ಕುಕನೂರು: ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಕೊಳಿಪೇಟೆಯ ರೈಲ್ವೆ ನಿಲ್ದಾಣದವರೆಗೂ ರಸ್ತೆ ಅಗಲಿಕರಣದ ಹೆಸರಲ್ಲಿ ಏಕಪಕ್ಷೀಯ ದಬ್ಬಾಳಿಕೆ ಮಾಡಿ ಒಂದೇ ಬದಿಯಲ್ಲಿ ರಸ್ತೆ ಅಗಲಿಕರಣ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶನಿವಾರ ಪಪಂ ಸಿಬ್ಬಂಧಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ತಾಲೂಕಾಧ್ಯಕ್ಷ ದೇವಪ್ಪ ಸೋಭಾನದ ಮಾತನಾಡಿ, ಗದಗ ರಸ್ತೆಯ ಅಗಲೀಕರಣ ಕಾರ್ಯದ ಹೆಸರಿನಲ್ಲಿ ರಸ್ತೆ ಎಡಭಾಗದ ಜನರ ಮೇಲಷ್ಟೇ ಅತಿಕ್ರಮಣದ ಆರೋಪ ಮಾಡಿ, ಅವರಿಗೆ ಮಾತ್ರ ನೋಟಿಸ್ ನೀಡಲಾಗಿದೆ. ರಸ್ತೆಯ ಎಡಭಾಗದಲ್ಲಿಯೇ ಅತಿಕ್ರಮಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಆದರೆ, ಅದಕ್ಕೆ ಸಂಬಂಧಿಸಿದ ಸರ್ಕಾರಿ ಅಧಿಕೃತ ದಾಖಲೆ ಇಲ್ಲ, ಸರ್ವೇ ವರದಿ,ಮಾಪನಗಳ ವಿವರ ತಕ್ಷಣವೇ ಬಹಿರಂಗಗೊಳಿಸಬೇಕು. ದಾಖಲೆಗಳಿಲ್ಲದೆ ನಡೆಯುವ ಯಾವುದೇ ಕ್ರಮ ನಾವು ಕಾನೂನುಬದ್ಧವಾಗಿ ಪ್ರಶ್ನಿಸಲು ಹಿಂಜರಿಯುವುದಿಲ್ಲ. ಇದಲ್ಲದೆ ರಸ್ತೆ ಬಲಭಾಗದಲ್ಲಿ ಅತಿಕ್ರಮಣ ಇಲ್ಲವೆಂದು ಹೇಳುತ್ತೀರುವುದು ಸಂಶಯಾಸ್ಪದವಾಗಿದೆ. ಎರಡು ಬದಿಗಳ ಮೇಲೂ ಸಮಾನ ಕಾನೂನು ಅನ್ವಯಿಸದಿದ್ದರೆ ಇದು ನೇರವಾಗಿ ನ್ಯಾಯ ವ್ಯವಸ್ಥೆಗೆ ಧಕ್ಕೆ ತರುವ ಕ್ರಮವೆಂದು ನಾವು ಪರಿಗಣಿಸುತ್ತೇವೆ. ರಸ್ತೆ ಅಗಲೀಕರಣದ ಸಂಪೂರ್ಣ ತಾಂತ್ರಿಕ ನಕ್ಷೆ, ಯೋಜನಾ ವಿವರ ಜತೆಗೆ ರಸ್ತೆಯ ಒಟ್ಟು ಅಗಲ ಎಷ್ಟು, ಮಧ್ಯ ಭಾಗದಿಂದ ಎರಡು ಬದಿಗಳ ಅಳತೆ ಎಷ್ಟು ತೆಗೆದುಕೊಳ್ಳಲಾಗಿದೆ. ಚರಂಡಿ ನಿರ್ಮಾಣದ ಸ್ಥಳ ಮತ್ತು ವಿನ್ಯಾಸ ಏನು ಮಾಹಿತಿ ಜಾಗದ ಮಾಲೀಕರ ತಿಳಿಸಬೇಕು. ರಸ್ತೆ ಅಗಲೀಕರಣ ಮಾಡುವದಕ್ಕೆ ನಮ್ಮ ರೈತಸಂಘದಿಂದ ಅಭ್ಯಂತರವಿಲ್ಲ, ಆದರೆ ಬರಿ ಎಡ ಭಾಗದಲ್ಲಿ ಮಾಡುವ ಉದ್ದೇಶ ಏನಿರಬಹುದು. ನಮ್ಮ ಮನವಿಗೆ ನ್ಯಾಯುತವಾಗಿ ಸ್ಪಂದಿಸಬೇಕು ಇಲ್ಲದಿದ್ದರೆ ಪಪಂ ಕಚೇರಿ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಯುವ ಮುಖಂಡ ಮಂಜುನಾಥ ನಾಡಗೌಡರ, ಗಂಗಾಧರ ನಾರಾಯಣಿ, ನಾಗಪ್ಪ ಕಲ್ಮನಿ, ರೈತ ಸಂಘದ ಬಸವರಾಜ ಸಬರದ, ಶರಣಪ್ಪ ಚಂಡೂರು, ಮಲ್ಲಪ್ಪ ಚಳಮರದ, ಹನಮಪ್ಪ ಮರಡಿ, ಈಶಪ್ಪ ಸಬರದ, ಬಸಪ್ಪ ಈಬೇರಿ, ಮಲ್ಲಪ್ಪ ಗೊರ್ಲೆಕೊಪ್ಪ, ದೇವಪ್ಪ, ಗವಿಸಿದ್ದಪ್ಪ ಜೇನಿನ, ಯಲ್ಲಪ್ಪ ಕಲಾಲ, ಶಿವಪ್ಪ ಯಡಿಯಾಪೂರ, ಹುಚ್ಚಿರಪ್ಪ ಹಳ್ಳಿಕೇರಿ, ರುದ್ರಪ್ಪ ಕೂಡ್ಲೂರು, ಚಂದ್ರಶೇಖರಯ್ಯ, ರಾಮಣ್ಣ, ಶಿವಪ್ಪ, ಈರಪ್ಪ ಸೇರಿದಂತೆ ಅನೇಕರು ಇದ್ದರು.