ಸಾರಾಂಶ
ಬ್ಯಾಂಕ್ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಸಂಘಗಳಿಗೆ ವಿಳಂಬ ಮಾಡದೇ ಸಾಲ ಮಂಜೂರು ಮಾಡಲು ಜಿಪಂ ಸಿಇಒ ಶಶಿಧರ ಕುರೇರ ಸೂಚಿಸಿದರು.
ಬಾಗಲಕೋಟೆ: ಬ್ಯಾಂಕ್ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಸಂಘಗಳಿಗೆ ವಿಳಂಬ ಮಾಡದೇ ಸಾಲ ಮಂಜೂರು ಮಾಡಲು ಜಿಪಂ ಸಿಇಒ ಶಶಿಧರ ಕುರೇರ ಸೂಚಿಸಿದರು.
ಜಿಲ್ಲೆಯ ಬದಾಮಿ, ಬಾಗಲಕೋಟೆ, ಬೀಳಗಿ, ಗುಳೇದಗುಡ್ಡ, ಹುನಗುಂದ, ಇಳಕಲ್ಲ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್ ವ್ಯವಸ್ಥಾಪಕರುಗಳಿಗೆ ಎನ್ಆರ್ಎಲ್ಎಂ ಯೋಜನೆಯ ಸ್ವ-ಸಹಾಯ ಸಂಘಗಳ ಬ್ಯಾಂಕ್ ಲಿಂಕೇಜ್ ಹಾಗೂ ಎಂಟರರ್ಪ್ರೈಸ್ ಫೈನಾನ್ಸಿಂಗ್, ಸರ್ಕಾರದ ಯೋಜನೆಗಳ ಕುರಿತು ಜಿಪಂ ನೂತನ ಸಭಾಭವನದಲ್ಲಿ ಬೆಂಗಳೂರಿನ ಸಂಜೀವಿನಿ ಕೆಎಸ್ಆರ್ಎಲ್ಪಿಎನ್ ಜಿಪಂ ಹಾಗೂ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ತ್ವರಿತ ಸಾಲ ನೀಡುವದರಿಂದ ಮಹಿಳೆಯರು ಜೀವನೋಪಾಯ ಚಟುವಟಿಕೆ ಆರಂಭಿಸಲು, ಚಟುವಟಿಕೆ ಅಭಿವೃದ್ಧಿ ಪಡಿಸಲು ಅನುಕೂಲವಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ. ಪ್ರತಿ ಗ್ರಾಪಂನಲ್ಲಿ ಸಂಜೀವಿನಿ ಯೋಜನೆಯಡಿ ರಚಿಸಲಾದ ಒಕ್ಕೂಟಗಳಿವೆ. ಬ್ಯಾಂಕ್ ಮತ್ತು ಒಕ್ಕೂಟಗಳು ಸಹಯೋಗದೊಂದಿಗೆ ಗ್ರಾಮೀಣ ಭಾಗದ ಜನರ ಪಿಎಂಎಸ್ಬಿವೈ ಮತ್ತು ಪಿಎಂಜೆಜೆಬಿವೈ ವಿಮೆ ಮಾಡಿಸಲು ತಿಳಿಸಿದರು.ಜಿಪಂ ಯೋಜನಾ ನಿರ್ದೇಶಕ ಡಾ.ಪುನೀತ್ ಬಿ.ಆರ್, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕ ರಾಜಕುಮಾರ ಹೂಗಾರ, ರಾಜ್ಯ ಸಂಪನ್ಮೂಲ ವ್ಯಕ್ತಿ ಸುಂದರೇಶ ಆರ್ ಹಾಗೂ ಎನ್ಆರ್ಎಲ್ಎಂ ಜಿಲ್ಲಾ ಮತ್ತು ತಾಲೂಕು ಘಟಕದ ಸಿಬ್ಬಂದಿ ಇದ್ದರು.