ಮುಖ್ಯಮಂತ್ರಿ ಕೂಡ ಬದಲಾಗುವ ಸಾಧ್ಯತೆ ಇದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಇದೆ. ಮುಖ್ಯಮಂತ್ರಿ ವಿಚಾರವನ್ನು ಅವರೇ ತೀರ್ಮಾನಿಸುತ್ತಾರೆ. ನಾವ್ಯಾರೂ ಹೈಕಮಾಂಡ್ ವಿರುದ್ಧ ಮಾತನಾಡಲು ಹೋಗುವುದಿಲ್ಲ ಎಂದರು. ಎಸ್‌ಡಿಎಂಸಿ ರಾಜಕೀಯ ವಿರುದ್ಧ ಸೂಕ್ತ ಕ್ರಮ: ಎಸ್‌ಡಿಎಂಸಿಗಳು ಶಾಲೆಗಳಲ್ಲಿ ರಾಜಕೀಯ ತರುತ್ತಿದ್ದಾರೆ. ಕೆಲವು ಉಪನ್ಯಾಸಕಿಯರಿಗೆ ಕಿರುಕುಳ ನೀಡುತ್ತಿದ್ದಾರೆ. ಎಸ್‌ಡಿಎಂಸಿ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಶಾಲೆಗಳಲ್ಲೂ ನೂರಕ್ಕೆ ನೂರು ಎಸ್‌ಡಿಎಂಸಿ ಇರಲೇಬೇಕು. ಶಾಲಾ ಆಡಳಿತ ಮಂಡಳಿ ಏನಾದರೂ ರಾಜಕೀಯಕ್ಕಾಗಿ ದುರುಪಯೋಗಪಡಿಸಿಕೊಂಡರೆ ನಮ್ಮ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಎಸ್‌ಡಿಎಂಸಿಗಳು ಶಾಲೆಗೆ ಮಾತ್ರ ಸೀಮಿತವಾಗಿರಬೇಕು. ರಾಜಕೀಯ ಪ್ರೇರಿತವಾಗಿರಬಾರದು ಎಂದು ಹೇಳಿದರು. ನ.8ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ದೇಶದ ಹೆಸರಾಂತ 40ಕ್ಕೂ ಹೆಚ್ಚು ಕಂಪೆನಿಗಳು ಈ ಮೇಳದಲಿ ಭಾಗ ವಹಿಸಲಿವೆ. ಯುವಕ, ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. - - - ಬಾಕ್ಸ್‌ ಇಸ್ರೇಲ್ ಸಂತ್ರಸ್ತ ಸ್ವಾಮಿ ಜತೆ ಮಾತುಕತೆ ಇದೇ ಸಂದರ್ಭದಲ್ಲಿ ಇಸ್ರೇಲ್‌ನಲ್ಲಿ ಸಂತ್ರಸ್ತರಾದ ಶಿವಮೊಗ್ಗದ ಇಂದಿರಾ ಬಡಾವಣೆಯ ಯುವಕ ಸ್ವಾಮಿ ಎಂಬುವರ ದೂರವಾಣಿ ಕರೆ ಸ್ವೀಕರಿಸಿ ಸ್ಪಂದಿಸಿದ ಸಚಿವ ಮಧು ಬಂಗಾರಪ್ಪ ಅವರು, ರಾಜ್ಯ ಸರ್ಕಾರ ಯಾವುದೇ ರೀತಿಯ ನೆರವು ನೀಡಲು ಸಿದ್ಧವಿದೆ. ಆತಂಕಕ್ಕೆ ಒಳಗಾಗದೇ ಧೈರ್ಯವಾಗಿರುವಂತೆ ಮತ್ತು ಅಗತ್ಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂಬ ಭರವಸೆ ನೀಡಿದರು. - - - (-ಫೋಟೋ: ಮಧು ಬಂಗಾರಪ್ಪ)